ಕೇರಳ ಜನಾಂದೋಲನ ಮುಖಂಡೆ ಕೆ.ಆರ್ ಗೌರಿ ಅಮ್ಮ ನಿಧನ: ಯೆಚೂರಿ ಸಂತಾಪ
ತಿರುವನಂತಪುರಂ, ಮೇ 11: ಕೇರಳ ರಾಜ್ಯದ ಮಾಜಿ ಸಚಿವೆ ಹಾಗೂ ಸಿಪಿಐ(ಎಂ) ಪಕ್ಷದ ಮುಖಂಡೆ ಕೆ.ಆರ್.ಗೌರಿ ಅಮ್ಮ ಅವರು ಇಂದು (ಮಂಗಳವಾರ) ನಿಧನರಾಗಿದ್ದಾರೆ.
ಕೇರಳದ ಜನತೆಯ ಅಂದೋಲನದ ಅಪ್ರತಿಮ ನೇತಾರರಾಗಿದ್ದ ಕೆ.ಆರ್ ಗೌರಿ ಅಮ್ಮ ಅವರ ನಿಧನದ ಸುದ್ದಿ ನೋವು ಮತ್ತು ದುಃಖ ಉಂಟುಮಾಡಿದೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಶ್ರದ್ಧಾಂಜಲಿ ಅರ್ಪಿಸಿ ಹೇಳಿದ್ದಾರೆ.
ಗೌರಿ ಅಮ್ಮ ಅವರು ಕೇರಳದ 1957ರ ಇಎಂಎಸ್ ನಂಬೂದಿರಿಪಾಡ್ ನೇತೃತ್ವದ ಮೊದಲ ಕಮ್ಯುನಿಸ್ಟ್ ಮಂತ್ರಿಮಂಡಲದಲ್ಲಿ ರೆವಿನ್ಯೂ, ಅಬಕಾರಿ ಮತ್ತು ದೇವಸ್ವಂ ಮಂತ್ರಿಯಾಗಿದ್ದರು. ಅವರು ಕೇರಳದ ಭೂಸುಧಾರಣೆಗಳ ಶಿಲ್ಪಿಗಳಲ್ಲಿ ಒಬ್ಬರು ಎಂಬ ಕೀರ್ತಿಗೆ ಪಾತ್ರರಾಗಿದ್ದರು.
ಈಗಿನ ಕೇರಳ ರಚನೆಯಾಗುವ ಮೊದಲೇ ಅವರು ತಿರುವಾಂಕೂರು-ಕೊಚ್ಚಿ ಶಾಸನಸಭೆಗೆ ಎರಡು ಬಾರಿ ಚುನಾಯಿತರಾಗಿದ್ದರು. ಅವರು ರಾಜ್ಯದ ವಿವಿಧ ಸಂಪುಟಗಳಲ್ಲಿ ಮಂತ್ರಿಯಾಗಿದ್ದರು, 1994ರಲ್ಲಿ ಪಕ್ಷದಿಂದ ಉಚ್ಛಾಟನೆಗೊಂಡ ಮೇಲೆ ಯುಡಿಎಫ್ ಮಂತ್ರಿಮಂಡಲದಲ್ಲೂ ಸ್ವಲ್ಪ ಕಾಲ ಅವರು ಮಂತ್ರಿಯಾಗಿದ್ದರು. ಆದರೆ ಯುಡಿಎಫ್ನಿಂದ ಭ್ರಮನಿರಸನಗೊಂಡು ಅವರು ಕಳೆದ ಕೆಲವು ವರ್ಷಗಳಿಂದ ಎಲ್ಡಿಎಫ್ ಜತೆಗೆ ಸಹಕರಿಸುತ್ತಿದ್ದರು ಎಂದು ಯೆಚೂರಿ ನೆನಪಿಸಿಕೊಂಡಿದ್ದಾರೆ.
ಕೇರಳದ ಕಮ್ಯುನಿಸ್ಟ್ ಆಂದೋಲನದ ಇನ್ನೊಬ್ಬ ಹಿರಿಯ ನೇತಾರ ಟಿ.ವಿ ಥಾಮಸ್ರವರನ್ನು ಮದುವೆಯಾಗಿದ್ದ ಗೌರಿ ಅಮ್ಮ, 1964ರಲ್ಲಿ ಪಕ್ಷ ವಿಭಜನೆಯಾದಾಗ ಥಾಮಸ್ ಅವರು ಸಿಪಿಐನಲ್ಲೇ ಉಳಿದರೂ, ಇವರು ಸಿಪಿಐ(ಎಂ) ಜತೆಗೆ ನಿಂತರು.
ಅವರ ಸಾವಿನೊಂದಿಗೆ, 1957ರ ಇಎಂಎಸ್ ನಂಬೂದಿರಿಪಾಡ್ ನೇತೃತ್ವದ ಕಮ್ಯುನಿಸ್ಟ್ ಮಂತ್ರಿಮಂಡಲದ ಕೊನೆಯ ಸದಸ್ಯರನ್ನೂ ಕೇರಳ ಕಳೆದುಕೊಂಡಿದೆ ಎಂದಿರುವ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ, "ಕೇರಳ ತನ್ನ ಖ್ಯಾತಿವೆತ್ತ ಮತ್ತು ವ್ಯಾಪಕ ಗೌರವ, ಪ್ರಶಂಸೆಗೆ ಪಾತ್ರವಾಗಿದ್ದ ಪುತ್ರಿಯೊಬ್ಬರನ್ನು ಕಳಕೊಂಡಿದೆ" ಎಂದು ಹೇಳುವ ಮೂಲಕ ಗೌರಿ ಅಮ್ಮನ ನೆನಪಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.