ಸುಳ್ಳು ಸುದ್ದಿ ಪ್ರಕಟಿಸಿದ್ದಕ್ಕೆ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೇರಳದಲ್ಲಿ ಎಫ್ಐಆರ್
Recommended Video
ಮಲಪ್ಪುರಂ, ಜನವರಿ 24: ಕೇರಳದಲ್ಲಿ ಹಿಂದೂಗಳಿಗೆ ಕುಡಿಯಲು ನೀರು ಕೊಡದೆ ತಾರತಮ್ಯ ಮಾಡಲಾಗುತ್ತಿದೆ. ಕೇರಳ ಮತ್ತೊಂದು ಕಾಶ್ಮೀರವಾಗುತ್ತಿದೆ ಎಂದು ಟ್ವೀಟ್ ಮಾಡಿದ್ದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೇರಳ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಶೋಭಾ ಕರಂದ್ಲಾಜೆ ಅವರು ಸುಳ್ಳು ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ಧರ್ಮದ ನಡುವೆ ಒಡಕು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಅವರ ಮೇಲೆ ಆರೋಪ ಹೊರಿಸಲಾಗಿದೆ.
ಕೇರಳದ ಮಲಪ್ಪುರಂನ ಕುಟ್ಟಿಪುರಂ ಪಂಚಾಯ್ತಿಯಲ್ಲಿ ಕುಡಿಯುವ ನೀರಿನ ಅಭಾವ ಹಲವು ದಿನಗಳಿಂದ ಇದೆ. ಅವರು ನೀರಿಗಾಗಿ ಕೊಡಪಾನ ಇಟ್ಟು ನಿಂತಿರುವ ದೃಶ್ಯ ಮಾಮೂಲಿ. ಈ ಚಿತ್ರವನ್ನು ಬಳಸಿಕೊಂಡಿದ್ದ ಬಲಪಂಥೀಯ ಸಂಘಟನೆಯೊಂದು ಸಿಎಎ ಪರವಾಗಿ ನಿಂತಿದ್ದಕ್ಕೆ ಹಿಂದೂಗಳಿಗೆ ನೀರು ಕೊಡದೆ ತಾರತಮ್ಯ ಎಸಗಲಾಗಿದೆ ಎಂಬ ಪ್ರಚಾರ ಮಾಡಿತ್ತು ಎನ್ನಲಾಗಿದೆ. ಇದನ್ನು ನಂಬಿದ ಶೋಭಾ ಕರಂದ್ಲಾಜೆ ಹಾಗೆಯೇ ಟ್ವೀಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಹಿಂದೂಗಳಿಗೆ ನೀರು ಪೂರೈಕೆ
ಕೇರಳ ಮತ್ತೊಂದು ಕಾಶ್ಮೀರ ಆಗುವತ್ತ ಮಗುವಿನ ಹೆಜ್ಜೆಗಳನ್ನು ಇರಿಸುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆ 2019ಅನ್ನು ಬೆಂಬಲಿಸುತ್ತಿರುವುದಕ್ಕೆ ಮಲಪ್ಪುರಂನ ಕುಟ್ಟಿಪುರಂ ಪಂಚಾಯತ್ನಲ್ಲಿನ ಹಿಂದೂಗಳಿಗೆ ನೀರು ಪೂರೈಕೆ ಮಾಡಲು ನಿರಾಕರಿಸಲಾಗಿದೆ ಎಂದು ಶೋಭಾ ಟ್ವೀಟ್ ಮಾಡಿದ್ದರು.

ಶಾಂತಿಯುತ ಅಸಹಿಷ್ಣುತೆ
ಪಂಚಾಯ್ತಿ ನೀರು ಒದಗಿಸಲು ನಿರಾಕರಿಸಿರುವುದರಿಂದಾಗಿ ಸೇವಾ ಭಾರತಿ ಜನರಿಗೆ ನೀರು ಪೂರೈಸುತ್ತಿದೆ. ದೇವರ ಸ್ವಂತ ನಾಡಿನಲ್ಲಿ ನಡೆಯುತ್ತಿರುವ ಶಾಂತಿಯುತ ಅಸಹಿಷ್ಣುತೆಯನ್ನು ರಾಷ್ಟ್ರೀಯ ಮಾಧ್ಯಮಗಳು ಇದನ್ನು ಪ್ರಸಾರ ಮಾಡುತ್ತದೆಯೇ? ಎಂದು ಜ. 22ರಂದು ಶೋಭಾ ಟ್ವಿಟ್ಟರ್ನಲ್ಲಿ ಪ್ರಶ್ನಿಸಿದ್ದರು.

