ಕೇರಳದಲ್ಲಿ ಭಾರಿ ಮಳೆಯ ರೆಡ್ ಅಲರ್ಟ್: ಶಾಲಾ ಕಾಲೇಜುಗಳಿಗೆ ರಜೆ
ತಿರುವನಂತಪುರಂ, ಜುಲೈ 23: ಕೇರಳದಲ್ಲಿ ಕಳೆದ ವರ್ಷ ಸಂಭಂವಿಸಿದಂತೆ ಭಾರಿ ಮಳೆ, ಪ್ರವಾಹದ ರೆಡ್ ಅಲರ್ಟ್ನ್ನು ಹವಾಮಾನ ಇಲಾಖೆ ಘೋಷಿಸಿದೆ.
ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕಣ್ಣೂರು, ಕಾಸರಗೋಡಿನಲ್ಲಿ ರೆಡ್ ಅಲರ್ಟ್ ಹಾಗೂ ಕೋಳಿಕ್ಕೊಡ್, ಮಲಪ್ಪುರಂ, ವಯನಾಡ್ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್, ಪಾಲಕ್ಕಡ್, ತ್ರಿಶುರ್, ಎರ್ನಾಕಯಲಮ್, ಇಡುಕ್ಕಿಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
48 ಗಂಟೆಗಳಲ್ಲಿ ಕರ್ನಾಟಕದ ಕರಾವಳಿ, ಮಲೆನಾಡಿನಲ್ಲಿ ಮಳೆ ಇನ್ನೂ ಹೆಚ್ಚಾಗುತ್ತೆ
ಕೇರಳದಲ್ಲಿ ಕಳೆದ ಎರಡು ವಾರಗಳಲ್ಲಿ ಮಳೆಯಿಂದ 21 ಮಂದಿ ಮೃತಪಟ್ಟಿದ್ದು, 13 ನಿರಾಶ್ರಿತರ ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅತಿ ಹೆಚ್ಚು ಮಂದಿ ಕಾಸರಗೋಡಿನಲ್ಲಿ ಮೃತಪಟ್ಟಿದ್ದಾರೆ. ಕಾಸರಗೋಡಿನಲ್ಲಿ ಐದು ಮಂದಿ, ತಿರುವನಂತಪುರಂ, ಕೊಲ್ಲಂ, ಅಲಪುಳ, ಇಡುಕ್ಕಿ, ಕೋಳಿಕ್ಕೊಡ್ ಇಬ್ಬರು ಮೃತಪಟ್ಟಿದ್ದಾರೆ. ತ್ರಿಶೂರ್, ಮಲಪ್ಪುರಂನಲ್ಲಿ ತಲಾ ಒಬ್ಬರು ಮೃರತಪಟ್ಟಿದ್ದಾರೆ.
ಮುಂದಿನ ಕೆಲ ಗಂಟೆಗಳಲ್ಲಿ ವಿಪರೀತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ತಗ್ಗು, ಕರಾವಳಿ ಪ್ರದೇಶದಲ್ಲಿರುವ ಮಂದಿಯನ್ನು ಸ್ಥಳಾಂತರಿಸಲಾಗಿದೆ.
ಇದಕ್ಕೂ ಮೊದಲು ಹೆಚ್ಚಿನ ಮಳೆಯಿಂದಾಗಿ, ನಾಲ್ಕು ಅಣೆಕಟ್ಟುಗಳ ಬಾಗಿಲುಗಳನ್ನು ತೆರೆಯಲಾಗಿದ್ದು, ರಾಜ್ಯ ಸರ್ಕಾರವು ರಾಜ್ಯದಾದ್ಯಂತ ಹಲವಾರು ಪರಿಹಾರ ಶಿಬಿರಗಳನ್ನು ಸ್ಥಾಪಿಸಿದೆ.
ಸತತ ಮಳೆಯಿಂದಾಗಿ ಅಣೆಕಟ್ಟೆಗಳಲ್ಲಿ ಗರಿಷ್ಟ ಸಾಮರ್ಥ್ಯಕ್ಕಿಂತ ಹೆಚ್ಚು ನೀರು ಸಂಗ್ರಹವಾಗುವ ಭೀತಿಯಿಂದ ಇಡುಕ್ಕಿಯಲ್ಲಿರುವ ಮಲಂಕರ ಅಣೆಕಟ್ಟಿನ ಎರಡು ಕವಾಟುಗಳು ಮತ್ತು ಎರ್ನಾಕುಲಂ ಜಿಲ್ಲೆಯ ಭೂತಾಂಕೆಟ್ಟೆಯ ಒಂಬತ್ತು ಕವಾಟುಗಳು ಮತ್ತು ಕಲ್ಲರಕುಟ್ಟಿ ಮತ್ತು ಪಂಬಾ ಅಣೆಕಟ್ಟುಗಳ ತಲಾ ಒಂದು ಶಟರ್ ಅನ್ನು ಜುಲೈ 19 ಬೆಳಿಗ್ಗೆ ತೆರೆಯಲಾಯಿತು.
ಭಾರತದ ಹವಾಮಾನ ಇಲಾಖೆ (ಐಎಂಡಿ) ಬುಲೆಟಿನ್ ನಲ್ಲಿ ಕೇರಳದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ತಿಳಿಸಿದ್ದು, ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಸೂಚಿಸಿತ್ತು.
ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಹಲವಾರು ಕುಟುಂಬಗಳನ್ನು ಪೀಡಿತ ಪ್ರದೇಶಗಳಿಂದ ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.