ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೇರಳದಲ್ಲಿ "ನ್ಯಾಯ್" ಯೋಜನೆ ಶುರು; ರಾಹುಲ್
ಕೊಟ್ಟಾಯಂ, ಮಾರ್ಚ್ 23: ಕಾಂಗ್ರೆಸ್ನ ಪ್ರಸ್ತಾವಿತ ಕನಿಷ್ಠ ಆದಾಯ ಖಾತರಿ ಯೋಜನೆ (NYAY) ಕುರಿತು ಕೇರಳದಲ್ಲಿ ಮಾತನಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಪಕ್ಷ ಅಧಿಕಾರಕ್ಕೆ ಬಂದರೆ, ದಕ್ಷಿಣ ರಾಜ್ಯಗಳಲ್ಲಿ ನ್ಯಾಯ್ ಯೋಜನೆಯನ್ನು ಪರೀಕ್ಷಿಸಲಾಗುವುದು ಎಂದು ಭರವಸೆ ನೀಡಿದರು.
ಕೇರಳದ ಮನಾರ್ಕಡ್ ಪುತುಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಮಂಗಳವಾರ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, "ಈ ಯೋಜನೆಯ ಪರೀಕ್ಷೆ ಮಾಡಲು ನನ್ನ ಒಂದು ಸ್ವಾರ್ಥದ ಕಾರಣವಿದೆ. ಈ ಯೋಜನೆ ಯಶಸ್ವಿ ಆಗುತ್ತದೆ" ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಮುಖಂಡ ಉಮ್ಮನ್ ಚಾಂಡಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಚುನಾವಣಾ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಈ ಯೋಜನೆಯಡಿಯಲ್ಲಿ ವರ್ಷಕ್ಕೆ 72 ಸಾವಿರ ರೂಪಾಯಿಯು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹೋಗುತ್ತದೆ. ಈ ಹೊಸ ಆಲೋಚನೆಯನ್ನು ಮೊದಲು ಕೇರಳದಲ್ಲಿ ಪರೀಕ್ಷಿಸಬೇಕೆಂದಿದ್ದೇವೆ ಎಂದು ಹೇಳಿದರು.

2019ರ ಲೋಕಸಭಾ ಚುನಾವಣೆ ಸಂದರ್ಭ ರಾಹುಲ್ ಗಾಂಧಿ ಈ ಯೋಜನೆಯನ್ನು ಬಡತನದ ಮೇಲಿನ ದಾಳಿ ಎಂದು ಬಣ್ಣಿಸಿದ್ದರು. ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಈ ಯೋಜನೆಯ ಭರವಸೆಯನ್ನು ನೀಡಿದ್ದರ ಹೊರತಾಗಿಯೂ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಪಕ್ಷ ವಿಫಲವಾಗಿತ್ತು.
ಇದೀಗ ಮತ್ತೆ ಅದೇ ಭರವಸೆಯನ್ನು ಕೇರಳ ಜನರ ಮುಂದಿಟ್ಟಿದ್ದಾರೆ. ಈ ಯೋಜನೆ ಕೇರಳದಲ್ಲಿ ಕೆಲಸ ಮಾಡಿದರೆ, ದೇಶದ ಎಲ್ಲಾ ಕಾಂಗ್ರೆಸ್ ಆಡಳಿತ ರಾಜ್ಯಗಳಲ್ಲಿ ಜಾರಿಗೊಳಿಸಲಾಗುತ್ತದೆ. ಬಡತನದ ವಿರುದ್ಧ ಹೇಗೆ ಹೋರಾಡಬೇಕು ಎಂಬುದನ್ನು ಕೇರಳ ಇಡೀ ದೇಶಕ್ಕೆ ತೋರುತ್ತದೆ ಎಂದು ಹೇಳಿದರು.
ಸರ್ಕಾರ ರಚಿಸಿದ ಕೆಲವೇ ದಿನಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರುತ್ತೇವೆ. ಇದು ದಾನವಲ್ಲ, ನಾವು ಈ ಯೋಜನೆ ಮೂಲಕ ನಿಮ್ಮ ಜೇಬಿಗೆ ಹಣ ಹಾಕುತ್ತೇವೆ. ಪ್ರಧಾನಿ ಮೋದಿ ಅವರ ದೋಷಪೂರಿತ ಆರ್ಥಿಕ ನೀತಿಗಳಿಂದ ಕುಸಿದ ಭಾರತೀಯ ಆರ್ಥಿಕ ಸ್ಥಿತಿಯನ್ನು ಉನ್ನತೀಕರಿಸುವ ಏಕೈಕ ಮಾರ್ಗ ಇದಾಗಿದೆ ಎಂದಿದ್ದಾರೆ.
ಏಪ್ರಿಲ್ 6ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಗೃಹಿಣಿಯರಿಗೆ 2000ರೂ ಪಿಂಚಣಿ, ಕನಿಷ್ಠ ಆದಾಯ ಖಾತರಿ ಯೋಜನೆ ಹಾಗೂ ಬಡವರಿಗೆ ಐದು ಲಕ್ಷ ಮನೆ ಭರವಸೆ ನೀಡಿದೆ.












Click it and Unblock the Notifications