ಕೇರಳದಲ್ಲಿ ಎಎಪಿ-ಟ್ವೆಂಟಿ20 ಮೈತ್ರಿ; ಉಚಿತ ವಿದ್ಯುತ್ ಭರವಸೆ
ಕೊಚ್ಚಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಪಂಜಾಬ್ ರಾಜ್ಯದಲ್ಲಿ ಸರಕಾರ ರಚಿಸಿದ ಬಳಿಕ ಇನ್ನಷ್ಟು ಹುರುಪು ಪಡೆದಿದೆ. ಇನ್ನೂ ಹಲವು ರಾಜ್ಯಗಳಲ್ಲಿ ಆಮ್ ಆದ್ಮಿಯನ್ನು ವಿಸ್ತರಿಸುವ ಸಂಕಲ್ಪದಲ್ಲಿರುವ ಅರವಿಂದ್ ಕೇಜ್ರಿವಾಲ್ ಇದೀಗ ಕೇರಳ ರಾಜ್ಯದಲ್ಲಿ ಹೊಸ ಮೈತ್ರಿಕೂಟವನ್ನು ಪ್ರಕಟಿಸಿದ್ದಾರೆ. ಕೇರಳದ ಟ್ವೆಂಟಿ20 ಪಕ್ಷದ ಜೊತೆ ಆಮ್ ಆದ್ಮಿ ಪಕ್ಷ ಮೈತ್ರಿ ಮಾಡಿಕೊಂಡಿದೆ ಎಂದು ಹೇಳಿದ ಅವರು ಈ ಮೈತ್ರಿಕೂಟಕ್ಕೆ ಜನತಾ ಕಲ್ಯಾಣ ಮೈತ್ರಿಕೂಟ (ಪೀಪಲ್ಸ್ ವೆಲ್ಫೇರ್ ಅಲೈಯನ್ಸ್) ಎಂದು ಹೆಸರಿಟ್ಟಿದ್ದಾರೆ. ಇದರೊಂದಿಗೆ ಕೇರಳದಲ್ಲಿ ನಾಲ್ಕನೇ ಮೈತ್ರಿಕೂಟ ಉದಯವಾದಂತಾಗಿದೆ.
"ಈಗ ಕೇರಳದಲ್ಲಿ ಎಲ್ಡಿಎಫ್, ಯುಡಿಎಫ್ ಮತ್ತು ಎನ್ಡಿಎ ಮೈತ್ರಿಕೂಟಗಳಿವೆ. ನಮ್ಮದು ಜನತಾ ಕಲ್ಯಾಣ ಮೈತ್ರಿಕೂಟ ಆಗಿದೆ. ಕೇರಳದಲ್ಲಿ ಈಗ ನಾಲ್ಕು ರಾಜಕೀಯ ಮೈತ್ರಿಕೂಟಗಳಾದಂತಾಗಿದೆ" ಎಂದು ಇಲ್ಲಿ ಭಾನುವಾರ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಅರವಿಂದ್ ಕೇಜ್ರಿವಾಲ್ ತಿಳಿಸಿದರು.
ಕೇರಳಕ್ಕೆ ಡೆಲ್ಲಿ ಮಾಡೆಲ್:
ಆಮ್ ಆದ್ಮಿ ಪಕ್ಷದ ಸರಕಾರ ದೆಹಲಿಯಲ್ಲಿ ಜಾರಿಗೆ ತಂದ ಅಭಿವೃದ್ಧಿ ಮಾದರಿಯನ್ನು ಕೇರಳದಲ್ಲೂ ತರಲಾಗುವುದು. ಇಲ್ಲಿ ಅಧಿಕಾರಕ್ಕೆ ಬಂದರೆ ಉಚಿತವಾಗಿ ಜನರಿಗೆ ವಿದ್ಯುತ್ ನೀಡಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಭರವಸೆ ನೀಡಿದರು.

"ದೆಹಲಿಯಲ್ಲಿ ನಿರಂತರವಾಗಿ ಹಾಗು ಉಚಿತವಾಗಿ ವಿದ್ಯುತ್ ಸರಬರಾಜು ಮಾಡುತ್ತಿರುವುದರಿಂದ ಅಲ್ಲಿನ ಇನ್ವರ್ಟರ್ ಮತ್ತು ಜನರೇಟರ್ ಶಾಪ್ಗಳು ಬಾಗಿಲು ಮುಚ್ಚಿವೆ. ನೀವು ಕೇರಳಿಗರಿಗೂ ಉಚಿತ ವಿದ್ಯುತ್ ಬೇಡವಾ?" ಎಂದು ಅವರು ಕೇಳಿದರು.
ದೆಹಲಿಯಲ್ಲಿ ಕನಿಷ್ಠ ವೇತನ 15 ಸಾವಿರ ರೂ ಗಿಂತ ಹೆಚ್ಚಿದೆ. ಅಲ್ಲಿನ ಜನರು ಇತರ ಬೇರೆ ಬೇರೆ ಸವಲತ್ತುಗಳನ್ನೂ ಪಡೆಯುತ್ತಾರೆ ಎಂದು ಹೇಳಿಕೊಂಡ ಅವರು, ಎಎಪಿಗೆ ಅಧಿಕಾರ ಕೊಟ್ಟರೆ ಇವೆಲ್ಲವನ್ನೂ ಕೇರಳದ ಜನರಿಗೂ ನೀಡಲಾಗುದು ಎಂದರು.

ದೇವರ ಕೃಪೆ ಎಂದ ಕೇಜ್ರಿವಾಲ್:
"ಕೇರಳ ದೇವರ ನಾಡು ಎಂದು ಖ್ಯಾತವಾಗಿದೆ. ಎಂಥ ಅದ್ಥುತ ಸ್ಥಳ ಮತ್ತು ಅದ್ಭುತ ಜನರು. ಹತ್ತು ವರ್ಷಗಳ ಹಿಂದೆ ಅರವಿಂದ್ ಕೇಜ್ರಿವಾಲ್ ಅಂದ್ರೆ ಯಾರಿಗೂ ಗೊತ್ತಿರಲಿಲ್ಲ. ಇವತ್ತು ದೆಹಲಿ ಮತ್ತು ಪಂಜಾಬ್ ರಾಜ್ಯಗಳಲ್ಲಿ ನಮ್ಮ ಸರಕಾರ ಇದೆ. ಇದೆಲ್ಲವೂ ಆ ದೇವರ ಕೃಪೆಯಿಂದ ಆಗಿದೆ. ಈಗ ಕೇರಳದಲ್ಲೂ ಎಎಪಿ ಸರಕಾರ ರಚನೆ ಆಗಬೇಕೆಂದು ಯಾರು ಬಯಸುತ್ತೀರಿ?" ಎಂದು ಸಭೆಯಲ್ಲಿ ಜನರನ್ನು ಕೇಜ್ರಿವಾಲ್ ಕೇಳಿದರು.
ಈ ಸಮಾವೇಶದಲ್ಲಿ ಟ್ವೆಂಟಿ20 ಪಕ್ಷದ ಅಧ್ಯಕ್ಷ ಸಬು ಜೇಕಬ್ ಉಪಸ್ಥಿತರಿದ್ದರು. ಕೊಚ್ಚಿಯ ತಿರುಕ್ಕಾಕ್ಕರ ವಿಧಾನಸಭೆಗೆ ಉಪಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಆಮ್ ಆದ್ಮಿ ಮತ್ತು ಟ್ವೆಂಟಿ-20 ಪಕ್ಷಗಳು ಜಂಟಿಯಾಗಿ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications