ಕೇರಳದ ತ್ರಿಕ್ಕಾಕರ ಉಪ ಚುನಾವಣೆ: ಕಾಂಗ್ರೆಸ್ಗೆ ಭರ್ಜರಿ ಜಯ
ತಿರುವನಂತಪುರಂ, ಜೂ. 3: ಕೇರಳದಲ್ಲಿ ಆಡಳಿತಾರೂಢ ಸಿಪಿಐ(ಎಂ) ನೇತೃತ್ವದ ಎಲ್ಡಿಎಫ್ ಭಾರೀ ರಾಜಕೀಯ ಹಿನ್ನಡೆ ಅನುಭವಿಸಿದೆ. ಪ್ರತಿಪಕ್ಷ ಕಾಂಗ್ರೆಸ್-ಯುಡಿಎಫ್ ತ್ರಿಕ್ಕಾಕರ ವಿಧಾನಸಭಾ ಕ್ಷೇತ್ರವನ್ನು ಬಹುನಿರೀಕ್ಷಿತ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ.
ತ್ರಿಕ್ಕಾಕರ ವಿಧಾನಸಭಾ ಅಭ್ಯರ್ಥಿ ಉಮಾ ಥಾಮಸ್ ಎಡಪಕ್ಷಗಳ ಅಭ್ಯರ್ಥಿ ಜೋ ಜೋಸೆಫ್ ವಿರುದ್ಧ ಐತಿಹಾಸಿಕವಾಗಿ 25,000 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಅಭೂತಪೂರ್ವ ಪ್ರಚಾರ ನಡೆಸಿದ ಸಿಪಿಐ(ಎಂ) ಈ ಸೋಲನ್ನು ಅನಿರೀಕ್ಷಿತ ಮತ್ತು ಆಘಾತ ಎಂದು ಬಣ್ಣಿಸಿದೆ.
ಪಕ್ಷದ ಪ್ರಮುಖ ನಾಯಕಿ ಮತ್ತು ಕ್ಷೇತ್ರದ ಮಾಜಿ ಶಾಸಕ ದಿವಂಗತ ಪಿಟಿ ಥಾಮಸ್ ಪತ್ನಿ ಉಮಾ ಆರಂಭದಿಂದಲೂ ಎಲ್ಲಾ 12 ಸುತ್ತುಗಳ ಮತ ಎಣಿಕೆಗಳಲ್ಲಿ ಆಕರ್ಷಕ ಮುನ್ನಡೆ ಪ್ರದರ್ಶಿಸಿದರು. ಉಮಾ ಅವರು ಒಟ್ಟು 72,000 ಮತಗಳನ್ನು ಪಡೆದರೆ, ಅವರ ಹತ್ತಿರದ ಪ್ರತಿಸ್ಪರ್ಧಿ ಜೋಸೆಫ್ ಕೇವಲ 47,000 ಮತಗಳನ್ನು ಗಳಿಸಿದರು.

ಕಳೆದ ವರ್ಷದ ಕೊನೆಯಲ್ಲಿ ಥಾಮಸ್ ನಿಧನದ ನಂತರ ಕೊಚ್ಚಿ ಕಾರ್ಪೊರೇಷನ್ನ ಪ್ರಮುಖ ಭಾಗವನ್ನು ಒಳಗೊಂಡಿರುವ ಸಂಪೂರ್ಣ ನಗರ ಕ್ಷೇತ್ರವಾದ ತ್ರಿಕ್ಕಾಕರದಲ್ಲಿ ಈ ಉಪಚುನಾವಣೆ ನಡೆಯಿತು. ತ್ರಿಕ್ಕಾಕರ ಕಾಂಗ್ರೆಸ್ ಭದ್ರಕೋಟೆಯಾಗಿದ್ದರೂ, ಆಡಳಿತಾರೂಢ ಸಿಪಿಐ(ಎಂ) ನೇತೃತ್ವದಲ್ಲಿ ಕಳೆದ ಒಂದು ತಿಂಗಳಲ್ಲಿ ತನ್ನ ಉನ್ನತ ನಾಯಕರು ಮತ್ತು ಮಂತ್ರಿಗಳನ್ನು ಅಖಾಡಕ್ಕಿಳಿಸಿ ಅಭೂತಪೂರ್ವವಾಗಿ ತಳಮಟ್ಟದ ಪ್ರಚಾರವನ್ನು ಮಾಡಿದ್ದರಿಂದ ಉಪಚುನಾವಣೆ ಕೇರಳದ ರಾಜಕೀಯದಲ್ಲಿ ಗಮನ ಸೆಳೆದಿತ್ತು.
ಮುಖ್ಯಮಂತ್ರಿ ವಿಜಯನ್ ಮೇ 10ರಂದು ಅಮೆರಿಕಾದಿಂದ ಚಿಕಿತ್ಸೆಯಿಂದ ಹಿಂದಿರುಗಿದ ನಂತರ ಪ್ರಚಾರದ ನೇತೃತ್ವವನ್ನು ವಹಿಸಿಕೊಂಡರು. ಮುಖ್ಯಮಂತ್ರಿಗಳ ಸಂಪುಟದ ಎಲ್ಲಾ ಸಚಿವರು ಮತ್ತು ಬಹುಪಾಲು ಶಾಸಕರು ಮತ್ತು ಮುಂಚೂಣಿ ನಾಯಕರು ವಾರಗಟ್ಟಲೇ ಕ್ಷೇತ್ರದಲ್ಲಿ ಬೀಡುಬಿಟ್ಟು ಮನೆ ಮನೆಗೆ ಭೇಟಿ ಕೊಟ್ಟು ಪ್ರಚಾರ ನಡೆಸಿದ್ದರು.

ಕೆ-ರೈಲ್ ಸೆಮಿ-ಹೈಸ್ಪೀಡ್ ರೈಲು ಕಾರಿಡಾರ್ ಅನ್ನು ಕಾಂಗ್ರೆಸ್- ಯುಡಿಎಫ್ ತೀವ್ರವಾಗಿ ವಿರೋಧಿಸಿತ್ತು. ಆದರೆ ಇದನ್ನೇ ಕ್ಷೇತ್ರದ ಪ್ರಮುಖ ಪ್ರಚಾರ ವಿಷಯವನ್ನಾಗಿ ಮಾಡಿಕೊಂಡ ವಿಜಯನ್, ಇದು ಅಭಿವೃದ್ಧಿಪರ ಮತ್ತು ಅಭಿವೃದ್ಧಿ ವಿರೋಧಿಗಳ ನಡುವಿನ ಹೋರಾಟ ಎಂದು ಹೇಳಿದ್ದರು.
ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಸೇರಿದಂತೆ ಅನೇಕ ಎಡ ನಾಯಕರು ಬಹಿರಂಗವಾಗಿ ಉಪಚುನಾವಣೆ ಫಲಿತಾಂಶ ಪಿಣರಾಯಿ ವಿಜಯನ್ ಸರ್ಕಾರದ ಮೇಲೆ ಜನಾಭಿಪ್ರಾಯ ಎಂದು ಹೇಳಿದ್ದರು. ಒಂದು ವರ್ಷದ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದ ಕಾಂಗ್ರೆಸ್-ಯುಡಿಎಫ್ಗೆ ಉಪಚುನಾವಣೆ ಗೆಲುವು ಸಂತಸ ತಂದಿದೆ.












Click it and Unblock the Notifications