ಭಾರೀ ಮಳೆ ಮುನ್ಸೂಚನೆ; ಜಾಗ್ರತೆ ವಹಿಸಲು ಮುಖ್ಯಮಂತ್ರಿಗಳ ಸೂಚನೆ
ತಿರುವನಂತಪುರಂ, ಆಗಸ್ಟ್. 1: ಕಳೆದ ಕೆಲವು ದಿನಗಳಿಂದ ಕೇರಳದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಮುಂದಿನ ನಾಲ್ಕು ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇದೆ. ಜನರು ಜಾಗರೂಕರಾಗಿರುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರೆ ನೀಡಿದ್ದಾರೆ.
ಕೊಟ್ಟಾಯಂ, ಪತ್ತನಂತಿಟ್ಟ, ಇಡುಕ್ಕಿ, ಕೊಲ್ಲಂ ಮತ್ತು ತಿರುವನಂತಪುರಂ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಹಲವೆಡೆ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಹಲವು ಹೊಳೆಗಳು ತುಂಬಿ ಹರಿಯುತ್ತಿವೆ.
ಮುಂದಿನ 4 ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವುದರಿಂದ ಜನರು ಜಾಗರೂಕರಾಗಿರಬೇಕು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
ಭಾರೀ ಮಳೆಯ ನಡುವೆ ಕೊಲ್ಲಂ ಜಿಲ್ಲೆಯ ಅಚನ್ಕೋವಿಲ್ ನದಿಯಲ್ಲಿ ತಮಿಳುನಾಡಿನ ನಾಲ್ವರು ಪ್ರವಾಸಿಗರು ಪ್ರವಾಹದಲ್ಲಿ ಸಿಲುಕಿದ್ದರು. ಒಬ್ಬರು ಸಾವನ್ನಪ್ಪಿದ್ದು, ಮೂವರು ಬದುಕುಳಿದಿದ್ದಾರೆ.
ಕೊಟ್ಟಾಯಂ ಜಿಲ್ಲೆಯ ಮೀನಾಚಿಲ್ ತಾಲೂಕಿನ ಮುನ್ನಿಲಾವ್ ಗ್ರಾಮದಲ್ಲಿ ಭೂಕುಸಿತ ಸಂಭವಿಸಿದ ನಂತರ ಮುನ್ನಿಲಾವ್ ಪಟ್ಟಣ ಜಲಾವೃತವಾಗಿತ್ತು. ಭೂಕುಸಿತದಲ್ಲಿ ಒಬ್ಬ ವ್ಯಕ್ತಿ ನಾಪತ್ತೆಯಾಗಿದ್ದರು. ಬಳಿಕ ಅವರನ್ನು ಪತ್ತೆ ಹಚ್ಚಿ, ರಕ್ಷಿಸಲಾಗಿದೆ.
ತಿರುವನಂತಪುರಂ ವಿಥುರ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಾರ್- ಮೀನ್ಮುಟ್ಟಿ ಜಲಪಾತದ ಬಳಿ ವಾಹನಗಳು ರಸ್ತೆಯ ಬದಿಯಲ್ಲಿ ಸಿಲುಕಿಕೊಂಡಿದ್ದವು. ವಿಟೂರ ಗ್ರಾಮದ ಕಲ್ಲಾರ್ ಬಳಿ ಇಬ್ಬರು ಯುವಕರು ಬಂಡೆಗಳ ಮೇಲೆ ಸಿಲುಕಿಕೊಂಡಿದ್ದರು. ಬಳಿಕ ಅವರನ್ನು ವಿಟೂರ ಪೊಲೀಸ್ ಠಾಣೆಯ ಪೊಲೀಸರ ಸಹಾಯದಿಂದ ರಕ್ಷಿಸಲಾಗಿದೆ.

ಕಲ್ಲಾರ್ ಮತ್ತು ಮಂಕಯಂ ಪ್ರವಾಸಿ ತಾಣ ಬಂದ್
ಮಳೆ ಬರುವ ಹಿನ್ನೆಲೆಯಲ್ಲಿ ಪೊಲೀಸ್, ಅಗ್ನಿಶಾಮಕ ದಳ ಮತ್ತು ಇತರ ಸರ್ಕಾರಿ ಸಂಸ್ಥೆಗಳಿಗೆ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ನೆಯ್ಯರ್ ಅಣೆಕಟ್ಟಿನ ನಾಲ್ಕು ಶೆಟರ್ಗಳನ್ನು ಎತ್ತಲಾಗಿದ್ದು, ಅಪಘಾತ ನಡೆದ ಸ್ಥಳಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಪೊನ್ಮುಡಿ, ಕಲ್ಲಾರ್ ಮತ್ತು ಮಂಕಯಂ ಪ್ರವಾಸಿ ತಾಣಗಳನ್ನು ಮುಚ್ಚಲಾಗಿದೆ.
ಭಾರೀ ಮಳೆಯ ಹಿನ್ನೆಲೆ ಯಾವುದೇ ಕಾರಣಕ್ಕೂ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಭೂಕುಸಿತದ ಸಾಧ್ಯತೆ ಇರುವ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲು ವಿಪತ್ತು ನಿರ್ವಹಣಾ ತಂಡಗಳೊಗೆ ಸೂಚಿಸಲಾಗಿದೆ. ಆಯಾ ಸಮಯದಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ನೀಡುವ ಎಚ್ಚರಿಕೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಎಲ್ಲರೂ ಸಿದ್ಧರಾಗಿರಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿನಂತಿಸಿದ್ದಾರೆ.

