ಹಸಿವು ನೀಗಿಸಿಕೊಳ್ಳಲು ಕೊಳಚೆ ನೀರಲ್ಲಿ ಮೀನು ಹಿಡಿಯುವ ಸ್ಥಿತಿ!
ತಿರುವನಂತಪುರಂ, ಮೇ 31: ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದ ದಿನದ ಹೊತ್ತಿನ ಊಟಕ್ಕೂ ಕಣ್ಣು-ಬಾಯಿ ಬಿಡುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಬದುಕು ಕಟ್ಟಿಕೊಳ್ಳುವುದಕ್ಕಾಗಿ ಊರು ಬಿಟ್ಟು ಊರಿಗೆ ಬಂದ ವಲಸೆ ಕಾರ್ಮಿಕರ ಜೀವನವಂತೂ ಲಾಕ್ಡೌನ್ನಿಂದ ಅಕ್ಷರಶಃ ನರಕವಾಗಿದೆ.
ಕೇರಳದಲ್ಲಿ ಲಾಕ್ಡೌನ್ನಿಂದ ಒಂದು ಕಡೆಯಲ್ಲಿ ದಿನಗೂಲಿ ನೌಕರರು ಇಲ್ಲ. ಮತ್ತೊಂದು ಕಡೆಯಲ್ಲಿ ಕೆಲಸ ಮಾಡುವವರಿಗೆ ಉದ್ಯೋಗವೇ ಸಿಗುತ್ತಿಲ್ಲ. ದುಡಿಯುವ ಕೈಗಳಿಗೆ ಕೆಲಸವಿಲ್ಲ, ಹಸಿದ ಹೊಟ್ಟೆಗೆ ಊಟ ಸಿಗುತ್ತಿಲ್ಲ.
ವಲಸೆ ಕಾರ್ಮಿಕರಿಗಾಗಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಡಳಿತ ಹೇಳುತ್ತಿದೆ. ವಲಸೆ ಕಾರ್ಮಿಕರ ಹಸಿವು ನೀಗಿಸುವುದಕ್ಕಾಗಿ ವಿಶೇಷ ಸಮುದಾಯದ ಆಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳುತ್ತಿದ್ದೆಯಾದರೂ, ತ್ರಿಶುರ್ ಜಿಲ್ಲಾಡಳಿತ ಎಡವಿದ್ದೆಲ್ಲಿ ಎಂಬುದನ್ನು ಅರಿತುಕೊಂಡಿಲ್ಲ. ಈ ಮಾತನ್ನು ಸಾಕ್ಷೀಕರಿಸುವಂತಾ ಭಾವಚಿತ್ರ ಮನದ ಭಾವನೆಗಳನ್ನು ಕೆದಕುವುದರ ಜೊತೆಗೆ ವಾಸ್ತವದ ದುಸ್ಥಿತಿಯನ್ನು ಎತ್ತಿ ತೋರಿಸುವಂತಿದೆ.

ಕೇರಳ ಕೌಮುದಿ ಫೋಟೋಗ್ರಾಫರ್ ಕ್ಲಿಕ್ಕಿಸಿದ ಫೋಟೋ:
ಕೊರೊನಾವೈರಸ್ ಭೀತಿ ಮತ್ತು ಲಾಕ್ಡೌನ್ ಫಜೀತಿಯಿಂದ ವಲಸೆ ಕಾರ್ಮಿಕರ ಬದುಕು ಬೀದಿಗೆ ಬಂದು ನಿಂತಿದೆ. ತ್ರಿಶುರ್ ರೈಲ್ವೆ ನಿಲ್ದಾಣದ ಪ್ರದೇಶದಲ್ಲಿ ಹರಿಯುವ ಕೊಳಚೆ ನೀರಿನಲ್ಲಿ ಜನರು ಮೀನು ಹಿಡಿಯುತ್ತಿರುವ ಚಿತ್ರವನ್ನು ಕೇರಳ ಕೌಮುದಿಯ ಹಿರಿಯ ಛಾಯಾಗ್ರಾಹಕ ರಫಿ ಎಂ ದೇವಸ್ಸಿ ಸೆರೆ ಹಿಡಿದಿದ್ದಾರೆ. ಇದು ಒಂದು ನಿನ್ನೆಯ ದೃಶ್ಯವಲ್ಲ. ಬದಲಿಗೆ ಪ್ರತಿನಿತ್ಯ ಈ ಪ್ರದೇಶದಲ್ಲಿ ವಲಸೆ ಕಾರ್ಮಿಕರು ಕೊಳಚೆ ನೀರಿನಲ್ಲೇ ಮೀನು ಹಿಡಿದು ಹಸಿವು ನೀಗಿಸಿಕೊಳ್ಳುತ್ತಿದ್ದಾರೆ.
ಕಲುಷಿತಗೊಂಡ ಕೊಳಚೆ ನೀರಿನಲ್ಲಿ ಮುಶಿ ಮತ್ತು ಪಲ್ಲತಿಯಂತಹ ಮೀನುಗಳು ಮಾತ್ರ ಸಿಗುತ್ತವೆ. ಈ ಮೀನುಗಳ ಗಟ್ಟಿ ಚರ್ಮವನ್ನು ಹೊಂದಿರುವುದರಿಂದ ಕಲುಷಿತ ನೀರಿನಲ್ಲೂ ಜೀವಿಸಬಲ್ಲವು. ಆದರೆ ಇಂಥ ಮೀನುಗಳ ಸೇವನೆಯಿಂದ ಡೆಂಗ್ಯೂ ಜ್ವರ ಸೇರಿದಂತೆ ಹಲವು ರೀತಿ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications