ಜಮ್ಮು: 31 ವರ್ಷದಲ್ಲಿ 89 ಕಾಶ್ಮೀರಿ ಪಂಡಿತರು ಸೇರಿ 1,724 ಮಂದಿಯ ಹತ್ಯೆಗೈದ ಉಗ್ರರು
ಶ್ರೀನಗರ, ಡಿಸೆಂಬರ್ 15: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು 31 ವರ್ಷದಲ್ಲಿ 89 ಕಾಶ್ಮೀರಿ ಪಂಡಿತರು ಸೇರಿದಂತೆ ಒಟ್ಟು 1,724 ಮಂದಿಯ ಹತ್ಯೆಗೈದಿದ್ದಾರೆ ಎಂದು ಆರ್ಟಿಐ ವರದಿಯಲ್ಲಿ ಕಂಡು ಬಂದಿದೆ. ಈ ಪೈಕಿ ಮುಸ್ಲಿಮರು ಕೂಡಾ ಸೇರಿದ್ದಾರೆ. ಹರಿಯಾಣ ಮೂಲದ ಆರ್ಟಿಐ ಕಾರ್ಯಕರ್ತ ಸಲ್ಲಿಸಿದ ಆರ್ಟಿಐ ಅರ್ಜಿಗೆ ಪ್ರತಿಕ್ರಿಯೆ ನೀಡಿರುವ ಶ್ರೀನಗರ ಜಿಲ್ಲಾ ಪೊಲೀಸ್ ಮುಖ್ಯ ಕಚೇರಿಯು, 31 ವರ್ಷದಲ್ಲಿ 1,724 ಮಂದಿಯನ್ನು ಭಯೋತ್ಪಾದಕರು ಹತ್ಯೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಶ್ರೀನಗರ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಹಲವು ತಿಂಗಳುಗಳಿಂದ ಹಲವಾರು ನಾಗರಿಕರ ಹತ್ಯೆ ನಡೆದಿದೆ. ಕಾಶ್ಮೀರಿ ಪಂಡಿತರು, ಮುಸ್ಲಿಮರು ಸೇರಿದಂತೆ ಹಲವಾರು ಮಂದಿಯ ಹತ್ಯೆ ನಡೆದಿದೆ. ಅದರಲ್ಲೂ ಮುಖ್ಯವಾಗಿ ಬೇರೆ ರಾಜ್ಯದಿಂದ ಬಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ದಾಳಿಗಳನ್ನು ನಡೆಸಿದ್ದಾರೆ. ಇದರಿಂದಾಗಿ ಈಗಾಗಲೇ ಹಲವಾರು ಮಂದಿ ಕಾರ್ಮಿಕರು ಜಮ್ಮು ತೊರೆದು ಸ್ವ ರಾಜ್ಯಕ್ಕೆ ತೆರಳಲಿದ್ದಾರೆ.
ಜಮ್ಮು ಕಾಶ್ಮೀರ ಉಗ್ರರ ದಾಳಿಯಲ್ಲಿ ಇಬ್ಬರು ಸಾವು, ಮಾಹಿತಿ ಕೋರಿದ ಪ್ರಧಾನಿ
ಇನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಅಲ್ಪಸಂಖ್ಯಾತ ವಿಭಾಗ ಕಾಶ್ಮೀರಿ ಪಂಡಿತರು ಆಗಿದ್ದು, ಅವರಲ್ಲಿ ಭಯದ ವಾತಾವರಣ ಇದೆ ಎಂಬುವುದನ್ನು ಸರ್ಕಾರವು ಈ ತಿಂಗಳು ಅಲ್ಲಗಳೆದಿದೆ. ಆದರೆ ಇದೆ ಸಂದರ್ಭದಲ್ಲಿ ಸುಮಾರು 115 ಕಾಶ್ಮೀರ ಪಂಡಿತರ ಕುಟುಂಬವು ತಮ್ಮ ಕುಟುಂಬ ಸಮೇತವಾಗಿ ಜಮ್ಮು ಮತ್ತು ಕಾಶ್ಮೀರವನ್ನು ತೊರೆದಿದ್ದಾರೆ. ಅದರಲ್ಲೂ ಮುಖ್ಯವಾಗಿ ಮಹಿಳೆಯರು ಜಮ್ಮು ತೊರೆದಿದ್ದಾರೆ ಎಂದು ಸರ್ಕಾರವು ಹೇಳಿಕೊಂಡಿದೆ.
