ಕೇರಳ: ಬಿಜೆಪಿ, ಸಿಪಿಎಂ ಮುಖಂಡರ ಮನೆ ಮೇಲೆ ಕಚ್ಚಾಬಾಂಬ್ ದಾಳಿ
ತಿರುವನಂತಪುರಂ, ಜನವರಿ 05: ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರು ಪ್ರವೇಶಿಸಿದ ಬೆನ್ನಲ್ಲೆ ಕೇರಳದಲ್ಲಿ ಹಿಂಸಾಚಾರ ಆರಂಭವಾಗಿದ್ದು, ಬಿಜೆಪಿ ಹಾಗೂ ಸಿಪಿಎಂ ಮುಖಂಡರ ಮನೆ ಮೇಲೆ ಕಚ್ಚಾ ಬಾಂಬ್ ದಾಳಿ ಆಗಿದೆ.
ತಲ್ಲಸರಿ ಕ್ಷೇತ್ರದ ಸಿಪಿಎಂ ಶಾಸಕ ಎಎನ್ ಶಮ್ಶೇರ್ ಹಾಗೂ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಪಿ.ಸಾಯಿ ಅವರುಗಳ ಮನೆಯ ಮೇಲೆ ಶುಕ್ರವಾರ ರಾತ್ರಿ ಕಚ್ಚಾ ಬಾಂಬ್ ದಾಳಿ ನಡೆದಿದೆ. ಶುಕ್ರವಾರದಂದೇ ತಡರಾತ್ರಿ ಬಿಜೆಪಿ ರಾಜ್ಯಸಭಾ ಸದಸ್ಯ ವಿ.ಮುರಳೀಧರನ್ ಅವರ ಮನೆಯ ಮೇಲೂ ದಾಳಿ ನಡೆದಿದೆ.
ಸಿಪಿಎಂ ಶಾಸಕ ಶಮ್ಶೇರ್ ಅವರ ಮನೆಯ ಮೇಲೆ ಶುಕ್ರವಾರ ರಾತ್ರಿ 10:15 ಕ್ಕೆ ದಾಳಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ದ್ವಿಚಕ್ರವಾಹನದಲ್ಲಿ ಬಂದ ದಾಳಿಕೋರರು ಬಾಂಬ್ ಎಸೆದು ಪರಾರಿ ಆಗಿದ್ದಾರೆ. ಆದರೆ ಆ ಸಮಯದಲ್ಲಿ ಶಾಸಕ ಶಮ್ಶೇರ್ ಮನೆಯಲ್ಲಿರಲಿಲ್ಲ. ಅವರ ಕುಟುಂಬಸ್ತರು ಮಾತ್ರವೇ ಇದ್ದರು.

ಬಿಜೆಪಿ ಎಂಪಿ ವಿ.ಮುರಳೀಧರನ್ ಅವರ ಮನೆಯ ಮೇಲೆ ತಡರಾತ್ರಿ ದಾಳಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಕಚ್ಚಾ ಬಾಂಬ್ ದಾಳಿಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಆದರೆ ಮನೆಗಳ ಕೆಲವು ಭಾಗಗಳು ಹಾನಿಗೆ ಒಳಗಾಗಿವೆ.
ಶಬರಿಮಲೆಗೆ ಇಬ್ಬರು ಮಹಿಳೆಯರು ಜನವರಿ 1 ರಂದು ತಡರಾತ್ರಿ ಪ್ರವೇಶಿಸಿದ ಬಳಿಕ ಶಬರಿಮಲೆ ಹಾಗೂ ಕೇರಳದಾದ್ಯಂತ ಹಿಂಸಾಚಾರ, ಪ್ರತಿಭಟನೆಗಳು ಹೆಚ್ಚಾಗಿವೆ. ಮುನ್ನೆಚ್ಚರಿಕಾ ಕ್ರಮವಾಗಿ ರೌಡಿ ಶೀಟರ್ಗಳು ಹಾಗೂ ಪ್ರತಿಭಟನೆ ಮತ್ತು ಹಿಂಸಾಚಾರಕ್ಕೆ ಕುಮ್ಮಕ್ಕು ಕೊಡುವ ಗುಮಾನಿ ಇರುವ 1400 ಜನರನ್ನು ಪೊಲೀಸರು ಬಂಧಿಸಿದ್ದಾರೆ.












Click it and Unblock the Notifications