ಪ್ರಧಾನಿ ಜೊತೆ ವಿಡಿಯೋ ಸಂವಾದದಲ್ಲಿ ಕೇರಳ ಸಿಎಂ ಪಿಣರಾಯಿ ಗೈರು: ಸ್ಪಷ್ಟನೆ
ತಿರುವನಂತಪುರಂ, ಏಪ್ರಿಲ್ 28: ಮತ್ತೆ ಲಾಕ್ ಡೌನ್ ವಿಸ್ತರಿಸಬೇಕೇ ಎನ್ನುವ ವಿಚಾರದಲ್ಲಿ ಪ್ರಧಾನಿ ಮೋದಿ ಕರೆದಿದ್ದ ಮುಖ್ಯಮಂತ್ರಿಗಳ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೈರಾಗಿದ್ದರು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಪಿಣರಾಯಿ,"ಕಳೆದ ಬಾರಿ ಕರೆದಿದ್ದ ಸಭೆಯಲ್ಲಿ ನಾನು ಭಾಗವಹಿಸಿದ್ದೆ. ನಿನ್ನೆ (ಏ 27) ನಡೆದ ಸಭೆಯಲ್ಲಿ ಒಂಬತ್ತು ರಾಜ್ಯಗಳ ಸಿಎಂಗಳಿಗೆ ಮಾತ್ರ ಮಾತನಾಡಲು ಅವಕಾಶ ಎಂದು ಪ್ರಧಾನಿ ಕಾರ್ಯಾಲಯ ಸೂಚಿಸಿತ್ತು".
"ರಾಜ್ಯದ ಮುಖ್ಯ ಕಾರ್ಯದರ್ಶಿ ಟಾಂ ಜೋಸ್ ಸಭೆಯಲ್ಲಿ ಭಾಗವಹಿಸಿದ್ದರು. ನಾವು ಭಾಗವಹಿಸುತ್ತಿಲ್ಲ ಎಂದು ಒಂದು ದಿನದ ಮುಂಚಿತವಾಗಿಯೇ ಪ್ರಧಾನಿ ಕಾರ್ಯಾಲಯಕ್ಕೆ ಮಾಹಿತಿ ನೀಡಲಾಗಿತ್ತು" ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.

"ಸಂವಾದದಲ್ಲಿ ಪ್ರಸ್ತಾವಿಸುವ ವಿಚಾರವನ್ನು ಹಂಚಿಕೊಳ್ಳಲು ಸೂಚಿಸಲಾಗಿತ್ತು. ಅದರಂತೆಯೇ, ಕೇಂದ್ರದ ಸಂಪುಟ ಕಾರ್ಯದರ್ಶಿಗಳಿಗೆ ಭಾನುವಾರವೇ ಮಾಹಿತಿ ನೀಡಿದ್ದೆವು" ಎಂದು ಕೇರಳದ ಸಿಎಂ ಪಿಣರಾಯಿ ಹೇಳಿದ್ದಾರೆ.
"ಕೆಲವೊಂದು ವಿನಾಯತಿಗಳನ್ನು ನೀಡಿ,ಕೇರಳದಲ್ಲಿ ಲಾಕ್ ಡೌನ್ ಅನ್ನು ಇನ್ನೂ ಹನ್ನೆರಡು ದಿನ ವಿಸ್ತರಿಸಬಹುದು ಎಂದು ಕೇರಳ ಸರಕಾರ, ಕೇಂದ್ರಕ್ಕೆ ತಿಳಿಸಿದೆ" ಎಂದು ಸಿಎಂ ಹೇಳಿದ್ದಾರೆ.
ಬಿಜೆಪಿ ಗರಂ: ಪ್ರಧಾನಿಗಳ ಜೊತೆಗಿನ ಸಂವಾದದಲ್ಲಿ ಭಾಗವಹಿಸದೇ ಇದ್ದಿದ್ದಕ್ಕೆ ಕೇರಳ ಬಿಜೆಪಿ ಘಟಕ ಮುಖ್ಯಮಂತ್ರಿಗಳ ವಿರುದ್ದ ಗರಂ ಆಗಿದೆ. "ಇಡೀ ದೇಶವೇ ಕೊರೊನಾ ವಿರುದ್ದ ಹೋರಾಡುತ್ತಿದೆ. ಹೀಗಿರುವಾಗ, ಪಿಣರಾಯಿ ಸಂವಾದದಲ್ಲಿ ಭಾಗವಹಿಸದೇ ಇದ್ದದ್ದು ತಪ್ಪು" ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸುರೇಂದ್ರನ್ ಹೇಳಿದ್ದಾರೆ.












Click it and Unblock the Notifications