ಆರ್ಟಿಐ ವರದಿ ಏನು ಹೇಳುತ್ತದೆ?
ಪರಿಹಾರ ಮತ್ತು ಪುನರ್ವಸತಿ ಆಯುಕ್ತರ ಕಚೇರಿಗೆ ಸಲ್ಲಿಸಿದ್ದ ಆರ್ಟಿಐ ಅರ್ಜಿಯಲ್ಲಿ, 1990 ರಿಂದ 1.54 ಲಕ್ಷ ಮಂದಿಯಲ್ಲಿ ಸುಮಾರು 88 ಶೇಕಡ ಮಂದಿ ಅಥವಾ 1.35 ಲಕ್ಷ ಮಂದಿ ಆತಂಕದಿಂದಾಗಿ ಜಮ್ಮು ಕಾಶ್ಮೀರವನ್ನು ತೊರೆದು ಹೋಗಿದ್ದು ಅವರು ಕಾಶ್ಮೀರಿ ಪಂಡಿತರು ಆಗಿದ್ದಾರೆ ಎಂದು ತಿಳಿದು ಬಂದಿದೆ. ಜಮ್ಮು ಮತ್ತು ಕಾಶ್ಮೀರವನ್ನು ತೊರೆದವರ ಪೈಕಿ 18,735 ಮಂದಿ ಮುಸ್ಲಿಮರು ಆಗಿದ್ದಾರೆ ಎಂದು ಕೂಡಾ ಪಿಪಿ ಕಪೂರ್ ಎಂಬವರು ಸಲ್ಲಿಸಿದ ಆರ್ಟಿಐ ಅರ್ಜಿಗೆ ದೊರೆತ ಪ್ರತಿಕ್ರಿಯೆಯಲ್ಲಿ ಉಲ್ಲೇಖಿತವಾಗಿದೆ.
ಸರ್ಕಾರ ನೀಡಿದ ಅಂಕಿ ಅಂಶ
ಇನ್ನು ಕಳೆದ ಮಾರ್ಚ್ ತಿಂಗಳಿನಲ್ಲಿ ಈ ಬಗ್ಗೆ ಸಂಸತ್ತಿನಲ್ಲಿ ಮಾತನಾಡಿದ್ದ ಕಿರಿಯ ಗೃಹ ಸಚಿವ ಜಿ ಕಿಶನ್ ರೆಡ್ಡಿ, ಕೇಂದ್ರ ಸರ್ಕಾರವು ಉದ್ಯೋಗವನ್ನು ಒದಗಿಸುವ ಭರವಸೆಯನ್ನು ನೀಡಿದ ಬಳಿಕ ಸುಮಾರು 3,800 ಮಂದಿ ಜಮ್ಮು ಮತ್ತು ಕಾಶ್ಮೀರಕ್ಕೆ ಹಿಂದಿರುಗಿ ಬಂದಿದ್ದಾರೆ ಎಂದು ಇನ್ನು ನವೆಂಬರ್ನಲ್ಲಿ ಸಂಸತ್ತಿನಲ್ಲಿ ಮಾತನಾಡಿದ್ದ ಇನ್ನೋರ್ವ ಕಿರಿಯ ಗೃಹ ಖಾತೆ ಸಚಿವ ನಿತ್ಯಾನಂದ ರೈ, 2019 ರ ಆಗಸ್ಟ್ನಿಂದ ಅಂದರೆ ಆರ್ಟಿಕಲ್ 370 ಅನ್ನು ರದ್ದು ಮಾಡಿದ ಬಳಿಕ, 1,678 ವಲಸಿಗರು ಹಿಂದುರುಗಿ ಬಂದಿದ್ದಾರೆ, ಜನರಿಗೆ ಉದ್ಯೋಗ ನೀಡುವ ಭರವಸೆ ನೀಡಿದ ಬಳಿಕ ಇಷ್ಟೊಂದು ವಲಸಿಗರು ವಾಪಾಸ್ ಬಂದಿದ್ದಾರೆ ಎಂದಿದ್ದಾರೆ.
