ಮುಖ್ಯಮಂತ್ರಿಗೆ ಅವಮಾನ: ನಾವು ಜಡಿದದ್ದು 119 ಕೇಸ್, 149 ಅಲ್ಲ
ತಿರುವನಂತಪುರಂ, ಜೂನ್ 13: ದೆಹಲಿ ಮೂಲದ ಪತ್ರಕರ್ತರೊಬ್ಬರನ್ನು ಬಿಡುಗಡೆಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯ, ಉತ್ತರಪ್ರದೇಶ ಸರಕಾರಕ್ಕೆ ಆದೇಶ ನೀಡಿದ ನಂತರ, ಮಾಧ್ಯಮದವರು ಮತ್ತು ಸಾರ್ವಜನಿಕರ ಮೇಲೆ ಕೇಸ್ ಜಡಿದ ಪ್ರಕರಣಗಳು ಒಂದೊಂದಾಗಿ ಹೊರಬರುತ್ತಿವೆ.
ಕೇರಳ ಸರಕಾರ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ, ಇದುವರೆಗೆ 149 ಕೇಸನ್ನು ಜನಸಾಮಾನ್ಯರ ಮೇಲೆ ಹಾಕಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ದ ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿತಾಲ ಆರೋಪಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಪಿಣರಾಯಿ, ಚೆನ್ನಿತಾಲ ಆರೋಪ ಸುಳ್ಳು. ನಾವು 149 ಜನರ ಮೇಲೆ ಕೇಸ್ ಹಾಕಿಲ್ಲ, ನಾವು ಇದುವರೆಗೆ ಕೇಸ್ ಜಡಿದದ್ದು 119 ಜನರ ಮೇಲೆ ಎಂದು ಪಿಣರಾಯಿ ವಿಜಯನ್ ಸ್ಪಷ್ಟನೆಯನ್ನು ನೀಡಿದ್ದಾರೆ.

ಸಾಮಾಜಿಕ ತಾಣದಲ್ಲಿ ಮುಖ್ಯಮಂತ್ರಿ ವಿರುದ್ದ ಅವಹೇಳನಾಕಾರಿ ಪೋಸ್ಟ್ ಹಾಕಿರುವುದಕ್ಕೆ 119 ಜನರ ಮೇಲೆ ಕೇಸ್ ಹಾಕಲಾಗಿದೆ ಎಂದು ಪಿಣರಾಯಿ ವಿಜಯನ್, ಕೇರಳ ಅಸೆಂಬ್ಲಿ ಅಧಿವೇಶನದ ವೇಳೆ ಒಪ್ಪಿಕೊಂಡಿದ್ದಾರೆ.
ಕಾನ್ಪುರ ಮೂಲದ ಮಹಿಳೆಯೊಬ್ಬರು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಮಾಡಿದ ಆರೋಪದ ವಿಡಿಯೋವನ್ನು ಪ್ರಶಾಂತ್ ಕನೋಜಿಯಾ ಎನ್ನುವ ಪತ್ರಕರ್ತ ಶೇರ್ ಮಾಡಿಕೊಂಡಿದ್ದರು. ಅದಕ್ಕಾಗಿ, ದೆಹಲಿಯ ಅವರ ಮನೆಯಿಂದ ಪೊಲೀಸರು ಅವರನ್ನು ಬಂಧಿಸಿದ್ದರು.
ಸರಕಾರದ ಕ್ರಮವನ್ನು ಪ್ರಶ್ನಿಸಿ ಪತ್ರಕರ್ತನ ಪತ್ನಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಲೇರಿದ್ದರು. ಪ್ರಶಾಂತ್ ಕನೋಜಿಯಾ ಅವರು ಯೋಗಿ ಆದಿತ್ಯನಾಥ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಶೇರ್ ಮಾಡಿದ್ದಾರಷ್ಟೆ, ಕೊಲೆ ಮಾಡಿಲ್ಲವಲ್ಲ ಎಂದು ಸುಪ್ರೀಂಕೋರ್ಟ್ ಅವರ ಬಿಡುಗಡೆಗೆ ಆದೇಶ ಹೊರಡಿಸಿತ್ತು.












Click it and Unblock the Notifications