ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾತೆಗೆ 15 ಲಕ್ಷ ಬರುತ್ತೆ ಎಂದು ಪೋಸ್ಟ್ ಆಫೀಸಿಗೆ ಓಡಿದ ಮುನ್ನಾರ್ ಮಂದಿ

|
Google Oneindia Kannada News

ಮುನ್ನಾರ್, ಜುಲೈ 1: ವಾಟ್ಸಾಪ್, ಮೆಸೆಂಜರ್‌ನಂತಹ ಸಂದೇಶ ತಂತ್ರಜ್ಞಾನಗಳಲ್ಲಿ ಬರುವ ವದಂತಿಗಳನ್ನು ನಂಬಬಾರದು ಎಂದು ಜನರಿಗೆ ಎಷ್ಟೇ ತಿಳಿವಳಿಕೆ ಮೂಡಿಸಿದರೂ ಪ್ರಯೋಜನವಾಗುತ್ತಿಲ್ಲ. ಅದನ್ನು ನಂಬಿ ಮೋಸ ಹೋಗುವವರು ಕಡಿಮೆಯಾಗಿಲ್ಲ. ಇದು ದೇಶದ ಅತಿ ಹೆಚ್ಚು ಸುಶಿಕ್ಷಿತರ ರಾಜ್ಯ ಎಂದು ಕರೆಯಲಾಗುವ ಕೇರಳವನ್ನೂ ಬಿಟ್ಟಿಲ್ಲ.

ವಾಟ್ಸಾಪ್‌ನಲ್ಲಿ ಹರಿದಾಡುತ್ತಿದ್ದ ಸುಳ್ಳು ಸಂದೇಶವನ್ನು ನಂಬಿ ಅಂಚೆ ಕಚೇರಿಗೆ ದೌಡಾಯಿಸಿದ ಕೇರಳದ ಮುನ್ನಾರ್‌ನ ಜನರು ಪೇಚಿಗೀಡಾಗಿದ್ದಾರೆ.

ಏಕಾಏಕಿ ದೊಡ್ಡ ಸಂಖ್ಯೆಯ ಜನರು ಬಂದು ತಮ್ಮ ಉಳಿತಾಯ ಖಾತೆ ತೆರೆಯುವಂತೆ ಸಾಲುಗಟ್ಟಿ ನಿಂತಾಗ ಮುನ್ನಾರ್ ಪೋಸ್ಟ್ ಆಫೀಸ್‌ನ ಅಧಿಕಾರಿಗಳು ಅಚ್ಚರಿಗೊಳಗಾಗಿದ್ದರು. ಒಂದೆರಡಲ್ಲ, ಸತತ ಮೂರು ದಿನ ಜನರ ದಂಡು ಅಂಚೆ ಕಚೇರಿ ಮುಂದೆ ನೆರೆದಿತ್ತು. ಸಾಮಾನ್ಯವಾಗಿ ಉಳಿತಾಯ ಖಾತೆಗಳನ್ನು ತೆರೆದು ಹಣ ಇರಿಸಲು ಹಿಂದೇಟು ಹಾಕುವ ಜನರು ಹೀಗೆ ಗುಂಪುಗೂಡಿ ಬರಲು ಕಾರಣವೇನು ಎಂಬುದನ್ನು ಅವರು ಹುಡುಕಿದಾಗ ವಾಸ್ತವ ತಿಳಿದು ಹಣೆ ಚಚ್ಚಿಕೊಂಡರು.

