ಉರಗ ರಕ್ಷಕ ವಾವಾ ಸುರೇಶ್ ಆರೋಗ್ಯದಲ್ಲಿ ಕೊಂಚ ಚೇತರಿಕೆ
ತಿರುವನಂತಪುರಂ, ಫೆಬ್ರವರಿ 03; ಕೇರಳದ ಖ್ಯಾತ ಉರಗ ರಕ್ಷಕ ವಾವಾ ಸುರೇಶ್ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡಿಬಂದಿದೆ. ನಾಗರ ಹಾವು ರಕ್ಷಣೆ ಮಾಡುವಾಗ ಅದು ಅವರಿಗೆ ಕಚ್ಚಿದ್ದು, ಕೊಟ್ಟಾಯಂ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಾವಾ ಸುರೇಶ್ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡುಬಂದಿದೆ. ವೆಂಟಿಲೇಟರ್ ಸಹಾಯವಿಲ್ಲದೇ ಅವರು ಉಸಿರಾಡಲು ಆರಂಭಿಸಿದ್ದಾರೆ. ಆದರೆ ವೆಂಟಿಲೇಟರ್ ವ್ಯವಸ್ಥೆಯಲ್ಲಿಯೇ ಅವರನ್ನು ಇಟ್ಟು ಆರೋಗ್ಯದ ಬಗ್ಗೆ ನಿಗಾವಹಿಸಲಾಗಿದೆ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ.
ಕೆಲವು ಹೊತ್ತು ಅವರು ವೆಂಟಿಲೇಟರ್ ಸಹಾಯವಿಲ್ಲದೇ ಉಸಿರಾಟ ನಡೆಸಿದ್ದಾರೆ. ವೈದ್ಯರು ನೀಡುವ ಸೂಚನೆಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಶ್ವಾಸಕೋಶ, ಹೃದಯ ಸಹಜ ಸ್ಥಿತಿಗೆ ಮರಳುತ್ತಿರುವುದಕ್ಕೆ ಇದು ಸೂಚನೆಯಾಗಿದೆ. ವೈದ್ಯರ ತಂಡ ಅವರ ಆರೋಗ್ಯ ಬಗ್ಗೆ ನಿಗಾವಹಿಸಿದೆ ಎಂದು ಆಸ್ಪತ್ರೆ ಹೇಳಿದೆ.

ಹಾವು ಕಚ್ಚಿದ 24 ರಿಂದ 48 ಗಂಟೆಗಳ ಕಾಲ ಬಹಳ ಪ್ರಮುಖವಾದದ್ದು, ಆ ಅವಧಿಯಲ್ಲಿ ವೆಂಟಿಲೇಟರ್ ಸಹಾಯದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ವಾವಾ ಸುರೇಶ್ ಆರೋಗ್ಯದಲ್ಲಿನ ಚೇತರಿಕೆ ಅವರ ಮೆದುಳಿಗೆ ರಕ್ತ ಪೂರೈಕೆ ಸಹಜವಾಗಿ ಆಗುತ್ತಿದೆ ಎಂಬುದಕ್ಕೆ ಸೂಚನೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಜನವರಿ 31ರ ಸೋಮವಾರ ಕೊಟ್ಟಾಯಂ ಸಮೀಪ ನಾಗರ ಹಾವು ರಕ್ಷಣೆ ಮಾಡಿದ್ದರು ವಾವಾ ಸುರೇಶ್. ಹಾವನ್ನು ಚೀಲಕ್ಕೆ ಹಾಕುವಾಗ ಅದು ಅವರ ಬಲಗಾಲಿನ ಮೊಣಕಾಲಿನ ಸಮೀಪ ಕಚ್ಚಿತ್ತು. ತಕ್ಷಣ ಅವರನ್ನು ಕೊಟ್ಟಾಯಂ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆಸ್ಪತ್ರೆಗೆ ದಾಖಲು ಮಾಡುವಾಗ ವಾವಾ ಸುರೇಶ್ ಪ್ರಜ್ಞೆ ಕಳೆದುಕೊಂಡಿದ್ದರು, ಪರಿಸ್ಥಿತಿ ಗಂಭೀರವಾಗಿತ್ತು. ವೆಂಟಿಲೇಟರ್ ಸಹಾಯದಿಂದ ಅವರಿಗೆ ಚಿಕಿತ್ಸೆ ಆರಂಭಿಸಲಾಗಿತ್ತು. ಕೇರಳ ಸರ್ಕಾರದ ಸಚಿವ ವಿ. ಎನ್. ವಾಸನ್, "ವಾವಾ ಸುರೇಶ್ ಅವರ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ" ಎಂದು ಹೇಳಿದ್ದರು.
