ವೈಷ್ಣೋದೇವಿ ದರ್ಶನಕ್ಕೆ ತೆರಳುವ ಯಾತ್ರಾರ್ಥಿಗಳಿಗೆ ವಿಶೇಷ ಸೂಚನೆ!
ಶ್ರೀನಗರ, ಆಗಸ್ಟ್.16: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿಯ ತ್ರಿಕುಟಾ ಬೆಟ್ಟದಲ್ಲಿರುವ ವೈಷ್ಣೋದೇವಿಯ ಗುಹೆ ದೇವಸ್ಥಾನವು ಐದು ತಿಂಗಳ ನಂತರ ಯಾತ್ರಾರ್ಥಿಗಳ ಪ್ರವೇಶಕ್ಕೆ ತೆರೆದುಕೊಂಡಿದೆ.
ಕಳೆದ ಮಾರ್ಚ್.18ರಂದು ವೈಷ್ಣೋದೇವಿ ದೇವಸ್ಥಾನವನ್ನು ಮುಚ್ಚಲಾಗಿದ್ದು, ಯಾತ್ರಾರ್ಥಿಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಅದಾಗಿ ಐದು ತಿಂಗಳ ನಂತರದಲ್ಲಿ ದೇಗುಲವನ್ನು ತೆರೆಯಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯು ತಿಳಿಸಿದೆ.
ಶ್ರೀಮಾತಾ ವೈಷ್ಣೋದೇವಿ ಗುಹೆ ಆಡಳಿತ ಮಂಡಳಿ ಮುಖ್ಯಸ್ಥ ರಮೇಶ್ ಕುಮಾರ್ ಅವರು, ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ದೇವಸ್ಥಾನವನ್ನು ತೆರೆದ ಮೊದಲ ವಾರದಲ್ಲಿ ಪ್ರತಿನಿತ್ಯ 2000 ಯಾತ್ರಾರ್ಥಿಗಳಿಗೆ ದೇವಿ ದರ್ಶನ ಪಡೆಯುವುದಕ್ಕೆ ಅನುಮತಿ ನೀಡಲಾಗುತ್ತದೆ. ಈ ಪೈಕಿ ಜಮ್ಮು ಕಾಶ್ಮೀರದ 1900 ಮತ್ತು ಹೊರ ಭಾಗದ 100 ಯಾತ್ರಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ ಎಂದು ರಮೇಶ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.

ವೈಷ್ಣೋದೇವಿ ದರ್ಶನಕ್ಕೆ ಆನ್ ಲೈನ್ ನೋಂದಣಿ
ವೈಷ್ಣೋದೇವಿ ದರ್ಶನಕ್ಕೆ ಆಗಮಿಸುವ ಮೊದಲು ಯಾತ್ರಾರ್ಥಿಗಳು ಆನ್ ಲೈನ್ ನಲ್ಲಿಯೇ ನೋಂದಣಿ ಮಾಡಿಕೊಂಡಿರಬೇಕು. ಸ್ಥಳದಲ್ಲಿ ಸಾರ್ವಜನಿಕರ ದಟ್ಟನೆ ತಪ್ಪಿಸುವ ನಿಟ್ಟಿನಲ್ಲಿ ಈ ರೀತಿ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ರಮೇಶ್ ಕುಮಾರ್ ತಿಳಿಸಿದ್ದಾರೆ. ಅಲ್ಲದೇ ಯಾತ್ರಾರ್ಥಿಗಳು ಕಡ್ಡಾಯವಾಗಿ ತಮ್ಮ ಮೊಬೈಲ್ ನಲ್ಲಿ ಆರೋಗ್ಯ ಸೇತು ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡಿರಬೇಕು.

ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್ ಧರಿಸುವುದ ಕಡ್ಡಾಯ
ವೈಷ್ಣೋದೇವಿ ದೇವಸ್ಥಾನ ಪ್ರವೇಶಕ್ಕೂ ಮೊದಲು ಪ್ರವೇಶ ದ್ವಾರದಲ್ಲಿ ಪ್ರತಿಯೊಬ್ಬ ಯಾತ್ರಾರ್ಥಿಗಳನ್ನು ಥರ್ಮಲ್ ಸ್ಕ್ರೀನಿಂಗ್ ಗೆ ಒಳಪಡಿಸಲಾಗುತ್ತದೆ. ಜೊತೆಗೆ ಯಾತ್ರಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಗಳನ್ನು ಧರಿಸಬೇಕಾಗುತ್ತದೆ. 10 ವರ್ಷಕ್ಕಿಂತ ಚಿಕ್ಕವರು, ಗರ್ಭಿಣಿಯರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರು ಸಾಧ್ಯವಾದಷ್ಟು ಯಾತ್ರೆಗೆ ಆಗಮಿಸದಂತೆ ಆಡಳಿತ ಮಂಡಳಿಯು ಮನವಿ ಮಾಡಿಕೊಂಡಿದೆ.