ನರೇಂದ್ರ ಮೋದಿ ಅವರು 2014ರ ಚುನಾವಣಾ ಪ್ರಚಾರದ ವೇಳೆ ವಿದೇಶದಿಂದ ಕಪ್ಪುಹಣ ತಂದು ಪ್ರತಿ ಗ್ರಾಹಕನ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿ ಹಾಕುವುದಾಗಿ ಭರವಸೆ ನೀಡಿದ್ದರು ಎಂಬ ಮಾಹಿತಿ ಎಲ್ಲೆಡೆ ಹರಿದಾಡುತ್ತಿತ್ತು. ಜನರನ್ನು ಬೇಸ್ತುಬೀಳಿಸಲು ಈ ಮಾಹಿತಿಯನ್ನು ಬಳಸಿಕೊಂಡ ಕೆಲವು ಕಿಡಿಗೇಡಿಗಳು, ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿರುವ ಜನರ ಖಾತೆಗಳಿಗೆ 5-15 ಲಕ್ಷ ರೂಪಾಯಿವರೆಗೆ ಜಮೆಯಾಗುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು.

ವಾಟ್ಸ್‌ಆಪ್ ಕುರಿತು ವಾಟ್ಸ್‌ ಆಫ್‌ನಲ್ಲಿ ಹರಿದಾಡುತ್ತಿದೆ ಸುಳ್ಳು ಸುದ್ದಿ ವಾಟ್ಸ್‌ಆಪ್ ಕುರಿತು ವಾಟ್ಸ್‌ ಆಫ್‌ನಲ್ಲಿ ಹರಿದಾಡುತ್ತಿದೆ ಸುಳ್ಳು ಸುದ್ದಿ

ಇದು ಸಾಮಾಜಿಕ ಸಂದೇಶ ಮಾಧ್ಯಮಗಳ ಮೂಲಕ ವೇಗವಾಗಿ ಹರಿದಾಡಿತು. ಹೆಚ್ಚಿನ ಜನರು, ಅದರಲ್ಲಿಯೂ ಎಸ್ಟೇಟ್ ಕಾರ್ಮಿಕರು ಇದನ್ನು ಸತ್ಯವೆಂದು ತಿಳಿದು ಸಮೀಪದ ಅಂಚೆ ಕಚೇರಿಗೆ ತೆರಳಿ ಖಾತೆ ತೆರೆಸಲು ಮುಂದಾದರು.

ಒಂದು ಕೋಟಿ ಖಾತೆ ಗುರಿ

ಒಂದು ಕೋಟಿ ಖಾತೆ ಗುರಿ

ದೇಶದಾದ್ಯಂತ ಒಂದು ಕೋಟಿಯಷ್ಟು ಹೊಸ ಖಾತೆಗಳನ್ನು ತೆರೆಯಬೇಕೆಂದು ಅಂಚೆ ಕಚೇರಿಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಅಂಚೆ ಕಚೇರಿಯಲ್ಲಿ ಹೆಚ್ಚು ಮಂದಿ ಉಳಿತಾಯ ಹಣ ಇರಿಸುವಂತಾಗಲಿ ಎನ್ನುವುದು ಸರ್ಕಾರದ ಉದ್ದೇಶ. ಹೀಗಾಗಿ ಭಾನುವಾರವೂ ಅಂಚೆ ಕಚೇರಿಗಳು ಈ ಸಲುವಾಗಿ ತೆರೆದಿರುತ್ತಿವೆ.

ಮೇಯರ್‌ ಗಂಗಾಂಬಿಕೆ ಬೆನ್ನಿಗೆ ಬಿದ್ದ 'ಫೇಕ್‌ನ್ಯೂಸ್ ಗೂಂಡಾಗಳು'ಮೇಯರ್‌ ಗಂಗಾಂಬಿಕೆ ಬೆನ್ನಿಗೆ ಬಿದ್ದ 'ಫೇಕ್‌ನ್ಯೂಸ್ ಗೂಂಡಾಗಳು'

