ಎನ್ಸಿಸಿ ಸೇರಲು ತೃತೀಯ ಲಿಂಗಿ ವ್ಯಕ್ತಿಗೂ ಹಕ್ಕಿದೆ: ಹೈಕೋರ್ಟ್
ತಿರುವನಂತಪುರಂ, ಮಾರ್ಚ್ 16: ನ್ಯಾಷನಲ್ ಕೆಡೆಟ್ ಕಾರ್ಪ್ಸ್ ಸೇರಲು ತೃತೀಯ ಲಿಂಗಿ ವ್ಯಕ್ತಿಗೂ ಹಕ್ಕಿದೆ ಎಂದು ಕೇರಳ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ವಿಧಾನಸಭೆ ಚುನಾವಣೆ ಪ್ರಚಾರದ ಭರಾಟೆಯಲ್ಲಿರುವ ಅಭ್ಯರ್ಥಿಗಳ ಕಿವಿಗೆ ಈ ಸುದ್ದಿ ಬಿದ್ದರೆ ಸಾಕು, ಪ್ರಚಾರದ ಸಂದರ್ಭದಲ್ಲಿ ಪಕ್ಕಾ ಬಳಕೆ ಮಾಡಿದರೆ ಅಚ್ಚರಿಯೇನಿಲ್ಲ. ತೃತೀಯಲಿಂಗಿಗಳು ಹೆಚ್ಚಿನ ಉತ್ಸಾಹದಲ್ಲಿ ಮತದಾನ ಮಾಡುವುದರಿಂದ, ಕೋರ್ಟ್ ಆದೇಶವನ್ನು ತಮ್ಮ ಲಾಭಕ್ಕೆ ರಾಜಕಾರಣಿಗಳು ಬಳಸಿಕೊಳ್ಳಬಹುದು.
ಚುನಾವಣೆ ವಿಷಯ ಪಕ್ಕಕ್ಕಿಟ್ಟರೆ, ತಿರುವನಂತಪುರದ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಹೀನಾ ಹನೀಫಾ ಅಲಿಯಾಸ್ ಮುಹಮ್ಮದ್ ಆಸಿಫ್ ಅವರು ತೃತೀಯ ಲಿಂಗಿಗಳ ಹಕ್ಕು ಬಾಧ್ಯತೆ ಬಗ್ಗೆ ಸರ್ಕಾರ ತೆಗೆದುಕೊಂಡಿರುವ ಕ್ರಮವೇನು ಎಂದು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ಪುರಸ್ಕರಿಸಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ
1948ರ ನ್ಯಾಷನಲ್ ಕೆಡೆಟ್ ಕೋರ್ ಕಾಯಿದೆಯ ಸೆಕ್ಷನ್ 6 ಅನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಅನು ಶಿವರಾಮನ್ ಅವರಿದ್ದ ಪೀಠವು ಕಾಯಿದೆಯ ಅನ್ವಯ ಕೇವಲ ಪುರುಷ ಅಥವಾ ಸ್ತ್ರೀಯರು ಮಾತ್ರವೇ ಎನ್ಸಿಸಿ ಸೇರಬಹುದಾಗಿದೆ. ಆದರೆ, ಅರ್ಜಿದಾರರು ತಮ್ಮ ಸ್ವಯಂ ಲಿಂಗತ್ವ ಗ್ರಹಿಕೆಯನ್ನು ಸಮರ್ಥಿಸಲು ಲಿಂಗತ್ವ ಮಾರ್ಪಾಟು ಚಿಕಿತ್ಸೆಗೂ ಒಳಗಾಗಿದ್ದು ಅವರು ಖಂಡಿತವಾಗಿಯೂ ತೃತೀಯ ಲಿಂಗಿಯಾಗಿ ಹಾಗೂ ಸ್ತ್ರೀ ಎನ್ನುವ ತಮ್ಮ ಲಿಂಗತ್ವದ ಸ್ವಯಂ ಗ್ರಹಿಕೆಯ ಗುರುತಿನ ಆಧಾರದಲ್ಲಿ ಎನ್ಸಿಸಿಯಲ್ಲಿ ದಾಖಲಾಗುವ ಹಕ್ಕು ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ.
ತೃತೀಯ ಲಿಂಗಿ ವ್ಯಕ್ತಿಗಳ (ರಕ್ಷಣೆ ಮತ್ತು ಹಕ್ಕುಗಳು) ಕಾಯಿದೆ, 2019 ಅನ್ನು ಎನ್ಸಿಸಿಯ ನಿಬಂಧನೆಯು ಮೀರುವಂತಿಲ್ಲ ಎಂದಿದೆ. 2019ರ ಕಾಯಿದೆಯು ತೃತೀಯ ಲಿಂಗಿಗಳಿಗೆ ಘನತೆಯ ಜೀವನವನ್ನು ಖಾತರಿ ಪಡಿಸುತ್ತದೆ ಹಾಗೂ ಅವರ ವಿರುದ್ಧ ತಾರತಮ್ಯವನ್ನು ನಿಷೇಧಿಸುತ್ತದೆ, ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ನೋಡಬೇಕಿದೆ ಎಂದಿದೆ.
ಎನ್ಸಿಸಿಯ ಹಿರಿಯ ವಿದ್ಯಾರ್ಥಿನಿಯರ ವಿಭಾಗದಲ್ಲಿ ದಾಖಲಾಗುವ ಹಕ್ಕನ್ನು ಹೊಂದಿದ್ದಾರೆ. ಎನ್ಸಿಸಿ ಕಾಯಿದೆಯು ತೃತೀಯ ಲಿಂಗಿಗಳನ್ನು ಗುರುತಿಸುವುದಿಲ್ಲ ಎನ್ನುವುದಾಗಲಿ, ಸೇನೆ ಅಥವಾ ಎನ್ಸಿಸಿಗೆ ತೃತೀಯ ಲಿಂಗಿಗಳ ಸೇರ್ಪಡೆಗೆ ವಿಸ್ತೃತವಾದ ಮಾರ್ಗಸೂಚಿಗಳನ್ನು ರೂಪಿಸಬೇಕಿದೆ ಎಂಬ ಕಾರಣ ನೀಡಿ ಅವರ ಅರ್ಜಿಯನ್ನು ತಿರಸ್ಕರಿಸಲಾಗದು ಎಂದು ನ್ಯಾ. ಅನು ಅಭಿಪ್ರಾಯಪಟ್ಟಿದ್ದಾರೆ.