ಶಬರಿಮಲೆ ಅಯ್ಯಪ್ಪ ಭಕ್ತರಿಗೆ ಮನೆ ಬಾಗಿಲಿಗೆ ಪ್ರಸಾದ ರವಾನೆ
ತಿರುವನಂತಪುರಂ, ನವೆಂಬರ್ 26: ಕೊರೊನಾ ವೈರಸ್ ಸೋಂಕಿನ ಭೀತಿ ಕಾರಣದಿಂದ ಈ ಬಾರಿಗೆ ಶಬರಿಮಲೆ ಸ್ವಾಮಿ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳಲು ಸಾಧ್ಯವಾಗದ ಭಕ್ತರಿಗೆ ಪ್ರಸಾದ ತಲುಪಿಸಲು ಟ್ರಾವಂಕೋರ್ ದೇವಸ್ವಂ ಮಂಡಳಿ (ಟಿಡಿಬಿ) ಹೊಸ ಯೋಜನೆ ರೂಪಿಸಿದೆ. ಟಿಡಿಬಿಯು ಇಂಡಿಯಾ ಪೋಸ್ಟ್ ಜತೆ ಒಪ್ಪಂದ ಮಾಡಿಕೊಂಡಿದ್ದು, ದೇಶದಾದ್ಯಂತ ಭಕ್ತರಿಗೆ ಸ್ಪೀಡ್ ಪೋಸ್ಟ್ ಮೂಲಕ ಸ್ವಾಮಿ ಪ್ರಸಾದವನ್ನು ರವಾನಿಸಲಿದೆ.
'ಸ್ವಾಮಿ ಪ್ರಸಾದಂ' ಒಂದು ಪ್ಯಾಕೆಟ್ ಅರವಣ, ತುಪ್ಪ, ಅರಿಶಿಣ, ಕುಂಕುಮ, ವಿಭೂತಿ ಮತ್ತು ಅರ್ಚನೆ ಪ್ರಸಾದವನ್ನು ಒಳಗೊಂಡಿರುತ್ತದೆ. ಈ ಪ್ರಸಾದದ ಕಿಟ್ ಬೆಲೆ 450 ರೂ. ಈ ಪ್ರಸಾದಗಳನ್ನು ರಟ್ಟಿನ ಪೆಟ್ಟಿಗೆಗಳಲ್ಲಿ ಪ್ಯಾಕ್ ಮಾಡಿ, ಭಕ್ತರಿಗೆ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಲಾಗುವುದು ಎಂದು ಟಿಡಿಬಿಯ ಹೇಳಿಕೆ ತಿಳಿಸಿದೆ.
ಭಕ್ತರು ಅಂಚೆ ಕಚೇರಿಗೆ ತೆರಳಿ ಪ್ರತಿ ಪ್ಯಾಕೆಟ್ ಪ್ರಸಾದಕ್ಕೆ 450 ರೂ. ದಂತೆ ಇ-ಪಾವತಿ ಮೂಲಕ ಕೌಂಟರ್ನಲ್ಲಿ ಹಣ ಪಾವತಿಸಬಹುದು. ಒಂದು ರಶೀದಿ ಒಳಗೆ ಹತ್ತು ಪ್ಯಾಕೆಟ್ ಪ್ರಸಾದವನ್ನು ಬುಕ್ ಮಾಡಬಹುದಾಗಿದೆ. ಒಬ್ಬ ಭಕ್ತರು ಮಾಡುವ ಪ್ರಸಾದ ಬುಕಿಂಗ್ಗೆ ಯಾವುದೇ ಗರಿಷ್ಠ ಮಿತಿ ಇಲ್ಲ. ಅಂದರೆ ಭಕ್ತರು ಬೇರೆ ಬೇರೆ ರಶೀದಿಗಳನ್ನು ಪಡೆದು ಎಷ್ಟು ಬೇಕಾದರೂ ಪ್ಯಾಕೆಟ್ಗಳನ್ನು ಬುಕ್ ಮಾಡಬಹುದು.

ಕೋವಿಡ್-19 ಹಿನ್ನೆಲೆಯಲ್ಲಿ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯನ್ನು ನಿರ್ಬಂಧಿಸಲಾಗಿದ್ದು, ಸೀಮಿತ ಸಂಖ್ಯೆಯಲ್ಲಿ ಮಾತ್ರವೇ ಭಕ್ತರಿಗೆ ಪ್ರವೇಶಾವಕಾಶ ನೀಡಲಾಗುತ್ತದೆ. ಈ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಇಂಡಿಯಾ ಪೋಸ್ಟ್, ಟಿಡಿಬಿ ಜತೆ ಒಪ್ಪಂದ ಮಾಡಿಕೊಂಡು ಶಬರಿಮಲೆ ಸ್ವಾಮಿ ಪ್ರಸಾದವನ್ನು ಸ್ಪೀಡ್ ಪೋಸ್ಟ್ ಮೂಲಕ ಜನರ ಮನೆ ಬಾಗಿಲಿಗೆ ರವಾನಿಸಲು ಕ್ರಮ ಕೈಗೊಂಡಿದೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.












Click it and Unblock the Notifications