ಪೊಲೀಸರ ಮಾತನ್ನೂ ನಂಬದ ಜನರು

ಪೊಲೀಸರ ಮಾತನ್ನೂ ನಂಬದ ಜನರು

ಭಾನುವಾರ ಬೆಳಿಗ್ಗೆಯಿಂದ ಮುನ್ನಾರ್ ಅಂಚೆ ಕಚೇರಿ ಮುಂದೆ ನಿಂತಿದ್ದ ಜನರ ಸಾಲು ರಾತ್ರಿ ಎಂಟು ಗಂಟೆಯಾದರೂ ಕರಗಿರಲಿಲ್ಲ. ಜನರ ಧಾವಂತ ಕಂಡು ಕಕ್ಕಾಬಿಕ್ಕಿಯಾದ ಅಂಚೆ ಕಚೇರಿ ಸಿಬ್ಬಂದಿ ಅವರನ್ನು ನಿಯಂತ್ರಿಸಲು ಪೊಲೀಸರ ಸಹಾಯ ಪಡೆದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಅದೊಂದು ಸುಳ್ಳು ಸಂದೇಶ ಎಂದು ಅವರಿಗೆ ಬಿಡಿಸಿ ಹೇಳಿದರೂ, ಜನರು ಕೇಳುವ ಸ್ಥಿತಿಯಲ್ಲಿರಲಿಲ್ಲ.

ಹೀಗಾಗಿ ಕೇವಲ ಮೂರು ದಿನದಲ್ಲಿಯೇ ಮುನ್ನಾರ್ ಅಂಚೆ ಕಚೇರಿ ಒಂದರಲ್ಲಿಯೇ 1,500ಕ್ಕೂ ಹೆಚ್ಚು ಅಂಚೆ ಉಳಿತಾಯ ಖಾತೆಗಳನ್ನು ತೆರೆಯಲಾಗಿದೆ.

ವಾಟ್ಸಾಪ್ ಸಂದೇಶದಲ್ಲಿ ಏನಿತ್ತು?

ವಾಟ್ಸಾಪ್ ಸಂದೇಶದಲ್ಲಿ ಏನಿತ್ತು?

'ನಾಳೆ ನಿಮಗೆ ಸುವರ್ಣ ದಿನ. ನಾಳೆ ಬೆಳಿಗ್ಗೆ 8 ಗಂಟೆಯಿಂದ ಮರುದಿನದವರೆಗೆ ಭಾರತೀಯ ಅಂಚೆ ಪಾವತಿ ಬ್ಯಾಂಕ್ (ಐಪಿಪಿಬಿ) ಖಾತೆ ತೆರೆಯಲಾಗುತ್ತದೆ. ನೀವು ನಿಮ್ಮ ಆಧಾರ್ ಕಾರ್ಡ್ ಮತ್ತು ಎರಡು ಫೋಟೊಗಳನ್ನು ತರಬೇಕು. ನೀವು ಈ ಖಾತೆಯನ್ನು ತೆರೆದರೆ ಸರ್ಕಾರವು ನಿಮಗೆ ಶೀಘ್ರದಲ್ಲಿಯೇ ಮುನ್ನಾರ್ ಅಂಚೆ ಕಚೇರಿಯಲ್ಲಿ ಮುದ್ರಾ ಸಾಲ ಮತ್ತು ಕಿಸಾನ್ ಕ್ರೆಡಿಟ್ ಸಾಲಗಳನ್ನು ನೀಡಲಿದೆ. ದಯವಿಟ್ಟು ಈ ಅವಕಾಶವನ್ನು ಬಳಸಿಕೊಳ್ಳಿ. ಈ ವಿಚಾರವನ್ನು ನಿಮ್ಮ ಸಂಬಂಧಿಕರೊಂದಿಗೆ ಹಂಚಿಕೊಳ್ಳಿ. ಅಂಚೆ ಕಚೇರಿ ಬ್ಯಾಂಕ್ ಖಾತೆ ತೆರೆಯಲು 100 ರೂ. ಮೊತ್ತ, ಆಧಾರ್ ಕಾರ್ಡ್ ಪ್ರತಿ ಮತ್ತು ಎರಡು ಭಾವಚಿತ್ರಗಳನ್ನು ಕೊಡಬೇಕು. ಸ್ಥಳ: ಮುನ್ನಾರ್ ಅಂಚೆ ಕಚೇರಿ' ಎಂದು ಸಂದೇಶದಲ್ಲಿ ತಿಳಿಸಲಾಗಿತ್ತು.