ವಾವಾ ಸುರೇಶ್ಗೆ ಹಾವು ಕಡಿದಿರುವುದು ಇದೇ ಮೊದಲಲ್ಲ. ಆದರೆ ಅವರು ಹಾವಿನ ರಕ್ಷಣೆ ಮಾಡುವ ಕಾಯಕ ನಿಲ್ಲಿಸಿರಲಿಲ್ಲ. ಸೋಮವಾರ ಕೊಟ್ಟಾಯಂನ ಕುರಿಚಿ ಬಳಿ ನಾಗರಹಾವು ಕಚ್ಚಿದ ಮೇಲೆಯೂ ಅದನ್ನು ಹಿಡಿದು ಚೀಲಕ್ಕೆ ತುಂಬಿ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದರು.
ಕೊಟ್ಟಾಯಂ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ ವಾವಾ ಸುರೇಶ್ ಹಾವು ಹಿಡಿಯುವ, ಅದು ಅವರಿಗೆ ಕಚ್ಚುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ವಾವಾ ಸುರೇಶ್ ಹೆಚ್ಚಿನ ಚಿಕಿತ್ಸೆಗೆ ಕೇರಳ ಸರ್ಕಾರ ಅಗತ್ಯ ವ್ಯವಸ್ಥೆ ಮಾಡಿದೆ.
ವಾವಾ ಸುರೇಶ್ ಕೇರಳದ ಖ್ಯಾತ ಉರಗ ರಕ್ಷಕರು. ಸಾಮಾಜಿಕ ಜಾಲತಾಣದಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಫೇಸ್ಬುಕ್ನಲ್ಲಿ ಅವರಿಗೆ 2.1 ಮಿಲಿನನ್ ಫಾಲೋಯರ್ಸ್ಗಳಿದ್ದಾರೆ. ಸಾಮಾಜಿಕ ತಾಲತಾಣಗಳಲ್ಲಿ ಅವರು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಕೇರಳದಲ್ಲಿ ವಾವಾ ಸುರೇಶ್ ಹೆಸರು ಕೇಳದ ವ್ಯಕ್ತಿಯೇ ಇಲ್ಲ ಎನ್ನಬಹುದು. ಹಾವು ಕಡಿತದ ಸುದ್ದಿ ತಿಳಿದ ಬಳಿಕ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಸಹ ಟ್ವೀಟ್ ಮಾಡಿದ್ದರು. ವಾವಾ ಸುರೇಶ್ ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದರು.
ವಾವಾ ಸುರೇಶ್ಗೆ ಹಲವು ಬಾರಿ ಹಾವು ಕಡಿದಿದೆ. 2020ರಲ್ಲಿ ತಿರುವನಂತಪುರಂನಲ್ಲಿ ಹಾವು ಕಡಿದಿತ್ತು. ಆಗ ಒಂದು ವಾರಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆದು ಗುಣಮುಖಗೊಂಡಿದ್ದರು. ಆದರೆ ಹಾವು ರಕ್ಷಣೆ ಮಾಡುವ ಕಾಯಕವನ್ನು ಅವರು ಸ್ಥಗಿತಗೊಳಿಸಿಲ್ಲ.
ಕೇರಳದ ಆರೋಗ್ಯ ಸಚಿವ ವೀಣಾ ಜಾರ್ಜ್ ವಾವಾ ಸುರೇಶ್ಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಆಸ್ಪತ್ರೆಯ ವೈದ್ಯರ ತಂಡದ ಜೊತೆ ಅವರು ಸಂಪರ್ಕದಲ್ಲಿದ್ದು, ಆರೋಗ್ಯದ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.












Click it and Unblock the Notifications