ಶಬರಿಮಲೆ ವಿವಾದ: ಗಂಡನ ಮನೆಗೆ ಮರಳಿದ ಕನಕದುರ್ಗಾ
ತಿರುವನಂತಪುರಂ, ಫೆಬ್ರವರಿ 6: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಪ್ರವೇಶಿಸಿದ್ದಕ್ಕೆ ಹಲ್ಲೆಗೆ ಒಳಗಾಗಿ ಗಂಡನ ಮನೆಯಿಂದ ಹೊರದೂಡಲ್ಪಟ್ಟಿದ್ದ ಕನಕದುರ್ಗಾ ಅವರು ಗಂಡನ ಮನೆಗೆ ಬುಧವಾರ ಮರಳಿದ್ದಾರೆ.
ಕನಕದುರ್ಗಾ ಅವರು ಗಂಡನ ಮನೆಯಲ್ಲಿ ಇರಲು ಮಲಪ್ಪುರಂ ಕೋರ್ಟ್ ಅನುಮತಿ ನೀಡಿದೆ.
'ನನ್ನ ಮನೆಗೆ ಪ್ರವೇಶಿಸಲು ಕೋರ್ಟ್ ಆದೇಶ ನೀಡಿದೆ. ನನಗೆ ಖುಷಿಯಾಗುತ್ತಿದೆ. ಇಂದು ನನ್ನ ಮಕ್ಕಳನ್ನು ನಾನು ನೋಡಲು ಸಾಧ್ಯವಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಅವರನ್ನು ನೋಡುತ್ತೇನೆ ಎಂಬ ಭರವಸೆ ಇದೆ. ಅವರೊಂದಿಗೆ (ಗಂಡನ ಮನೆಯವರೊಂದಿಗೆ) ಇರಲು ನನಗೆ ಯಾವುದೇ ಕಷ್ಟವಿಲ್ಲ. ಆದರೆ, ಅವರು ನನ್ನ ಜೊತೆ ಇರಲು ಸಿದ್ಧರಿಲ್ಲ. ಎಲ್ಲವೂ ಪರಿಹಾರವಾಗಲಿದೆ' ಎಂದು ಕನಕದುರ್ಗಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗಂಡನ ಮನೆಯೊಳಗೆ ಪ್ರವೇಶಿಸಲು ಅನುಮತಿ ನಿರಾಕರಿಸಿದ್ದರ ವಿರುದ್ಧ ಕನಕ ದುರ್ಗಾ ಅವರು ಜಿಲ್ಲೆಯ ಅಧಿಕಾರಿಗಳ ಬಳಿ ದೂರು ಸಲ್ಲಿಸಿದ್ದರು. ಗಂಡನ ಮನೆಯಲ್ಲಿ ವಾಸಿಸುವ ಎಲ್ಲ ಹಕ್ಕು ಕನಕ ದುರ್ಗಾ ಅವರಿಗೆ ಇದೆ ಎಂದು ಪುಲಮಂಥೋಲ್ ಗ್ರಾಮ ನ್ಯಾಯಾಲಯ ಈ ಹಿಂದೆ ಮಧ್ಯಂತರ ತೀರ್ಪು ನೀಡಿತ್ತು.
ತೀವ್ರ ವಿವಾದದ ನಡುವೆಯೂ ಕನಕದುರ್ಗಾ ಮತ್ತೊಬ್ಬ ಮಹಿಳೆಯೊಂದಿಗೆ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಿಸಿದ್ದರು. ಮನೆಗೆ ಮರಳಿದ್ದ ಅವರ ಮೇಲೆ ಅತ್ತೆ ಹಲ್ಲೆ ನಡೆಸಿದ್ದರು. ಆಸ್ಪತ್ರೆಗೆ ದಾಖಲಾಗಿ ಬಿಡುಗಡೆಯಾಗಿದ್ದ ಕನಕದುರ್ಗಾ ಅವರನ್ನು ಗಂಡನ ಕುಟುಂಬ ಮನೆಯಿಂದ ಹೊರಹಾಕಿತ್ತು. ಬಳಿಕ ಅವರು ಸರ್ಕಾರಿ ಆಶ್ರಮವೊಂದರಲ್ಲಿ ಪೊಲೀಸರ ರಕ್ಷಣೆಯಲ್ಲಿ ಆಶ್ರಯ ಪಡೆದುಕೊಂಡಿದ್ದರು.












Click it and Unblock the Notifications