ಮಣಿಪುರ ಇಂಜಿನಿಯರ್ ಗೆ ಕೈ ತುಂಬಾ ಗಿಫ್ಟ್ ಕೊಟ್ಟ ಫೇಸ್ ಬುಕ್ಮಣಿಪುರ ಇಂಜಿನಿಯರ್ ಗೆ ಕೈ ತುಂಬಾ ಗಿಫ್ಟ್ ಕೊಟ್ಟ ಫೇಸ್ ಬುಕ್

ಒಂದು ಲಕ್ಷದವರೆಗೆ ಜಮೆ

ಒಂದು ಲಕ್ಷದವರೆಗೆ ಜಮೆ

ಅಂಚೆ ಕಚೇರಿ ಬ್ಯಾಂಕ್ ಉಳಿತಾಯ ಖಾತೆ ತೆರೆಯುವ ಕೇಂದ್ರ ಸರ್ಕಾರದ ಯೋಜನೆಯನ್ನು ಮುನ್ನಾರ್‌ನಲ್ಲಿ ಪ್ರತಿ ಭಾನುವಾರ ನಡೆಸಲಾಗುತ್ತದೆ. ಖಾತೆ ತೆರೆಯಲು 100 ರೂ. ಮೊತ್ತ, ಆಧಾರ್ ಕಾರ್ಡ್ ಪ್ರತಿ ಮತ್ತು ಎರಡು ಭಾವಚಿತ್ರದ ಅಗತ್ಯವಿರುತ್ತದೆ. ಒಂದು ಲಕ್ಷ ರೂ,ವರೆಗೂ ಇಲ್ಲಿ ಜಮೆ ಮಾಡಬಹುದು. ಅದನ್ನು ವಿವಿಧ ಬಿಲ್‌ಗಳ ಪಾವತಿಗೆ ಬಳಸಿಕೊಳ್ಳಬಹುದು ಮತ್ತು ಇಲ್ಲಿ ನೆಟ್ ಬ್ಯಾಂಕಿಂಗ್ ಸೌಲಭ್ಯವೂ ಇದೆ. ಆದರೆ, ಈ ಖಾತೆಗಳ ಮೂಲಕ ಮೋದಿ ಅವರು ಭರವಸೆ ನೀಡಿರುವಂತೆ 15 ಲಕ್ಷ ರೂಪಾಯಿಗಳನ್ನು ಕೊಡಲಾಗುತ್ತದೆ ಎಂದು ವದಂತಿ ಹಬ್ಬಿಸಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸುದ್ದಿ ಸುಳ್ಳು ಎಂದು ಮಂಗಳವಾರ ಮಾಧ್ಯಮಗಳಲ್ಲಿ ವರದಿಯಾದ ಬಳಿಕವೇ ಅಂಚೆ ಕಚೇರಿಗೆ ದೌಡಾಯಿಸುವುದನ್ನು ಜನರು ನಿಲ್ಲಿಸಿದರು. ಆದರೆ, ಕಾರ್ಮಿಕರು ಅಂಚೆ ಕಚೇರಿ ಮುಂದೆ ಸರದಿಯಲ್ಲಿ ನಿಲ್ಲಲು ಸಮಯ ಮತ್ತು ಹಣವನ್ನು ಅನಗತ್ಯವಾಗಿ ಕಳೆದುಕೊಂಡಿದ್ದರು. ಆದರೇನಂತೆ, ಗುರಿ ತಲುಪುವ ಸಾಧನೆ ಮಾಡಬೇಕಾದ ಮುನ್ನಾರ್ ಅಂಚೆ ಕಚೇರಿ ಬರೋಬ್ಬರಿ 1,500ಕ್ಕೂ ಅಧಿಕ ಅಂಚೆ ಉಳಿತಾಯ ಖಾತೆಗಳನ್ನು ತೆರೆದು ನಿಟ್ಟುಸಿರುಬಿಟ್ಟಿತು.

