ಚುನಾವಣೆ ಹೊಸ್ತಿಲಲ್ಲಿ 12 ಸಾವಿರ ಕೋಟಿ ರೂ ಪ್ಯಾಕೇಜ್ ಘೋಷಿಸಿದ ಕೇರಳ ಸಿಎಂ
ತಿರುವನಂತಪುರಂ, ಫೆಬ್ರವರಿ 26: ಕೇರಳ ಸಿಎಂ ಪಿಣರಾಯಿ ವಿಜಯನ್ ಶುಕ್ರವಾರ ಇಡುಕ್ಕಿ ಜಿಲ್ಲೆಗೆ 12 ಸಾವಿರ ಕೋಟಿ ಅಭಿವೃದ್ಧಿ ಪ್ಯಾಕೇಜ್ ಘೋಷಿಸಿದ್ದಾರೆ. ಕಟ್ಟಪ್ಪನಗೆ ಶುಕ್ರವಾರ ಕಾರ್ಯಕ್ರಮದ ಸಲುವಾಗಿ ಭೇಟಿ ನೀಡಿದ್ದ ಸಂದರ್ಭ ಈ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.
ಕೃಷಿ, ಕೈಗಾರಿಕೆ, ಪ್ರವಾಸೋದ್ಯಮ, ಆರು ಕ್ಷೇತ್ರಗಳಲ್ಲಿ ಪರಿಸರ ಸಮತೋಲನ ಹಾಗೂ ಬಡತನ ನಿರ್ಮೂಲನೆಯಂಥ ಸಮಗ್ರ ಅಭಿವೃದ್ಧಿ ಗುರಿ ಹೊಂದಿರುವ ಈ ಪ್ಯಾಕೇಜ್ ಅನ್ನು "ಮಿನಿ ಬಜೆಟ್" ಎಂದು ಕರೆದಿದ್ದಾರೆ. ಐದು ವರ್ಷಗಳಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಈ ಪ್ಯಾಕೇಜ್, ಎರಡು ಕೃಷಿ ಸಂಸ್ಕರಣಾ ಘಟಕಗಳಿಗೆ 1000 ಕೋಟಿ ರೂ ಸೇರಿದಂತೆ ಕೃಷಿ ಕ್ಷೇತ್ರಕ್ಕೆ 3,260 ಕೋಟಿ ರೂಗಳನ್ನು ಒಳಗೊಂಡಿದೆ.
ಪ್ರವಾಸೋದ್ಯಮಕ್ಕೆ 750 ಕೋಟಿ, ಆಸ್ಪತ್ರೆಗಳಿಗೆ ನೂರು ಕೋಟಿ ಹಾಗೂ ಶಿಕ್ಷಣಕ್ಕೆ 200 ಕೋಟಿ, ಕುಡಿಯುವ ನೀರಿನ ಯೋಜನೆಗೆ 1100 ಕೋಟಿ, ರಸ್ತೆ, ಸೇತುವೆ ನಿರ್ಮಾಣಕ್ಕೆ 1500 ಕೋಟಿ ರೂ, ಪರಿಶಿಷ್ಟ ಜಾತಿ, ಪಂಗಡಕ್ಕೆ ಹಾಗೂ ಪ್ಲಾಂಟೇಷನ್ ಅಭಿವೃದ್ಧಿಗೆ 1000 ಕೋಟಿ ರೂಪಾಯಿಯನ್ನು ಈ ಪ್ಯಾಕೇಜ್ನಲ್ಲಿ ಮೀಸಲಿರಿಸಲಾಗಿದೆ.

ಈ ಪ್ಯಾಕೇಜ್ ಅನುಷ್ಠಾನಕ್ಕೆ ವಿಶೇಷ ಅಧಿಕಾರಿಯನ್ನು ನಿಯೋಜಿಸಲಾಗುವುದು ಹಾಗೂ ಪ್ರತಿ ತಿಂಗಳು ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಆದರೆ 2019ರ ಬಜೆಟ್ನಲ್ಲಿ ಘೋಷಿಸಲಾದ 5000 ಕೋಟಿ ರೂ ಪ್ಯಾಕೇಜ್ ಅಥವಾ 2020ರಲ್ಲಿ ಘೋಷಿಸಲಾದ 1000 ಕೋಟಿ ರೂಗಳ ಯೋಜನೆ ಕುರಿತು ಯಾವ ಪ್ರಸ್ತಾಪವನ್ನೂ ಮಾಡಿಲ್ಲ. ರಾಜ್ಯ ಹಣಕಾಸು ಸಚಿವ ಥಾಮಸ್ ಇಸಾಕ್ ಈ ಪ್ಯಾಕೇಜ್ ಘೋಷಣೆ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಆದರೆ ಈ ಪ್ಯಾಕೇಜ್ ಅನ್ನು ವಿಪಕ್ಷಗಳು ಟೀಕಿಸಿವೆ. ಡೀನ್ ಕುರಿಯಾಕೋಸೆ ಸಂಸದ ಹಾಗೂ ಯುಡಿಎಫ್ ಸಂಸದ ಈ ಪ್ಯಾಕೇಜ್ ವಿರೋಧಿಸಿದ್ದು, ಈ ಪ್ಯಾಕೇಜ್ ಘೋಷಣೆ ಚುನಾವಣೆಗೆ ಮುನ್ನ ಸರ್ಕಾರ ಹೂಡಿರುವ ತಂತ್ರವಷ್ಟೇ ಎಂದಿದ್ದಾರೆ. ಇದೇ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಕೇರಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.












Click it and Unblock the Notifications