ವದಂತಿಗಳಿಗೆ ಕಿವಿಗೊಡಬೇಡಿ : ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ
ಶ್ರೀನಗರ, ಫೆಬ್ರವರಿ 24 : 'ಜನರು ಆತಂಕ ಪಡುವ ಅಗತ್ಯವಿಲ್ಲ. ರಾಜ್ಯಕ್ಕೆ 10 ಸಾವಿರ ಯೋಧರನ್ನು ಕಳುಹಿಸಿ ಕೊಡಲಾಗಿದೆ. ವದಂತಿಗಳಿಗೆ ಜನರು ಕಿವಿಗೊಡಬೇಡಿ' ಎಂದು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಹುರಿಯತ್ ನಾಯಕರಿಗೆ ನೀಡಿದ್ದ ಭದ್ರತೆಯನ್ನು ವಾಪಸ್ ಪಡೆಯಲಾಗಿತ್ತು. ಈಗ ಪ್ರತ್ಯೇಕತಾವಾದಿ ನಾಯಕರನ್ನು ಸಾಮೂಹಿಕವಾಗಿ ಬಂಧಿಸಲಾಗಿದೆ. ಇದರಿಂದಾಗಿ ಕಣಿವೆ ರಾಜ್ಯದಲ್ಲಿ ಹೆಚ್ಚಿನ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತವಿದೆ. ಆದ್ದರಿಂದ, ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಅವರು, 'ವದಂತಿಗಳಿಗೆ ಕಿವಿಗೊಡಬೇಡಿ, ಚುನಾವಣೆಗೆ ಪೂರ್ವಭಾವಿಯಾಗಿ ಸೇನೆಯನ್ನು ನಿಯೋಜನೆ ಮಾಡಲಾಗಿದೆ' ಎಂದು ರಾಜ್ಯಪಾಲರು ತಿಳಿಸಿದ್ದಾರೆ.
'ಕೆಲವು ದಿನಗಳ ಹಿಂದೆ ನಡೆದ ಉಗ್ರರ ದಾಳಿಯ ಬಳಿಕ ರಾಜ್ಯದಲ್ಲಿ ಪತ್ಯೇಕತಾವಾದಿಗಳನ್ನು ಬಂಧಿಸಲಾಗಿದೆ. ಕೆಲವು ಶಕ್ತಿಗಳು ಕಳೆದ ಆರು ತಿಂಗಳಿನಿಂದ ಆರ್ಟಿಕಲ್ 35ಎ ಕುರಿತು ಆತಂಕವನ್ನು ಹಬ್ಬಿಸಲು ಪ್ರಯತ್ನ ನಡೆಸುತ್ತಿದ್ದಾರೆ' ಎಂದು ರಾಜ್ಯಪಾಲರು ಹೇಳಿದರು....

ಪ್ರತ್ಯೇಕತಾವಾದಿ ನಾಯಕರ ಬಂಧನ
ಜಮ್ಮು ಮತ್ತು ಕಾಶ್ಮೀರದಲ್ಲಿ ಶುಕ್ರವಾರ ತಡರಾತ್ರಿಯಿಂದ ಭದ್ರತಾ ಪಡೆಗಳು ವಿಶೇಷ ಕಾರ್ಯಾಚರಣೆ ನಡೆಸುತ್ತಿವೆ. ಪ್ರತ್ಯೇಕತಾವಾದಿ ನಾಯಕರನ್ನು ಸಾಮೂಹಿಕವಾಗಿ ಬಂಧಿಸಲಾಗುತ್ತಿದೆ. ಜೆಕೆಎಲ್ಎಫ್ ಮುಖ್ಯಸ್ಥ ಯಾಸಿನ್ ಮಲಿಕ್ ಅವರನ್ನು ವಶಕ್ಕೆ ಪಡೆದು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಒಟ್ಟು 150ಕ್ಕೂ ಅಧಿಕ ಜನರನ್ನು ಇದುವರೆಗೂ ಬಂಧಿಸಲಾಗಿದೆ.

ಸೇನೆ ಕಳಿಸಿದ ಕೇಂದ್ರ ಸರ್ಕಾರ
ಪ್ರತ್ಯೇಕತಾವಾದಿ ನಾಯಕರನ್ನು ಬಂಧಿಸಿದ ಬಳಿಕ ಕೇಂದ್ರ ಸರ್ಕಾರ ರಾಜ್ಯಕ್ಕೆ ಸೇನಾಪಡೆಯನ್ನು ರವಾನೆ ಮಾಡಿದೆ. ಸಿಆರ್ಪಿಎಫ್, ಐಟಿಬಿಪಿ, ಬಿಎಸ್ಎಫ್ನ 100 ಕಂಪನಿಗಳು ಸೇರಿ 10 ಸಾವಿರ ಯೋಧರನ್ನು ಭದ್ರತೆಗಾಗಿ ಕಳುಹಿಸಿಕೊಡಲಾಗಿದೆ.

ವದಂತಿಗಳಿಗೆ ಕಿವಿಗೋಡಬೇಡಿ
ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತವಿದೆ. ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಅವರು, 'ವದಂತಿಗಳಿಗೆ ಜನರು ಕಿವಿಗೊಡಬೇಡಿ, ಕೆಲವರು ವದಂತಿಗಳನ್ನು ಹರಡುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಸೇನೆಯನ್ನು ಕಳುಹಿಸಿದೆ' ಎಂದು ಹೇಳಿದ್ದಾರೆ.

ತಕ್ಕ ಶಾಸ್ತಿ ಮಾಡುತ್ತೇವೆ
'ನಮ್ಮ ವೀರ ಯೋಧರು ಮತ್ತು ಮೋದಿ ಸರ್ಕಾರದ ಶಕ್ತಿ, ಸಾಮರ್ಥ್ಯದ ಮೇಲೆ ವಿಶ್ವಾಸವಿಡಿ, ಭಯೋತ್ಪಾದನೆ ಮತ್ತು ಭಯೋತ್ಪಾದಕರನ್ನು ಮಟ್ಟ ಹಾಕುವ ಕೆಲಸದಲ್ಲಿ ನಿಮ್ಮ ಪ್ರಧಾನ ಸೇವಕ ಕಾರ್ಯನಿರತನಾಗಿದ್ದಾನೆ. ಸಂಚುಕೋರರಿಗೆ ತಕ್ಕ ಶಾಸ್ತಿ ಮಾಡದೆ ವಿರಮಿಸುವುದಿಲ್ಲ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.












Click it and Unblock the Notifications