ಭೂಮಿ, ಮನೆಗಾಗಿ ಮುಗಿಬಿದ್ದ ಜನ

ಭೂಮಿ, ಮನೆಗಾಗಿ ಮುಗಿಬಿದ್ದ ಜನ

ಇದೇ ರೀತಿ ಉಚಿತ ಭೂಮಿ ಹಾಗೂ ಮನೆಗಳನ್ನು ಕೊಡುತ್ತಾರೆ ಎಂಬ ಮತ್ತೊಂದು ಸುಳ್ಳು ಸಂದೇಶವನ್ನು ನಂಬಿದ್ದ ಜನರು ದೇವಿಕುಳಂ ಆರ್‌ಡಿಒ ಕಚೇರಿ ಎದುರು ಸೇರಿಕೊಂಡಿದ್ದ ಘಟನೆಯೂ ವರದಿಯಾಗಿದೆ.

ಕುಟ್ಟಿಯಾರ್ ಕಣಿವೆಯಲ್ಲಿ ಭೂರಹಿತ ಕಾರ್ಮಿಕರಿಗೆ ಆಗಸ್ಟ್ 1ರಿಂದ ಭೂಮಿ ಹಂಚಿಕೆ ಮಾಡಲಾಗುತ್ತದೆ. ಪಟ್ಟಿಯಲ್ಲಿ ಹೆಸರು ಇಲ್ಲದವರು ಹೊಸದಾಗಿ ಅರ್ಜಿ ಸಲ್ಲಿಸಿದರೆ ಉಚಿತವಾಗಿ ಭೂಮಿ ನೀಡಿ ಮನೆಕಟ್ಟಲು ಅನುದಾನ ನೀಡಲಾಗುತ್ತದೆ ಎಂಬ ಸುಳ್ಳು ಸಂದೇಶ ಹರಿಬಿಡಲಾಗಿತ್ತು.

ಇದನ್ನು ನಂಬಿದ್ದ ಜನರು ಕಚೇರಿ ಮುಂದೆ ಸೇರಿಕೊಂಡಿದ್ದರು. ಇದು ಸುಳ್ಳು ಸಂದೇಶ ಎಂದು ಅಧಿಕಾರಿಗಳು ಮನವರಿಕೆ ಮಾಡಲು ಪ್ರಯತ್ನಿಸಿದರೂ ಕಾರ್ಮಿಕರು ವಾಪಸ್ ಹೋಗಲು ನಿರಾಕರಿಸಿದರು. ಕೊನೆಗೆ ಅಧಿಕಾರಿಗಳು ಅವರ ಅರ್ಜಿಗಳನ್ನು ಸ್ವೀಕರಿಸಿದರು. ಆದರೆ, ಈ ನೆಪದಲ್ಲಿ ಮಧ್ಯವರ್ತಿಗಳು ಇಲ್ಲಿಯೂ ದುಡ್ಡು ಮಾಡಿಕೊಳ್ಳುವ ಕುತಂತ್ರ ನಡೆಸಿದರು. ಒಂದು ಅರ್ಜಿ ಸಿದ್ಧಮಾಡಿಕೊಡಲು ಅನಕ್ಷರಸ್ಥ ಕಾರ್ಮಿಕರ ಬಳಿ ತಲಾ 150 ರೂ.ಗಳನ್ನು ವಸೂಲಿ ಮಾಡಿದರು.

English summary
People in Munnar believed a fake message as those who having savings account in the postal bank would be credited with Rs 3 lakh to Rs 15 lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X