ಕೇರಳದಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದಿದ್ದಕ್ಕೆ ತಲೆ ಬೋಳಿಸಿಕೊಂಡ ಮಹಿಳಾ ಮುಖ್ಯಸ್ಥೆ!
ತಿರುವನಂತಪುರಂ, ಮಾರ್ಚ್ 15: ಕೇರಳ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಸ್ಪರ್ಧಿಸುತ್ತಿರುವ 92 ಕ್ಷೇತ್ರಗಳ ಪೈಕಿ 86 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಬಾಕಿ ಉಳಿದ 6 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಇನ್ನು ಕೆಲ ದಿನಗಳಲ್ಲೇ ಬಿಡುಗಡೆಗೊಳಿಸಲಾಗುವುದು ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಮುಲ್ಲಪಲ್ಲಿ ರಾಮಚಂದ್ರನ್ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೈಕಮಾಂಡ್ ಜೊತೆಗೆ ಚರ್ಚಿಸಿದ ಬಳಿಕ ಆರು ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಪ್ರಕಟಿಸಲಾಗುವುದು ಎಂದರು. ಕೆ ಸಿ ಜೋಸೆಫ್ ಅವರ ಹೊರತಾಗಿ ಕಾಂಗ್ರೆಸ್ ತನ್ನ ಎಲ್ಲಾ ಹಾಲಿ ಶಾಸಕರಿಗೆ ಟಿಕೆಟ್ ಘೋಷಿಸಿದೆ.
ಕೇರಳ: ಪಾಲಕ್ಕಾಡ್ನಿಂದ ಮೆಟ್ರೋ ಮ್ಯಾನ್ ಶ್ರೀಧರನ್ ಸ್ಪರ್ಧೆ
ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಯುವಕರಿಗೆ ಹೆಚ್ಚಿನ ಆದ್ಯತೆಯನ್ನು ನೀಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಗೋಚರಿಸುತ್ತದೆ. 92 ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ 46 ಕಾಂಗ್ರೆಸ್ ಅಭ್ಯರ್ಥಿಗಳು 25-50 ವರ್ಷದೊಳಗಿನವರೇ ಆಗಿದ್ದಾರೆ. ಬಾಕಿ ಉಳಿದ ಶೇ.50ರಷ್ಟು ಕ್ಷೇತ್ರಗಳಲ್ಲಿ ಹಿರಿಯರಿಗೆ ಅವಕಾಶ ನೀಡಲಾಗಿದೆ.
ಟಿಕೆಟ್ ನೀಡದ್ದಕ್ಕೆ ತಲೆ ಬೋಳಿಸಿಕೊಂಡ ಕಾರ್ಯಕರ್ತೆ:
ಭಾನುವಾರ ಕಾಂಗ್ರೆಸ್ ಬಿಡುಗಡೆಗೊಳಿಸಿದ 86 ಅಭ್ಯರ್ಥಿಗಳ ಪಟ್ಟಿಗೆ ಪರ-ವಿರೋಧ ವ್ಯಕ್ತವಾಗಿದೆ. ಎತ್ತುಮಾನೂರ್ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಲು ಕಾಂಗ್ರೆಸ್ ನಿರಾಕರಿಸಿದ ಹಿನ್ನೆಲೆ ಕೇರಳದ ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ಲಥಿಕಾ ಸುಭಾಷ್ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಮಹಿಳಾ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಅವರು, ಪಕ್ಷದ ಕಚೇರಿ ಎದುರಿನಲ್ಲೇ ತಲೆ ಬೋಳಿಸಿಕೊಳ್ಳುವ ಮೂಲಕ ಪ್ರತಿರೋಧ ತೋರಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯ ಹೈಲೇಟ್ಸ್:
ಭಾರತೀಯ ಖಾತೆ ಮತ್ತು ಲೆಕ್ಕಪರಿಶೋಧಕ ಸೇವೆಯನ್ನು ತ್ಯಜಿಸಿದ ಡಾ.ಪಿ.ಸಾರಿನ್, ಸಾರ್ವಜನಿಕ ಆರೋಗ್ಯ ತಜ್ಞ ಡಾ.ಎಸ್. ಎಸ್. ಲಾಲ್ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿದೆ. ಇದರ ಜೊತೆಗೆ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ತಮ್ಮ ಆಪ್ತ ಸಹಾಯಕ ಕೆ ಬಾಬು ಅವರನ್ನು ತ್ರಿಪ್ಪುನಿಥುರಾ ಕ್ಷೇತ್ರದಿಂದ ಕಣಕ್ಕಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಡಕಾರ್ ಸಂಸದ ಕೆ ಮುರಳೀಧರನ್ ಅವರಿಗೆ ನೆಮೊಮ್ ಕ್ಷೇತ್ರದಿಂದ ಸ್ಪರ್ಧಿಸುವುದಕ್ಕೆ ಟಿಕೆಟ್ ನೀಡಿರುವುದು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿನ ಇನ್ನೊಂದು ಪ್ರಮುಖ ಅಂಶವಾಗಿದೆ. 2016ರಲ್ಲಿ ಓ ರಾಜಗೋಪಾಲ್ 8000 ಮತಗಳಿಂದ ಜಯ ಗಳಿಸಿದ ಕ್ಷೇತ್ರದಲ್ಲಿ ಕೆ ಮುರಳೀಧರನ್ ಅವರನ್ನು ಕಣಕ್ಕಿಳಿಸಿದೆ. ಆ ಮೂಲಕ ಮಾಜಿ ಮುಖ್ಯಮಂತ್ರಿ ಕರುಣಾಕರನ್ ಅವರ ಪುತ್ರ ಕೆ ಮುರಳೀಧರನ್ ಅವರಿಗೆ ನೀಡಿದ ಭರವಸೆಯನ್ನು ಈಡೇರಿಸಿದೆ.