''ಶ್ರೀಧರನ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು ಬಹುದೊಡ್ದ ಜೋಕ್''
ಪಾಲಕ್ಕಾಡ್, ಮಾರ್ಚ್ 29: ಕೇರಳ ವಿಧಾನಸಭೆಯಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಕ್ಷೇತ್ರಗಳ ಪೈಕಿ ಪಾಲಕ್ಕಾಡ್ ಕ್ಷೇತ್ರವೂ ಒಂದು. ಎನ್ಡಿಎ ಅಭ್ಯರ್ಥಿಯಾಗಿ ಇ ಶ್ರೀಧರನ್ ಅವರನ್ನು ಕಣಕ್ಕಿಳಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಲಾಗಿದೆ. ಆದರೆ, ಇದು ಈ ಚುನಾವಣೆಯಲ್ಲಿ ದೊಡ್ಡ ಹಾಸ್ಯದ ಸಂಗತಿ ಎಂದು ಪತ್ರಕರ್ತ, ಚಿತ್ರಕರ್ಮಿ ರೆಂಜಿ ಪನಿಕಾರ್ ಅಭಿಪ್ರಾಯಪಟ್ಟಿದ್ದಾರೆ.
''ಯಾರನ್ನಾದರೂ ಅತಿಯಾಗಿ ಉಬ್ಬಿಸಿ ನಂತರ ಟುಸ್ ಎನಿಸುವಂತೆ ಮಾಡುವುದಾದರೆ ಅದು ಮೆಟ್ರೋ ಮ್ಯಾನ್ ಇ ಶ್ರೀಧರನ್ ಅವರ ಪರಿಸ್ಥಿತಿಯನ್ನು ಉದಾಹರಿಸಬಹುದು'' ಎಂದು ರೆಂಜಿ ಹೇಳಿದ್ದಾರೆ.
ಕೇರಳ: ಪಾಲಕ್ಕಾಡ್ನಿಂದ ಮೆಟ್ರೋ ಮ್ಯಾನ್ ಶ್ರೀಧರನ್ ಸ್ಪರ್ಧೆ
ಅವರು ಯಾವುದೇ ಅದ್ಭುತಗಳನ್ನು ಸೃಷ್ಟಿಸಿಲ್ಲ, ಅಂಕಿ ಅಂಶಗಳು ಅಭಿವೃದ್ಧಿ ಕನಸು ಕಟ್ಟಬಹುದು, ನಿಜವಾಗಿಸುವುದು ಸುಲಭವಲ್ಲ, ನನ್ನ ಮನಸ್ಸು ಇನ್ನೂ ಅವರನ್ನು ಗೆಲ್ಲುವ ಅಭ್ಯರ್ಥಿಯಾಗಿ ಕಾಣಲು ಸಮ್ಮತಿಸುತ್ತಿಲ್ಲ. ಇ ಶ್ರೀಧರನ್ ಸುತ್ತಾ ಭ್ರಮಾಲೋಕ ಸೃಷ್ಟಿಸಲಾಗುತ್ತಿದೆ ಎಂದು ಪನಿಕಾರ್ ವಿಶ್ಲೇಷಿಸಿದ್ದಾರೆ.
ಪಾಲಕ್ಕಾಡ್ ಕ್ಷೇತ್ರದಲ್ಲಿ ಎನ್ಡಿಎ ತನ್ನ ಪ್ರಭಾವವನ್ನು ಉಳಿಸಿಕೊಳ್ಳಬೇಕಾದರೆ ರಾಜಕೀಯ ಅರಿತ ಅಭ್ಯರ್ಥಿಯ ಅಗತ್ಯವಿತ್ತು. ಶ್ರೀಧರನ್ ಗೆಲ್ಲಬಹುದು ಅಥವಾ ಸಿಎಂ ಆಗಬಹುದು ಆದರೆ, ನನ್ನ ಅಭಿಪ್ರಾಯ ಮಾತ್ರ ಬದಲಾಗಲ್ಲ. ವಾಸ್ತವವನ್ನು ಅರಿತವರಿಗೆ ಇಂಥ ಅಭ್ಯರ್ಥಿಗಳು ಹಾಸ್ಯಾಸ್ಪದವಾಗಿ ಕಾಣುತ್ತಾರೆ ಎಂದಿದ್ದಾರೆ.
ಕೇರಳದಲ್ಲಿ 140 ಕ್ಷೇತ್ರಗಳ ಪೈಕಿ ಬಿಜೆಪಿ 115 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ಮಿಕ್ಕ 25 ಸ್ಥಾನಗಳು ನಾಲ್ಕು ಮಿತ್ರಪಕ್ಷಗಳಿಗೆ ಹಂಚಿಕೆಯಾಗಿದೆ. ಏಪ್ರಿಲ್ 6 ರಂದು ಕೇರಳದಲ್ಲಿ 140 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಮಲಪ್ಪುರಂ ಉಪ ಚುನಾವಣೆಗೂ ಅಂದೇ ಮತದಾನ ನಿಗದಿಯಾಗಿದೆ. ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ.
2020ರಲ್ಲಿ 140 ಸ್ಥಾನಗಳ ವಿಧಾನಸಭೆಯ ಬಲಾಬಲ: ಸಿಪಿಐ (ಎಂ) ನೇತೃತ್ವದ ಎಲ್ ಡಿ ಎಫ್ 93 ಸ್ಥಾನ, ಕಾಂಗ್ರೆಸ್ ನೇತೃತ್ವ ಯುಡಿಎಫ್ 42 ಹಾಗೂ ಬಿಜೆಪಿ ನೇತೃತ್ವದ ಎನ್ಡಿಎ 1 ಸ್ಥಾನ ಹೊಂದಿದೆ.