ಸಾಲ, ಹಗರಣಗಳ ನಡುವೆ ಕಾಂಗ್ರೆಸ್ ಸರ್ಕಾರದ ಸಂಭ್ರಮವೇ? ವಿಪಕ್ಷ ನಾಯಕರ ಸಾಲು ಸಾಲು ಪ್ರಶ್ನೆಗಳು
ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇದೇ ಮೇ 20ರಂದು ಮೂರು ವರ್ಷ ತುಂಬುತ್ತದೆ. ಈ ಪ್ರಯುಕ್ತ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಮಂದಿ ಸೇರಿಸಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ. ಸರ್ಕಾರದ ಸಂಭ್ರಮಾಚರಣೆ ಕುರಿತು ಆರ್.ಅಶೋಕ್ ಅವರು, 'ರಾಜ್ಯದ ವಾಸ್ತವ ಸ್ಥಿತಿ ಗೊತ್ತಿದಿಯೇ?' ಎಂದು ಖಾರವಾಗಿ ಪ್ರಶ್ನಿಸಿರುವ. ಮೂರು ವರ್ಷದ ಖುಷಿಯಲ್ಲಿರುವ ಸರ್ಕಾರಕ್ಕೆ ಸಾಲು ಸಾಲು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಕಾಂಗ್ರೆಸ್ ಸರ್ಕಾರ ತುಮಕೂರಿನಲ್ಲಿ ನಡೆಸಲು ಉದ್ದೇಶಿಸಿರುವ ಬೃಹತ್ ಸಮಾವೇಶ ಆಕ್ಷೇಪಿಸಿ ಎಕ್ಸ್ ಪೋಸ್ಟ್ ಮಾಡಿರುವ ಆರ್.ಅಶೋಕ್ ಅವರು, 'ಯಾವ ಸಾಧನೆಗೆ ಈ ಸಂಭ್ರಮ?. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರೇ 3 ವರ್ಷಗಳ ಆಡಳಿತದ ಹೆಸರಲ್ಲಿ ತುಮಕೂರಿನಲ್ಲಿ 2 ಲಕ್ಷ ಜನರನ್ನು ಸೇರಿಸಿ ಸಂಭ್ರಮಿಸಲು ಹೊರಟಿರುವ ನಿಮಗೆ ರಾಜ್ಯದ ವಾಸ್ತವ ಸ್ಥಿತಿ ಗೊತ್ತಿದೆಯೇ?. ಯಾವ ಘನಂದಾರಿ ಸಾಧನೆ ಮಾಡಿದ್ದೀರಿ ಅಂತ ಈ ಸಂಭ್ರಮಾಚರಣೆ ಎಂದು ಕೇಳಿದ್ದಾರೆ. ಕಾಂಗ್ರೆಸ್ ಬಂದು ಮೂರು ವರ್ಷದಲ್ಲಿ ಆದ ಬೆಳವಣಿಗೆ ಕುರಿತು ಒಂದಷ್ಟು ಪ್ರಶ್ನೆಗಳನ್ನಿಟ್ಟಿದ್ದಾರೆ.

ರಾಜ್ಯದ ಸಾಲದ ಹೊರೆ 8 ಲಕ್ಷ ಕೋಟಿ ರೂ. ದಾಟಿದೆ. 2025-26 ಬಜೆಟ್ನಲ್ಲಿ ಮತ್ತೆ 1.50 ಲಕ್ಷ ಕೋಟಿ ರೂ. ಸಾಲ ಎತ್ತುವ ಯೋಜನೆ. ಪ್ರತಿ ಕನ್ನಡಿಗನ ಮೇಲೆ 1 ಲಕ್ಷಕ್ಕೂ ಹೆಚ್ಚು ರೂ. ಸಾಲದ ಹೊರೆ ಹೇರಲಾಗಿದ್ದು, ಖಜಾನೆ ಖಾಲಿ ಮಾಡಿದ ಸಾಧನೆಗಾಗಿ ಸಂಭ್ರಮ ಹಮ್ಮಿಕೊಂಡಿದ್ದೀರಾ? ಎಂದರು.
ಮುಡಾ ಹಗರಣ: ಇಡಿ ಅಟ್ಯಾಚ್ಮೆಂಟ್ ಖುಷಿಗಾ?