ಸಾಂಪ್ರದಾಯಿತ ಮಾರ್ಗದ ಬಗ್ಗೆ ಉಲ್ಲೇಖ
ಕತ್ರಾದಿಂದ ಭವಾನ್ ಗೆ ಬಂಗಾಂಗಾ ಮೂಲಕ ಅಧ್ಕುವಾರಿ ಮತ್ತು ಸಂಜಿಚ್ಚಟ್ ಮಾರ್ಗವನ್ನು ಮೇಲ್ಭಾಗಕ್ಕೆ ತೆರಳಲು ಬಳಸಲಾಗುತ್ತದೆ. ಭವಾನ್ ನಿಂದ ಹಿಂತಿರುಗಿ ಬರುವ ಸಂದರ್ಭದಲ್ಲಿ ಹಿಮಕೋಟಿ ಮತ್ತು ತರಕೋಟಿ ಮಾರ್ಗವನ್ನು ಬಳಸಿಕೊಳ್ಳಲಾಗುತ್ತದೆ.

ಕೊವಿಡ್-19 ನೆಗೆಟಿವ್ ವರದಿ ಉಳ್ಳವರಿಗೆ ಅವಕಾಶ
ಜಮ್ಮು ಕಾಶ್ಮೀರವಷ್ಟೇ ಅಲ್ಲದೇ ಹೊರರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಕೆಂಪು ವಲಯಗಳಿಂದ ಆಗಮಿಸಿದ ಯಾತ್ರಾರ್ಥಿಗಳು ಕೊವಿಡ್-19 ನೆಗೆಟಿವ್ ವರದಿ ಹೊಂದಿದ್ದಲ್ಲಿ ಮಾತ್ರ ಮುಂದಕ್ಕೆ ಸಂಚರಿಸಲು ಅನುಮತಿ ನೀಡಲಾಗುತ್ತದೆ. ಅದಕ್ಕಾಗಿ ದರ್ಶಿನಿ, ದಿಯೊಡಿ, ಬಂಗಾಂಗಾ ಮತ್ತು ಕತ್ರಾದಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದರ ಜೊತೆಗೆ ಯಾತ್ರಾರ್ಥಿಗಳ ಸುಲಭ ಮತ್ತು ಸೌಕರ್ಯಕ್ಕಾಗಿ ಬ್ಯಾಟರಿ ಚಾಲಿತ ವಾಹನಗಳು, ಪ್ರಯಾಣಿಕರ ರೋಪ್ ವೇ ಮತ್ತು ಹೆಲಿಕಾಪ್ಟರ್ ಸೇವೆಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಎಲ್ಲ ರೀತಿಯ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ರಮೇಶ್ ಕುಮಾರ್ ತಿಳಿಸಿದ್ದಾರೆ.

ಕತ್ರಾದಿಂದ ಭವನ್ ವರೆಗೂ ಬೃಹತ್ ಅಭಿಯಾನ
ಅಟ್ಕಾ ಆರತಿ ಪ್ರದೇಶ ಮತ್ತು ಶ್ರದ್ಧಾ ಸುಮನ್ ವಿಶೇಶ್ ಪೂಜೆಗಾಗಿ ಬುಕ್ಕಿಂಗ್ ಮಾಡುವುದು ಮತ್ತು ಕುಳಿತುಕೊಳ್ಳುವುದಕ್ಕೆ ನಿರ್ಬಂಧವನ್ನು ಮುಂದುವರಿಸಲಾಗುತ್ತಿದೆ. ಮುಂದಿನ ಆದೇಶದವರೆಗೂ ಬುಕಿಂಗ್ ಮತ್ತು ಕುಳಿತುಕೊಳ್ಳುವಿಕೆ ಹಾಗಿಲ್ಲ. ಅಲ್ಲದೇ ತೀರ್ಥಯಾತ್ರೆ ಪುನರಾರಂಭಿಸುವ ಮೊದಲು ಕತ್ರಾದಿಂದ ಭವನ್ ವರೆಗೆ ಬೃಹತ್ ನೈರ್ಮಲ್ಯ ಅಭಿಯಾನ ಪ್ರಾರಂಭಿಸಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯು ತಿಳಿಸಿದೆ.












Click it and Unblock the Notifications