ಹಂದ್ವಾರ ಎನ್ ಕೌಂಟರ್; ಎರಡು ವಾರ ಕಾಡಿನಲ್ಲಿ ಅಡಗಿದ್ದ ಉಗ್ರರು
ಶ್ರೀನಗರ, ಮೇ 04 : ಉತ್ತರ ಕಾಶ್ಮೀರದ ಹಂದ್ವಾರದಲ್ಲಿ ನಡೆದ ಎನ್ ಕೌಂಟರ್ನಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಈ ಉಗ್ರರು 7 ಜನರ ತಂಡದ ಭಾಗವಾಗಿದ್ದು, ಎರಡು ವಾರಗಳಿಂದ ಕಾಡಿನಲ್ಲಿ ಅಡಗಿದ್ದರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.
ಅರಣ್ಯ ಪ್ರದೇಶದ ಸಮೀಪದ ಮನೆಯಲ್ಲಿ ಅಡಗಿದ್ದ ಉಗ್ರರ ಮೇಲೆ ಕರ್ನಲ್ ಅಶುತೋಷ್ ಶರ್ಮಾ ನೇತೃತ್ವದ ತಂಡ ದಾಳಿ ನಡೆಸಿತ್ತು. ಶನಿವಾರ ರಾತ್ರಿಯಿಂದ ನಡೆದ ಗುಂಡಿನ ಕಾಳಗದಲ್ಲಿ ಐವರು ಯೋಧರು ಹುತಾತ್ಮರಾಗಿದ್ದರು.
ಲಷ್ಕರ್ ಉಗ್ರ ಸಂಘಟನೆಯ ಕಮಾಂಡರ್ ಸೇರಿದಂತೆ ಇಬ್ಬರು ಉಗ್ರರನ್ನು ಯೋಧರು ಹತ್ಯೆ ಮಾಡಿದ್ದರು. ಈ ಉಗ್ರರು ಶಸ್ತ್ರ ಸಜ್ಜಿತವಾಗಿ ಕಾಡಿನಲ್ಲಿ ಅಡಗಿದ್ದರು. ಅನಮಾನಸ್ಪದ ವ್ಯಕ್ತಿಗಳ ಓಡಾಟದ ಕುರಿತು ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು.

ಹಂದ್ವಾರ ಪಾಕಿಸ್ತಾನದ ಗಡಿ ಭಾಗದಲ್ಲಿದ್ದು ಗಡಿ ನುಸುಳಿ ಉಗ್ರರು ಪ್ರವೇಶಿಸಿದ್ದಾರೆ. ಬಳಿಕ ಅರಣ್ಯದಲ್ಲಿ ಅಡಗಿ ಕುಳಿತಿದ್ದಾರೆ. ಗುಪ್ತಚರ ಇಲಾಖೆಗೆ ಸಹ ಈ ಬಗ್ಗೆ ಮಾಹಿತಿ ಸಿಕ್ಕಿತ್ತು. ಉಗ್ರರು ಅಪಾರ ಶಸ್ತ್ರಾಸ್ತ್ರ ಹೊಂದಿದ್ದಾರೆ ಎಂದು ಸ್ಥಳೀಯರು ಹೇಳಿದ್ದರು.
ಕಾಶ್ಮೀರ ವಿಭಾಗದ ಐಜಿ ವಿಜಯ್ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದಾರೆ. ಹಂದ್ವಾರದಲ್ಲಿ ಲಷ್ಕರ್ ಉಗ್ರರು ಸಕ್ರಿಯವಾಗಿರುವ ಕುರಿತು ಹಿಂದೆಯೇ ಮಾಹಿತಿ ಸಿಕ್ಕಿತ್ತು. ಎನ್ ಕೌಂಟರ್ನಲ್ಲಿ ಹತ್ಯೆಯಾದ ಹೈದರ್ ಈ ಭಾಗದ ಚಟುವಟಿಕೆ ನೋಡಿಕೊಳ್ಳುತ್ತಿದ್ದ ಎಂದು ಹೇಳಿದ್ದಾರೆ.
ಈ ಉಗ್ರರು 7 ಜನರ ತಂಡದ ಭಾಗವಾಗಿದ್ದರು. ಏಪ್ರಿಲ್ 5ರಂದು ಗಡಿಯಲ್ಲಿ ನುಸುಳುವ ವೇಳೆ ಯೋಧರು ಐವರನ್ನು ಹತ್ಯೆ ಮಾಡಿದ್ದರು. ಇಬ್ಬರು ಪರಾರಿಯಾಗಿದ್ದರು. ಮೂವರು ಸಿಆರ್ಪಿಎಫ್ ಜವಾನರ ಹತ್ಯೆಯಲ್ಲಿಯೂ ಇವರ ಕೈವಾಡವಿತ್ತು ಎಂದು ಶಂಕಿಸಲಾಗಿದೆ.
ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಕರ್ನಲ್ ಅಶುತೋಷ್ ಶರ್ಮಾ, 21- ರಾಷ್ಟ್ರೀಯ ರೈಫಲ್ಸ್ ಮೇಜರ್ ಅನೂಜ್ ಸೂದ್, ನಾಯಕ್ ರಾಕೇಶ್ ಕುಮಾರ್, ಲ್ಯಾನ್ಸ್ ನಾಯಕ್ ದಿನೇಶ್ ಸಿಂಗ್, ಪೊಲೀಸ್ ವಿಶೇಷ ಕಾರ್ಯಪಡೆಯ ಎಸ್ಐ ಶಕೀಲ್ ಖಾಜಿ ಹುತಾತ್ಮರಾಗಿದ್ದಾರೆ.












Click it and Unblock the Notifications