ಐಪಿಸಿ ಸೆಕ್ಷನ್ 153 (ಎ) ಅಡಿ ಎಫ್ಐಆರ್
ಶೋಭಾ ಕರಂದ್ಲಾಜೆ ಮಾಡಿರುವ ಟ್ವೀಟ್ ವಿರುದ್ಧ ಮಲಪ್ಪುರಂನ ನಿವಾಸಿಯಾಗಿರುವ ಸುಪ್ರೀಂಕೋರ್ಟ್ ವಕೀಲ ಸುಭಾಷ್ ಚಂದ್ರನ್ ಕೆಆರ್ ದೂರು ನೀಡಿದ್ದರು. ಅದರ ಆಧಾರದಲ್ಲಿ ಪೊಲೀಸರು ಐಪಿಸಿ ಸೆಕ್ಷನ್ 153 (ಎ) ಅಡಿ ವಿಭಿನ್ನ ಗುಂಪುಗಳ ನಡುವೆ ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ ಮತ್ತು ಭಾಷೆಯ ಹೆಸರಿನಲ್ಲಿ ವೈರತ್ವ ಪ್ರಚೋದನೆ ಮಾಡಿದ ಪ್ರಕರಣ ದಾಖಲಿಸಲಾಗಿದೆ.

ಒಂದು ವರ್ಷದಿಂದ ನೀರಿನ ಕೊರತೆ
ಕುಟ್ಟಿಪುರಂ ಪಂಚಾಯ್ತಿಯಲ್ಲಿ ಒಂದು ವರ್ಷದಿಂದಲೂ ಕುಡಿಯುವ ನೀರಿನ ಅಭಾವವಿದೆ. ಜನರು ವಾಸಿಸುವ ಕಾಲೋನಿಗಳಿಗೆ ಖಾಸಗಿ ವ್ಯಕ್ತಿಯೊಬ್ಬರ ಬೋರ್ವೆಲ್ನಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಈ ಮೋಟಾರ್ಅನ್ನು ಕೃಷಿ ಕೆಲಸಕ್ಕಾಗಿ ತೆಗೆದುಕೊಂಡು ಹೋಗಲಾಗಿತ್ತು. ಕೇರಳ ರಾಜ್ಯ ವಿದ್ಯುಚ್ಛಕ್ತಿ ಮಂಡಳಿ ಆ ವ್ಯಕ್ತಿಗೆ ಇತ್ತೀಚೆಗೆ ಎಚ್ಚರಿಕೆ ನೀಡಿತ್ತು. ಮೋಟಾರ್ಅನ್ನು ಬೇರೆ ಯಾವುದೇ ಉದ್ದೇಶಕ್ಕೆ ಬಳಸಿದರೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗುವುದಾಗಿ ಎಚ್ಚರಿಸಲಾಗಿತ್ತು. ಬಿಕ್ಕಟ್ಟು ತೀವ್ರಗೊಂಡಿದ್ದರಿಂದ ಆತ ಪಂಪ್ ಬಳಕೆಯನ್ನು ನಿಲ್ಲಿಸಿದ್ದ ಎಂದು ಕುಟ್ಟಿಪುರಂ ಪೊಲೀಸ್ ಸ್ಟೇಷನ್ ಎಸ್ಐ ಅರವಿಂದ್ ಇಎ ತಿಳಿಸಿದ್ದಾರೆ.

ಸೇವಾ ಭಾರತಿ ಪ್ರಚಾರ
ಇಲ್ಲಿನ ಕುಟುಂಬಗಳು ನೀರಿನ ತೊಂದರೆ ಅನುಭವಿಸುತ್ತಿರುವ ಸಮಸ್ಯೆಯ ಕುರಿತು ಬಲಪಂಥೀಯ ಸಂಘಟನೆ ಸೇವಾ ಭಾರತಿ ಈ ರೀತಿ ಪ್ರಚಾರ ಮಾಡುತ್ತಿದೆ. ಈ ಪ್ರದೇಶದ ಹಲವು ಕುಟುಂಬಗಳಿಗೆ ಕೆಲವು ದಿನಗಳಿಂದ ಸೇವಾ ಭಾರತಿ ನೀರು ಪೂರೈಕೆ ಮಾಡುತ್ತಿದೆ ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ತಿಳಿಸಿದರು.












Click it and Unblock the Notifications