ಕೇರಳ: ತಲೆಗೂದಲಿಗೆ ಸೀಮೆಎಣ್ಣೆ ಹಾಕಿ ನೇರಗೊಳಿಸಲು ಯತ್ನಿಸಿ ಯುವಕ ಸಾವು
ಕೇರಳ, ಮಾರ್ಚ್ 25: ತಲೆಗೂದಲನ್ನು ನೇರಗೊಳಿಸಲು ಸೀಮೆಎಣ್ಣೆ ಹಾಕಿ ಬೆಂಕಿ ಹಚ್ಚಿಕೊಂಡಿರುವ ಪರಿಣಾಮ ಯುವಕ ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ನಡೆದಿದೆ.
ಯೂಟ್ಯೂಬ್ ವಿಡಿಯೋ ಒಂದನ್ನು ನೋಡಿಕೊಂಡು ಬಾಲಕ ತಲೆ ಕೂದಲಿಗೆ ಸೀಮೆ ಎಣ್ಣೆ ಹಾಕಿ ಬೆಂಕಿಕಡ್ಡಿ ಬಳಸಿ ನೇರಗೊಳಿಸಲು ಮುಂದಾಗಿದ್ದಾನೆ ಆಗ ಬೆಂಕಿ ಹೊತ್ತಿಕೊಂಡ ಪರಿಣಾಮ ಯುವಕ ಮೃತಪಟ್ಟಿದ್ದಾನೆ.
ಬಾಂಗ್ಲಾ ರೊಹಿಂಗ್ಯಾ ಶಿಬಿರದ ಅಗ್ನಿ ಅವಘಡದಲ್ಲಿ 15 ಮಂದಿ ಸಾವು
ಮೃತ ಬಾಲಕನನ್ನು ಶಿವನಾರಾಯಣನ್ ಎಂದು ಗುರುತಿಸಲಾಗಿದ್ದು, 7ನೇ ತರಗತಿ ಓದುತ್ತಿದ್ದ ಎಂಬುದು ತಿಳಿದುಬಂದಿದೆ. ಸುಟ್ಟು ಗಾಯಗೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಕೂದಲಿಗೆ ಸೀಮೆಎಣ್ಣೆ ಹೆಚ್ಚಿಕೊಂಡು ಬೆಂಕಿಕಡ್ಡಿ ಬಳಸಿ ಅದನ್ನು ನೇರಗೊಳಿಸಲು ಯತ್ನಿಸಿದ ಬಾಲಕ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದಾನೆ. ಬಾಲಕ ಮನೆಯಲ್ಲಿ ಪೋಷಕರಿಲ್ಲದ ಸಮಯದಲ್ಲಿ ಸ್ನಾನಗೃಹದೊಳಗೆ ಈ ಕೆಲಸ ಮಾಡಿರುವುದಾಗಿ ಪೋಷಕರು ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಬರುವ ವಿಡಿಯೋಗಳನ್ನು ನೋಡಿ ಬಾಲಕ ಅದೇ ರೀತಿ ಮಾಡಲು ಮುಂದಾಗಿದ್ದು, ಈಗ ಉಸಿರನ್ನೇ ನಿಲ್ಲಿಸಿದ್ದಾನೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಅಪಾಯಕಾರಿ ವಿಡಿಯೋಗಳನ್ನು ನೋಡಿ ನೀವು ಪ್ರಯತ್ನಿಸಬೇಡಿ, ಅದರಿಂದ ನಿಮ್ಮ ಜೀವಕ್ಕೆ ಕುತ್ತಾಗುವ ಅಪಾಯವಿದೆ.