ನನ್ನ ಹತ್ಯೆಯಾದರೆ ನೀವೇ ನೇರ ಹೊಣೆ; ಶಾಸಕ ಬೈರತಿ ಬಸವರಾಜುಗೆ ಸತ್ಯವಾಣಿ ಎಚ್ಚರ
ಬೆಂಗಳೂರು: ನಗರದ ಕೆ.ಆರ್. ಪುರಂ ವಿಧಾನಸಭಾ ಕ್ಷೇತ್ರದ ವಿಜ್ಞಾನ ನಗರ ವಾರ್ಡಿನ ಆಮ್ ಆದ್ಮಿ ಪಕ್ಷದ ಅಧ್ಯಕ್ಷೆ ಸತ್ಯವಾಣಿ ರವರ ಮನೆ ಮುಂದೆ ಅವರ ಕಾರನ್ನು ಜಖಂಗೊಳಿಸಲಾಗಿದೆ. ಈ ಸಂಬಂಧ ಬಿಜೆಪಿ ಸ್ಥಳೀಯ ಮುಖಂಡರುಗಳ ವಿರುದ್ಧ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಎಎಪಿ ಮುಖಂಡರು ದೂರು ನೀಡಿದ್ದಾರೆ. ಈ ವೇಳೆ ಬಿಜೆಪಿ ಶಾಸಕರಿಗೆ ಸತ್ಯವಾಣಿ ಅವರು ಬಹಿರಂಗ ಎಚ್ಚರಿಕೆ ನೀಡಿದರು.
ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸತ್ಯವಾಣಿ, ಕಳೆದ ತಿಂಗಳು ಇದೇ ರೀತಿ ನನ್ನ ಮನೆ ಮುಂದೆ ಹಾಗೂ ವಿಜ್ಞಾನ ನಗರ ವಾರ್ಡಿನಾದ್ಯಂತ ನನ್ನ ವಿರುದ್ಧ ಇಲ್ಲಸಲ್ಲದ ಅವಹೇಳನಕಾರಿ ಸಂದೇಶಗಳು ಇರುವ 50 ದೊಡ್ಡ ದೊಡ್ಡ ಫ್ಲೆಕ್ಸ್ ಬ್ಯಾನರ್ ಗಳನ್ನು ಹಾಕಲಾಗಿದೆ. ಈ ಮೂಲಕ ನನ್ನ ಚಾರಿತ್ರ್ಯವಧೆ ನೇರವಾಗಿ ಶಾಸಕ ಬೈರತಿ ಬಸವರಾಜು ಅವರು ಇಳಿದಿದ್ದಾರೆ ಎಂದು ಆರೋಪಿಸಿದರು.

ದೂರು ದಾಖಲಿಸದಂತೆ ಶಾಸಕರಿಂದ ಒತ್ತಡ
ಇದೇ ಸಂದರ್ಭದಲ್ಲಿ ಸ್ಥಳೀಯ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲು ಬಿಡದ ಶಾಸಕರು ಸಾಕಷ್ಟು ಒತ್ತಡ ತಂತ್ರಗಳನ್ನು ಹೇರಿದ್ದರು ಎಂದು ಅವರು ಆರೋಪಿಸಿದ್ದಾರೆ. ಕೊನೆಗೂ ಲೋಕಾಯುಕ್ತರ ಬಳಿ ದೂರನ್ನು ನೀಡಿದ ನಂತರ ಲೋಕಾಯುಕ್ತರ ಆದೇಶದಂತೆ ಪೊಲೀಸರು ಮೊಕದ್ದಮೆಯನ್ನು ದಾಖಲಿಸಿದರು. ಆ ಸಂದರ್ಭದಲ್ಲಿ ಶಾಸಕರ ಒತ್ತಡಕ್ಕೆ ಮಣಿದು ಆರೋಪಿಗಳನ್ನು ಬಂಧಿಸಿ ಸೂಕ್ತ ಕಠಿಣ ಕ್ರಮವನ್ನು ತೆಗೆದುಕೊಳ್ಳಲು ಆಗಲಿಲ್ಲ.
ಕೆ ಆರ್ ಪುರ ಕ್ಷೇತ್ರದಲ್ಲಿ ಮಹಿಳೆಯರು ಸುರಕ್ಷಿತವಾಗಿ ಇರದಂತಹ ವಾತಾವರಣ ಸೃಷ್ಟಿ ಆಗಿರುವುದು ಈ ಪ್ರಕರಣದಿಂದ ಎದ್ದು ಕಾಣುತ್ತಿದೆ. ಶಾಸಕರ ಆಣತಿಯಂತೆ ಪೊಲೀಸರು ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿ" ಎಂದು ಸತ್ಯವಾಣಿ ಅವರು ಟೀಕಿಸಿದ್ದಾರೆ.
ಶಾಸಕರ ಬೆಂಬಲಿಗರಿಂದ ಕಾರು ಜಖಂ
"ಶಾಸಕರ ಬೆಂಬಲಿಗರು ಮುಂದುವರಿದು ನಿನ್ನೆ ರಾತ್ರಿ ನನ್ನ ಮನೆಯ ಮುಂದೆ ನಿಲ್ಲಿಸಿದ್ದ ಕಾರನ್ನು ಸಂಪೂರ್ಣ ಜಖಂಗೊಳಿಸಿದ್ದಾರೆ. ಶಾಸಕರ ಬೆಂಬಲಿಗರು ಈ ರೀತಿಯ ಹೀನಾತಿಹೀನ ಕೃತ್ಯಗಳಿಗೆ ಕೈ ಹಾಕಿರುವುದು ನಿಜಕ್ಕೂ ಮಹಿಳೆಯರು ಸುರಕ್ಷಿತವಾಗಿ ವಾಸಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ. ನಾನು ಹಲವು ವರ್ಷಗಳಿಂದ ಕೆರೆ ಒತ್ತುವರಿದಾರರ ವಿರುದ್ಧ ಸಾಕಷ್ಟು ಹೋರಾಟಗಳನ್ನು ಮಾಡುತ್ತಾ ಬಂದಿದ್ದೇನೆ.
ಕ್ಷೇತ್ರದಾದ್ಯಂತ ಅನೇಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿರುತ್ತೇನೆ. ಈಗ ಜಿಬಿಎ ಚುನಾವಣೆ ಹತ್ತಿರ ಬಂದಿರುವ ಸಂದರ್ಭದಲ್ಲಿ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆಗಳನ್ನು ನಡೆಸಿಕೊಂಡಿರುವ ನನ್ನ ವಿರುದ್ಧ ಈ ರೀತಿಯ ಹಿಂಸಾ ಕೃತ್ಯಗಳನ್ನು ಮುಂದುವರಿಸಿದ್ದಾರೆ. ನನ್ನ ಪ್ರಾಣ ಹತ್ಯೆಯಾದರೆ ಶಾಸಕ ಭೈರತಿ ಬಸವರಾಜ ರವರೆ ನೇರ ಹೊಣೆಗಾರರಾಗುತ್ತಾರೆ ಎಂದು ಅವರು ಹೇಳಿಕೊಂಡಿದ್ದಾರೆ.
ಎಎಪಿ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ, ಪಕ್ಷದ ಮುಖಂಡರುಗಳಾದ ವೀಣಾ ಸರಾವ್ , ಅಶೋಕ್ ಮೃತ್ಯುಂಜಯ, ಮುನೇಶ್.ಎಂ, ಅಣ್ಣ ನಾಯಕ್, ನವೀನ್ ಅಯ್ಯರ್, ಮೋಹನ್ ರಾಜ್ ಸೇರಿದಂತೆ ಅನೇಕ ಕಾರ್ಯಕರ್ತರುಗಳ ಸಮ್ಮುಖದಲ್ಲಿ ಸತ್ಯವಾಣಿ ಅವರು ಪೊಲೀಸರಿಗೆ ದೂರು ನೀಡಿ ನಡೆದ ಘಟನಾವಳಿಗಳನ್ನು ವಿವರಿಸಿದ್ದಾರೆ.














Click it and Unblock the Notifications