ಹಿಜ್ಬುಲ್ ಮುಜಾಹಿದ್ದೀನ್ ನೂತನ ದಂಡನಾಯಕನಾಗಿ ಎ++ ಉಗ್ರ ಡಾ.ಸೈಫುಲ್ಲಾ?
ಶ್ರೀನಗರ, ಮೇ 9: ಕಳೆದ ಎಂಟು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ರಿಯಾಜ್ ನೈಕೂ ಎನ್ಕೌಂಟರ್ ಗೆ ಬಲಿಯಾದ ನಂತರ, ಅವನ ಜಾಗಕ್ಕೆ ಡಾ.ಸೈಫುಲ್ಲಾ ಆಲಿಯಾಸ್ ಅಬು ಮುಸೈದ್ ಆಯ್ಕೆಯಾಗುವ ಸಾಧ್ಯತೆಯಿದೆ.
ಪುಲ್ವಾಮಾದ ಮಲಾಂಗ್ಪುರ ನಿವಾಸಿಯಾಗಿರುವ ಸೈಫುಲ್ಲಾ, ಈ ಹಿಂದೆ ಬಲಿಯಾಗಿದ್ದ ಬುರ್ಹಾನ್ ವಾನಿಯ ಹನ್ನೆರಡು ಉಗ್ರರಲ್ಲಿ ಒಬ್ಬನಾಗಿದ್ದಾನೆ. ಹುರಿಯತ್ ಗಿಲಾನಿ ಬಣದಲ್ಲಿ ಗುರುತಿಸಿಕೊಂಡಿದ್ದ ಸೈಫುಲ್ಲಾ, ಎರಡು ವರ್ಷದ ಹಿಂದೆ ಉಗ್ರ ಸಂಘಟನೆಗೆ ಸೇರಿಕೊಂಡಿದ್ದ.
ಗುಪ್ತಚರ ಇಲಾಖೆಯ ವರದಿ ಪ್ರಕಾರ ಸೈಫುಲ್ಲಾ, ಭಾರತದ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿದ್ದು, 'A++' ದರ್ಜೆಯವನು ಎಂದು ಹೇಳಿದೆ. ವೈದ್ಯಕೀಯ ಕ್ಷೇತ್ರದ ಅನುಭವವಿರುವ ಈತ, ಭದ್ರತಾ ಪಡೆಗಳ ದಾಳಿಗೆ ಗಾಯಗೊಳ್ಳುವ ಭಯೋತ್ಪಾದಕರಿಗೆ ಚಿಕಿತ್ಸೆ ನೀಡುತ್ತಿದ್ದ.

"ಪುಲ್ವಾಮದ ಟ್ರಾಲ್, ಕಕಪೋರ, ಕುಲ್ಗಾಂ ಭಾಗದಲ್ಲಿ ಉಗ್ರರಿಗೆ ಗೈಡ್ ಆಗಿ ಸೈಫುಲ್ಲಾ ಕೆಲಸ ಮಾಡಿದ್ದ ಮತ್ತು ಶ್ರೀನಗರ ಭಾಗದಲ್ಲಿ ಹೆಚ್ಚು ಕ್ರಿಯಾಶೀಲನಾಗಿದ್ದ" ಎಂದು ಗುಪ್ತಚರ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
"ಜೈಶ್ ಮೊಹಮ್ಮದ್ ಸಂಘಟನೆಯ ಕ್ವಾರಿ ಯಾಸಿರ್, ಬುರ್ಹಾನ್ ವಾನಿ ಮತ್ತು ರಿಯಾಜ್ ನೈಕೂ ಸಾವನ್ನಪ್ಪಿದ ನಂತರ, ಕಣಿವೆ ಭಾಗದಲ್ಲಿ ಉಗ್ರ ಸಂಘಟನೆ ದಾರಿ ತಪ್ಪುವ ಸಾಧ್ಯತೆಯಿದೆ"ಎಂದು ಜಮ್ಮ ಮತ್ತು ಕಾಶ್ಮೀರದ (ಕಾಶ್ಮೀರ ರೇಂಜ್) ಐಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ.
"ಇದುವರೆಗೆ 27 ಕಾರ್ಯಾಚರಣೆಯನ್ನು ನಡೆಸಿ, 64 ಉಗ್ರರನ್ನು ಹೊಡೆದುರುಳಿಸಲಾಗಿದೆ. 25 ಉಗ್ರರನ್ನು ಬಂಧಿಸಲಾಗಿದೆ. ಬುಧವಾರ ಹತನಾದ ರಿಯಾಜ್ ನೈಕೂ ಆರು ತಿಂಗಳಿನಿಂದ ತಲೆಮೆರಿಸಿಕೊಂಡಿದ್ದ"ಎಂದು ಐಜಿಪಿ ಹೇಳಿದ್ದಾರೆ.












Click it and Unblock the Notifications