ಮೀನಚಿಲ್ ಮತ್ತು ಕಂಜಿರಪಳ್ಳಿ ಗ್ರಾಮಗಳಿಗೆ ಎಚ್ಚರಿಕೆ
ಗುಡ್ಡಕುಸಿತದ ಅಪಾಯದ ಹಿನ್ನೆಲೆಯಯಲ್ಲಿ ಕೊಟ್ಟಾಯಂ ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ರಾತ್ರಿ ಪ್ರಯಾಣದ ಮೇಲೆ (ಸಂಜೆ 7 ರಿಂದ ಬೆಳಿಗ್ಗೆ 7 ರವರೆಗೆ) ನಿಷೇಧವನ್ನು ಹೇರಲಾಗಿದೆ. ಮೀನಚಿಲ್ ಮತ್ತು ಕಂಜಿರಪಳ್ಳಿ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ಇಲ್ಲಿಕಲ್ಕಲ್ಲು ರಸ್ತೆಯಲ್ಲಿ ಸಿಲುಕಿದ್ದ ಪ್ರವಾಸಿಗರನ್ನು ರಕ್ಷಿಸಲಾಗಿದೆ.

ಜಂಕ್ಷನ್ಗೆ ಪ್ರವಾಹದ ನೀರು ನುಗ್ಗಿ ಸಂಚಾರ ದುಸ್ತರ
ಕೊಟ್ಟಾಯಂ ಜಿಲ್ಲೆ ಮೂನಿಲವು ಗ್ರಾಮದಲ್ಲಿ ಭೂಕುಸಿತವಾಗಿದ್ದು, ಈ ಪ್ರದೇಶದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಅದೃಷ್ಟವಶಾತ್ ಇಲ್ಲಿ ಯಾವುದೇ ಗಂಭೀರ ಹಾನಿ ಸಂಭವಿಸಿಲ್ಲ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಏತನ್ಮಧ್ಯೆ, ಮುಂಡಕ್ಕಯಂ- ಎರುಮೇಲಿ ಮಾರ್ಗದ ಕರಿನಿಲಂ ಜಂಕ್ಷನ್ಗೆ ಪ್ರವಾಹದ ನೀರು ನುಗ್ಗಿದ್ದು ಸಂಚಾರ ದುಸ್ತರವಾಗಿದೆ. ಕೂಡಲ್, ಕಳಂಜೂರು ಮತ್ತು ಕೊನ್ನಿಯ ಜಲಾನಯನ ಪ್ರದೇಶಗಳಲ್ಲೂ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದೆ.

ಆಗಸ್ಟ್ 4 ರವರೆಗೂ 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
ಭಾನುವಾರ ತಿರುವನಂತಪುರಂನ ಮೀನ್ಮುಟ್ಟಿ ಜಲಪಾತದ ಬಳಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಹಲವಾರು ಜನರು ಸಂಚಾರ ಮಾಡಲಾಗದೆ ಸಿಲುಕಿಕೊಂಡಿದ್ದರು. ಆಗಸ್ಟ್ 1 ರಂದು ರಾಜ್ಯದ ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಭಾನುವಾರ ಮಧ್ಯಾಹ್ನ 1 ಗಂಟೆಗೆ ಐಎಂಡಿ ಕೇರಳಕ್ಕೆ ನೀಡಲಾದ ಮಳೆಯ ಮುನ್ಸೂಚನೆಯ ಪ್ರಕಾರ ಆಗಸ್ಟ್ 2 ರಂದು 8 ಜಿಲ್ಲೆಗಳಿಗೆ ಆಗಸ್ಟ್ 3 ರಂದು ಮತ್ತು ಆಗಸ್ಟ್ 4 ರಂದು ಆರೆಂಜ್ ಅಲರ್ಟ್ ನೀಡಲಾಗಿದೆ.












Click it and Unblock the Notifications