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅತ್ಯಾಪ್ತ ಮರಿಗೌಡರ ಆಸ್ತಿ ಸೇರಿ ಬರೋಬ್ಬರಿ 100 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಇಡಿ ಜಪ್ತಿ ಮಾಡಿದೆ. ಸಿಬಿಐ ತನಿಖೆ ತಡೆಯಲು ಸರ್ಕಾರ ಬೊಕ್ಕಸದ ಹಣದಲ್ಲಿ 3.16 ಕೋಟಿ ರೂಪಾಯಿ ವಕೀಲರ ಶುಲ್ಕ ಪಾವತಿಸಿದಕ್ಕಾಗಿ ಈ ವಿಜಯೋತ್ಸವವೇ? ಎಂದು ಕಿಡಿ ಕಾರಿದ್ದಾರೆ.
ಸಾಲದ ಕೂಪದಲ್ಲಿ ಎಸ್ಕಾಂಗಳು
ರಾಜ್ಯದ ವಿದ್ಯುತ್ ಕಂಪನಿಗಳು (ESCOMs) ಒಟ್ಟು 42,750 ಕೋಟಿ ರೂಪಾಯಿ ಸಾಲದಲ್ಲಿ ಮುಳುಗಿವೆ. ಬೆಸ್ಕಾಂ ಒಂದರಿಂದಲೇ 6,211 ಕೋಟಿ ಬಾಕಿ ಇದೆ. ಬಡವರ ಮೇಲೆ ದರ ಏರಿಕೆ ಹೇರಿ, ವಿದ್ಯುತ್ ಸರಬರಾಜು ಕಂಪನಿಗಳನ್ನು ದಿವಾಳಿ ಮಾಡಿದ ಸಾಧನೆಗಾ?. ಇನ್ನೂ ಸಿಬಿಐ ತನಿಖೆ ನಡೆಯುತ್ತಿರುವ ಕಂಪನಿಗೆ ರಾಜ್ಯ ಲೋಕೋಪಯೋಗಿ ಇಲಾಖೆ ಹೊಸಕೋಟೆ, ಮಾಲೂರು ರಸ್ತೆ ಯೋಜನೆಗಳ 10,000 ಕೋಟಿ ಟೆಂಡರ್ ರೂಪಾಯಿ ನೀಡಲಾಗಿದೆ. ಭ್ರಷ್ಟ ಕಂಪನಿಗಳಿಗೆ ಅನುಕೂಲ ಮಾಡಿದ "ಆಡಳಿತ ಪಾರದರ್ಶಕತೆಗಾಗಿ ಈ ಸಮಾವೇಶ ಹಮ್ಮಿಕೋಳ್ಳುತ್ತೀರುವಿರಾ? ಎಂದು ಕಾಂಗ್ರೆಸ್ ಆಡಳಿತವನ್ನನು ಲೇವಡಿ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB)ಯ ಬಳ್ಳಾರಿ ಮಂಡಿ ಕಚೇರಿಯಲ್ಲಿ ನಕಲಿ ಚೆಕ್ ಮತ್ತು ಬ್ಯಾಂಕ್ ವಹಿವಾಟುಗಳ ಮೂಲಕ 16 ಕೋಟಿ ಅಕ್ರಮ ವರ್ಗಾವಣೆ ಮಾಡಲಾಗಿದೆ. ವಾಲ್ಮೀಕಿ, ಮುಡಾ, KPSC ಹಗರಣಗಳ ನಂತರ ಹಗರಣಗಳ ಸರಮಾಲೆಗೆ ಮತ್ತೊಂದು ಹಗರಣ ಸೇರಿಸಿದ್ದಕ್ಕಾಗಿ ಈ ಸಂಭ್ರಮವೇ?. ಬಿಜೆಪಿ ಬಿಡುಗಡೆ ಮಾಡಿದ "2 ವರ್ಷದ ವೈಫಲ್ಯ" ಚಾರ್ಜ್ಶೀಟ್ಗೆ ರಾಜ್ಯ ಸರ್ಕಾರ ಮಾನನಷ್ಟ ಮೊಕದ್ದಮೆ ಹೂಡಿದೆ. ಸಾಮಾಜಿಕ ಮಾಧ್ಯಮ ಟೀಕಾಕಾರರ ಮೇಲೆ ಪ್ರಕರಣ ದಾಖಲಿಸಿ, ಸಂವಿಧಾನಕ್ಕೆ ಕೊಳ್ಳಿ ಇಟ್ಟು ಪ್ರಜಾಪ್ರಭುತ್ವದ ಗಂಟಲು ಹಿಸುಕಿದ ನೆನಪಿನ ಹಬ್ಬದ ಸಂಭ್ರಮವೇ? ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಕುರ್ಚಿ ಕಿತ್ತಾಟಕ್ಕೆ ಮೂರನೇ ಯಶಸ್ವಿ ವರ್ಷ ಪೂರ್ಣ
