ಶಬರಿಮಲೆ ದೇವಸ್ಥಾನಕ್ಕೆ ಕೇರಳ ಸರ್ಕಾರದಿಂದ 20 ಕೋಟಿ ರೂ ಅನುದಾನ
ತಿರುವನಂತಪುರಂ, ಡಿಸೆಂಬರ್ 21: ಶಬರಿಮಲೆ ಸನ್ನಿಧಿಯಲ್ಲಿ ಮಕರವಿಳಕ್ಕು ಹಬ್ಬದ ಆಚರಣೆ ಸುಸೂತ್ರವಾಗಿ ನಡೆಸಲು ಕೇರಳ ರಾಜ್ಯ ಸರ್ಕಾರವು 20 ಕೋಟಿ ರೂ. ಅನುದಾನವನ್ನು ದೇವಸ್ವಂ ಮಂಡಳಿಗೆ ಬಿಡುಗಡೆ ಮಾಡಿದೆ.
ಕೊರೊನಾ ವೈರಸ್ ಸೋಂಕಿನ ಕಾರಣದಿಂದ ಭಕ್ತರ ಸಂಖ್ಯೆಗೆ ಭಾರಿ ಮಿತಿ ಹೇರಲಾಗಿದೆ. ಪ್ರತಿದಿನ ಈ ಅವಧಿಯಲ್ಲಿ ಲಕ್ಷಾಂತರ ಭಕ್ತರು ಭೇಟಿ ನೀಡಬೇಕಿತ್ತು. ಆದರೆ ಸರ್ಕಾರ ವಿಧಿಸಿರುವ ಮಿತಿಯ ಕಾರಣ ಇದುವರೆಗೂ ಭೇಟಿ ನೀಡಿದ ಭಕ್ತರ ಸಂಖ್ಯೆಯೇ ಒಂದು ಲಕ್ಷದ ಗಡಿ ತಲುಪಿಲ್ಲ. ಹೀಗಾಗಿ ಕೋಟ್ಯಂತರ ರೂಪಾಯಿ ಆದಾಯ ನಷ್ಟವಾಗಿದೆ. ಟ್ರ್ಯಾವಂಕೋರ್ ದೇವಸ್ವಂ ಮಂಡಳಿಯು (ಟಿಡಿಬಿ) ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ.
ಶಬರಿಮಲೆ ಯಾತ್ರೆಯು ಟಿಡಿಬಿಯ ಮುಖ್ಯ ಆದಾಯದ ಮೂಲವಾಗಿದ್ದು, ಮಂಡಳ-ಮಕರವಿಳಕ್ಕು ಹಬ್ಬದ ಸಂದರ್ಭದಲ್ಲಿ ಭಕ್ತರ ಸಂಖ್ಯೆಯನ್ನು ಸೀಮಿತಗೊಳಿಸಿರುವುದರಿಂದ ಆದಾಯ ಹರಿದುಬರುತ್ತಿಲ್ಲ. ಹೀಗಾಗಿ ತನ್ನ ಉದ್ಯೋಗಿಗಳಿಗೆ ಸಾಕಷ್ಟು ಸಂಬಳ ನೀಡಲು ಕೂಡ ಟಿಡಿಬಿಗೆ ಸಾಧ್ಯವಾಗುತ್ತಿಲ್ಲ. ಈ ಸಂದರ್ಭದಲ್ಲಿ ಹಣಕಾಸಿನ ಮುಗ್ಗಟ್ಟು ಇರುವುದರಿಂದ ಸರ್ಕಾರದಿಂದ ನೆರವನ್ನು ಕೋರಲಾಗಿತ್ತು. ಕಳೆದ ಆರು ತಿಂಗಳಲ್ಲಿ ಟಿಡಿಬಿಗೆ ಕೇರಳ ಸರ್ಕಾರ ಅನುದಾನ ನೀಡುತ್ತಿರುವುದು ಇದು ಎರಡನೆಯ ಬಾರಿ. ಈ ಹಿಂದೆ ಅದು 30ಕೋಟಿ ರೂ ನೀಡಿತ್ತು.

ಮಕರವಿಳಕ್ಕು ಹಬ್ಬದ ಸಂಭ್ರಮವು ಡಿ. 31ರಿಂದ ಶುರುವಾಗಲಿದೆ. ಜನವರಿ 19ರವರೆಗೂ ದೇವಸ್ಥಾನ ತೆರೆದಿರಲಿದೆ. ದೇವಸ್ಥಾನಕ್ಕೆ ಬರುವವರಿಗೆ ಆರ್ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯ.












Click it and Unblock the Notifications