ಅಯ್ಯಪ್ಪ ಭಕ್ತರೇ ಗಮನಿಸಿ: ಶಬರಿಮಲೆ ಏರಲು ಈ ದಾಖಲೆ ಅತ್ಯಗತ್ಯ
ತಿರುವನಂತಂಪುರಂ, ಡಿ. 20: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವರ ಸನ್ನಿಧಿಗೆ ಬರುವ ಭಕ್ತರ ಸಂಖ್ಯೆಗೆ ವಿಧಿಸಲಾಗಿರುವ ಗರಿಷ್ಠ ಮಿತಿಯನ್ನು ಹೆಚ್ಚಿಸಲು ತಿರುವಾಂಕೂರು ದೇವಸ್ವಂ ಮಂಡಳಿ ನಿರ್ಧರಿಸಿದ್ದು, ತಿಳಿದಿರಬಹುದು. ಡಿಸೆಂಬರ್ 27ರಿಂದ ಹೆಚ್ಚುವರಿ ಭಕ್ತ ಸಮೂಹವನ್ನು ಸಂಭಾಳಿಸಲು ದೇಗುಲ ಮಂಡಳಿ ಸಜ್ಜಾಗಿದೆ.
ದೇವಸ್ಥಾನಕ್ಕೆ ಬರುವ ಭಕ್ತರು ಎಲ್ಲ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ಈ ಸಂಬಂಧ ಕೇರಳ ಆರೋಗ್ಯ ಇಲಾಖೆ ಪರಿಷ್ಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿ ಪ್ರಕಾರ, ಭಕ್ತರು ಭೇಟಿಗೂ 48 ಗಂಟೆಗಳ ಮುನ್ನ ಆರ್ಟಿ-ಪಿಸಿಆರ್ ಪರೀಕ್ಷೆ ಮೂಲಕ ಕೋವಿಡ್ ಸೋಂಕಿನ ಪರೀಕ್ಷೆಗೆ ಒಳಗಾಗಬೇಕು ಎಂಬ ನಿಬಂಧನೆ ಹಾಕಲಾಗಿದೆ.
ಈ ನಿಬಂಧನೆಗಳ ಜೊತೆಗೆ ಕೊವಿಡ್ 19 ನೆಗಟಿವ್ ಪ್ರಮಾಣ ಪತ್ರ ಅತ್ಯಗತ್ಯ. ಆರ್ಟಿ-ಪಿಸಿಆರ್ ಪರೀಕ್ಷೆ ನಡೆಸಿದ್ದರೂ ನೆಗಟಿವ್ ಎಂದು ನಮೂದಿಸಿರುವ ಇತ್ತೀಚಿನ ವೈದ್ಯಕೀಯ ದಾಖಲೆ ಇಲ್ಲದಿದ್ದರೆ ಸನ್ನಿಧಾನಕ್ಕೆ ಪ್ರವೇಶ ನಿರ್ಬಂಧಿಸಲಾಗುತ್ತದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಮುಖ್ಯಸ್ಥ ಎನ್ ವಾಸು ಹೇಳಿದ್ದಾರೆ.

ಶಬರಿಮಲೆಗೆ ಮಂಡಲ-ಮಕರವಿಳಕ್ಕು ಅವಧಿಯಲ್ಲಿ ಭೇಟಿ ನೀಡುವ ಭಕ್ತರ ಸಂಖ್ಯೆಗೆ ಕೊರೊನಾ ವೈರಸ್ ಸೋಂಕಿನ ಕಾರಣದಿಂದ ಮಿತಿ ಹೇರಲಾಗಿತ್ತು. ಕಳೆದ ತಿಂಗಳಷ್ಟೇ ಭಕ್ತರ ಪ್ರವೇಶದ ಸಂಖ್ಯೆಯನ್ನು 1,000 ದಿಂದ 2,000ಕ್ಕೆ ವಾರದ ದಿನಗಳಲ್ಲಿ ಮತ್ತು ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ 3,000ಕ್ಕೆ ಹೆಚ್ಚಿಸಲಾಗಿತ್ತು. ಈಗ ಹೈಕೋರ್ಟ್ ಸೂಚನೆಯಂತೆ ದೈನಂದಿನ ಭಕ್ತರ ಸಂಖ್ಯೆಯ ಮಿತಿಯನ್ನು 5,000ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ.
ಡಿಸೆಂಬರ್ 31 ರಿಂದ ಜನವರಿ 19ರ ತನಕ ಮಕರವಿಳಕ್ಕು ಹಬ್ಬದ ಋತು ಆರಂಭವಾಗಲಿದೆ. ಆರ್ಟಿ-ಪಿಸಿಆರ್ ಪರೀಕ್ಷೆ ನಡೆಸಿ, ಕೊವಿಡ್ 19 ನೆಗಟಿವ್ ಇದ್ದ ಭಕ್ತರು ಮಾತ್ರ ಶಬರಿ ಬೆಟ್ಟವನ್ನೇರಬಹುದಾಗಿದೆ. ಈ ಮುಂಚೆ ಆಂಟಿಜನ್ ಪರೀಕ್ಷೆ ವರದಿಯಲ್ಲಿ ನೆಗಟಿವ್ ಎಂದರೆ ಬಂದರೆ ಸಾಕಿತ್ತು. ಆದರೆ, ಈಗ ಹೊಸ ನಿಬಂಧನೆ ಹಾಕಲಾಗಿದೆ.












Click it and Unblock the Notifications