ಶಬರಿಮಲೆ ದೇಗುಲ ಹಿಂಸಾಚಾರ; 1400ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ
ತಿರುವನಂತಪುರಂ(ಕೇರಳ), ಅಕ್ಟೋಬರ್ 25: ಶಬರಿಮಲೆ ದೇಗುಲ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶ ವಿವಾದ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಮಹಿಳೆಯರು ದೇಗುಲ ಪ್ರವೇಶಿಸದಂತೆ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾಗವಹಿಸಿದ ಆರೋಪದಲ್ಲಿ ಗುರುವಾರದಂದು 1400ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಬರಿಮಲೆ ದೇವಳ ಹಾಗೂ ದೇವರ ವಿಚಾರವಾಗಿ ನಂಬಿಕೆ ಹೊಂದಿರುವ 'ಆಸ್ತಿಕ'ರ ವಿರುದ್ಧ ನಡೆದಿರುವ ಈ ದಾಳಿ ವಿರುದ್ಧ ದಕ್ಷಿಣದ ಎಲ್ಲ ರಾಜ್ಯಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಎಚ್ಚರಿಕೆ ನೀಡಿದೆ.
"ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಮುಖ ಕಾರ್ಯಾಚರಣೆಯಲ್ಲಿ 1407ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು, 258 ಪ್ರಕರಣಗಳನ್ನು ದಾಖಲಿಸಿದ್ದೇವೆ. ವಿಡಿಯೋ ಫೂಟೇಜ್ ಗಳ ಸಹಾಯದಿಂದ ವಶಕ್ಕೆ ಪಡೆದವರ ಪಾತ್ರವೇನು ಎಂಬುದನ್ನು ಪರಾಂಬರಿಸುತ್ತಿದ್ದೇವೆ" ಎಂದು ಹೆಸರು ಹೇಳಲು ಇಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಶಬರಿಮಲೆ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 28ರಂದು ತೀರ್ಪು ನೀಡಿತ್ತು. ಆ ತೀರ್ಪು ಹೊರಬಂದ ಮೇಲೆ ಮೊದಲ ಬಾರಿಗೆ ಅಕ್ಟೋಬರ್ 18ರಂದು ದೇಗುಲವನ್ನು ತೆರೆಯಲಾಯಿತು. ಆದರೆ ಭಾರೀ ಪ್ರಮಾಣದಲ್ಲಿ ಹಿಂಸಾಚಾರ- ಪ್ರತಿಭಟನೆ ನಡೆಸಿ, ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ. ಅದಕ್ಕಾಗಿಯೇ ಬಂದಿದ್ದ 12 ಮಹಿಳೆಯರು ಪ್ರತಿಭಟನೆಯ ಕಾರಣಕ್ಕೆ ವಾಪಸ್ ಆಗಿದ್ದರು.












Click it and Unblock the Notifications