ಸಿಎಂ ಸಿದ್ದರಾಮಯ್ಯ vs ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆ ಕಿತ್ತಾಟ ರಾಷ್ಟ್ರ ಮಟ್ಟದಲ್ಲಿ ಕರ್ನಾಟಕಕ್ಕೆ ಮುಜುಗರ ತಂದಿದೆ. ಇದು ಸಿದ್ದರಾಮಯ್ಯನವರಿಗೆ ಬಿಳ್ಕೊಡಲು ನೀಡುವ ಸಂಭ್ರಮವೋ ಅಥವಾ ಇನ್ನೂ 2 ವರ್ಷ ಈ ಕಿತ್ತಾಟ ಮುಂದುವರೆಸುವ ಸಂಕಲ್ಪವೋ? ಎಂದು ಅವರು ಪ್ರಶ್ನಿಸಿದ್ದು, ಉತ್ತರಿಸುವಂತೆ ಕೋರಿದ್ದಾರೆ.
ರೈತರ ಸಂಕಷ್ಟಕ್ಕೆ ಸ್ಪಂದಿಸದ ಆಡಳಿತ ನೀಡಲಾಗಿದೆ. ಕಬ್ಬು, ಮೆಕ್ಕೆಜೋಳ ರೈತರು ಬೀದಿಗಿಳಿದು ಪ್ರತಿಭಟಿಸಿದರೂ ಸ್ಪಂದನೆ ಇಲ್ಲ. ರೈತರು ವರ್ಷಗಟ್ಟಲೆ ಕಚೇರಿ ಅಲೆದರೂ ಕೆಲಸಗಳಾಗಲ್ಲ. ರೈತರು ಸರ್ಕಾರಿ ಕಚೇರಿಗಳಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ರಾಜ್ಯದಲ್ಲಿದೆ. ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು 7 ಮಂದಿ ಮೃತಪಟ್ಟರು. ಲೋಕಾಯುಕ್ತ ಸ್ವಯಂಪ್ರೇರಿತ ವಿಚಾರಣೆ ನಡೆಸಿ ಇದನ್ನು "ದುರಾಡಳಿತದ ಫಲ" ಎಂದು ಬಣ್ಣಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯ ಕಟ್ಟಡ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಮಾಡಿ ನಿರಪರಾಧಿಗಳ ಪ್ರಾಣ ತೆಗೆಯಲಾಗಿದೆ.
ಔಷಧಗಳಿಲ್ಲದೆ, ವೈದ್ಯರಿಲ್ಲದೆ, ಸ್ಕ್ಯಾನಿಂಗ್ ಸೇವೆ ಇಲ್ಲದೆ ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಅಧೋಗತಿಗೆ ತಳ್ಳಿ ಬಡವರ ಪಾಲಿಗೆ ಮರಣ ಶಾಸನ ಬರೆಯಲಾಗಿದೆ ಇದೆಲ್ಲ ಕಾರಣಕ್ಕಾಗಿ ಸರ್ಕಾರ ಸಂಭ್ರಮಾಚರಣೆ ಮಾಡುತ್ತಿದೆಯೇ ಎಂದು ಅವರು ಕಾಲೆಳೆದರು. ಇನ್ನೂ ರಾಜ್ಯದ ಜನ ಸಂಕಷ್ಟದಲ್ಲಿರುವಾಗ ಸಾರ್ವಜನಿಕ ತೆರಿಗೆ ಹಣದಲ್ಲಿ 4,000 ಬಸ್ ಓಡಿಸಿ ಸಂಭ್ರಮಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.














Click it and Unblock the Notifications