ಸರ್ಕಾರದ ಅಂಕಿ ಅಂಶದಲ್ಲಿನ ವ್ಯತ್ಯಾಸ ಬೊಟ್ಟು ಮಾಡಿದ ಫಾರೂಕ್ ಅಬ್ದುಲ್ಲಾ
ಇನ್ನು ಜಮ್ಮು ಕಾಶ್ಮೀರದಿಂದ ಹೋದ ವಲಸಿಗರು ಹಾಗೂ ಜಮ್ಮು ಕಾಶ್ಮೀರಕ್ಕೆ ಹಿಂದಿರುಗಿ ಬಂದ ವಲಸಿಗರ ವಿಚಾರದಲ್ಲಿ ಕೇಂದ್ರ ಸರ್ಕಾರ ನೀಡಿದ ಅಂಕಿ ಅಂಶದಲ್ಲಿ ಇರುವ ವ್ಯತ್ಯಾಸವನ್ನು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಬೊಟ್ಟು ಮಾಡಿದ್ದಾರೆ. ಯಾವುದೇ ಪಕ್ಷವನ್ನು ಉಲ್ಲೇಖ ಮಾಡದೆಯೇ ಮಾತನಾಡಿದ ಫಾರೂಕ್ ಅಬ್ದುಲ್ಲಾ, "ನಿಮ್ಮನ್ನು ಮತ ಬ್ಯಾಂಕ್ನಂತೆ ಕಾಣುತ್ತಿರುವವರು ದೊಡ್ಡ ದೊಡ್ಡ ಭರವಸೆಯನ್ನು ನೀಡಿದ್ದಾರೆ. ಆದರೆ ಯಾವುದೇ ಒಂದು ಭರವಸೆಯನ್ನು ಕೂಡಾ ಅವರು ಪೂರ್ಣ ಮಾಡಿಲ್ಲ," ಎಂದು ಹೇಳಿದ್ದಾರೆ.
ಆರ್ಟಿಐ ವರದಿಯಲ್ಲಿದೆ ಇನ್ನೂ ಹಲವು ಪ್ರಮುಖ ಮಾಹಿತಿ
ಇನ್ನು ಈ ಆರ್ಟಿಐ ಅಥವಾ ಮಾಹಿತಿ ಹಕ್ಕಿನ ಮೂಲಕ ಪಡೆದ ಮಾಹಿತಿಯಲ್ಲಿ ಇನ್ನೂ ಹಲವಾರು ಮಾಹಿತಿಗಳು ಇದೆ. ಇನ್ನು ವಲಸೆ ಹೋದ ಸುಮಾರು 84,000 ಮಂದಿಗೆ ಸರ್ಕಾರ ಯಾವುದೇ ಸೌಲಭ್ಯವನ್ನು ಒದಗಿಸಿಲ್ಲ, ಪರಿಹಾರವನ್ನು ನೀಡಿಲ್ಲ ಎಂದು ಉಲ್ಲೇಖಿತವಾಗಿದೆ. ಸರ್ಕಾರದಿಂದ ತಿಂಗಳ ಅಕ್ಕಿ, ಗೋಧಿ, ಸಕ್ಕರೆ ಮೊದಲಾದ ಪಡಿತರ ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯವು ಲಭ್ಯವಾಗಿಲ್ಲ ಎಂದು ತಿಳಿದು ಬಂದಿದೆ. ಇನ್ನು ಸರ್ಕಾರದ ನೆರವು ಪಡೆದವರ ಪೈಕಿ ಸುಮಾರು 54,000 ಮಂದಿ ಹಿಂದೂಗಳು ಮತ್ತು ಸುಮಾರು 11,000 ಮಂದಿ ಮುಸ್ಲಿಮರು ಆಗಿದ್ದಾರೆ. ಉಳಿದಂತೆ ಸಿಖ್ ಹಾಗೂ ಬೇರೆ ಸಮುದಾಯಕ್ಕೆ ಸೇರಿದವರು ಆಗಿದ್ದಾರೆ. ಇನ್ನು ವಲಸಿಗರ ಸ್ಥಿತಿ ಹೇಗಿದೆ ಎಂಬ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಪರಿಹಾರ ಮತ್ತು ಪುನರ್ವಸತಿ ಆಯುಕ್ತರ ಕಚೇರಿ ಹೇಳಿದೆ. (ಒನ್ಇಂಡಿಯಾ)