ಜಮ್ಮು ಕಾಶ್ಮೀರ ಎನ್ಕೌಂಟರ್: ಉಗ್ರರಿಗೆ ಪಾಕಿಸ್ತಾನ ಕಮಾಂಡೋಗಳಿಂದ ತರಬೇತಿ!?
ಶ್ರೀನಗರ, ಅಕ್ಟೋಬರ್ 18: "ಜಮ್ಮು ಮತ್ತು ಕಾಶ್ಮೀರದ ಪೂಂಚ್ನಲ್ಲಿ ಅರಣ್ಯಪ್ರದೇಶಗಳಲ್ಲಿ ಕಳೆದ ಎಂಟು ದಿನಗಳಿಂದ ಒಳನುಸುಳುವುದಕ್ಕೆ ಪ್ರಯತ್ನಿಸುತ್ತಿರುವ ಉಗ್ರರಿಗೆ ಪಾಕಿಸ್ತಾನ ಸೇನೆಯಿಂದ ತರಬೇತಿ ನೀಡಲಾಗಿರುವ ಬಗ್ಗೆ ಮೂಲಗಳಿಂದ ತಿಳಿದು ಬಂದಿದೆ," ಎಂದು ಪೊಲೀಸ್ ಮತ್ತು ಸೇನೆ ಹೇಳಿದೆ.
ಕಣಿವೆ ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಘೋರ ಎನ್ ಕೌಂಟರ್ ನಡೆದಿದೆ. ಕಳೆದ ಸೋಮವಾರದಿಂದ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಉಗ್ರರು ಮತ್ತು ಸೇನಾ ಯೋಧರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಇಬ್ಬರು ಜೂನಿಯನ್ ಕಮಿಷನ್ಡ್ ಆಫೀಸರ್(ಜೆಸಿಓ) ಸೇರಿದಂತೆ 9 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ.
ಬಿಗಿ ಬಂದೋಬಸ್ತ್ ಮತ್ತು ತೀವ್ರವಾದ ಶೆಲ್ ದಾಳಿಯ ಹೊರತಾಗಿಯೂ 8-9 ಕಿಮೀ ದಟ್ಟ ಅರಣ್ಯದಲ್ಲಿ ಬೃಹತ್ ಕೂಂಬಿಂಗ್ ಕಾರ್ಯಾಚರಣೆ ಹಾಗೂ ಹೋರಾಟ ಮುಂದುವರೆದಿದೆ. ಉಗ್ರರ ಯಾವುದೇ ಮೃತದೇಹ ಪತ್ತೆಯಾಗದ ಕಾರಣ ಗುಂಡಿನ ಚಕಮಕಿಯಲ್ಲಿ ಎಷ್ಟು ಮಂದಿ ಉಗ್ರರು ಮೃತಪಟ್ಟಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ.
ಒಂದೇ ದಿನ ಉಗ್ರರ ದಾಳಿಗೆ ಐವರು ಯೋಧರು ಹುತಾತ್ಮ
ನಿಯಂತ್ರಣ ರೇಖೆಗೆ ಸಮೀಪದಲ್ಲಿರುವ ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಡೇರಾ ವಾಲಿ ಗಾಲಿ ಪ್ರದೇಶದಲ್ಲಿ ಅಕ್ಟೋಬರ್ 10ರಂದು ರಾತ್ರಿಯ ಸಂದರ್ಭದಲ್ಲಿ ಯೋಧರು ಮತ್ತು ಉಗ್ರರ ನಡುವೆ ತೀವ್ರ ಗುಂಡಿನ ಚಕಮಕಿ ನಡೆಯಿತು. ಈ ವೇಳೆ ಒಬ್ಬ ಜೆಸಿಓ ಸೇರಿದಂತೆ ಐವರು ಯೋಧರು ಹುತಾತ್ಮರಾದರು.
ಅ.14ರಂದು ಇಬ್ಬರು ಯೋಧರ ಸಾವು, ಇಬ್ಬರು ನಾಪತ್ತೆ
ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧರ್ ಉಪ ವಿಭಾಗದ ನರಖಾಸ್ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಮಾಹಿತಿ ಪಡೆದ ಸೇನಾ ಪಡೆಯು ಅಕ್ಟೋಬರ್ 14ರಂದು ಕಾರ್ಯಾಚರಣೆಗೆ ಇಳಿಯಿತು. ಈ ಸಂದರ್ಭದಲ್ಲಿ ಉಗ್ರರು ಮತ್ತು ಸೇನೆ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿಸುಬೇದಾರ್ ಅಜಯ್ ಸಿಂಗ್ ಎಂಬ ಯೋಧ ಸೇರಿದಂತೆ ಇಬ್ಬರು ಸೈನಿಕರು ಹುತಾತ್ಮರಾಗಿದ್ದರು. ಈ ವೇಳೆ ಒಬ್ಬ ಜೂನಿಯರ್ ಕಮಿಷನ್ಡ್ ಆಫೀಸರ್ (ಜೆಸಿಓ) ಸೇರಿದಂತೆ ಇಬ್ಬರು ಯೋಧರು ನಾಪತ್ತೆಯಾಗಿದ್ದರು. ಅದಾಗಿ ಎರಡು ದಿನಗಳ ಬಳಿಕ ಅಂದರೆ ಶನಿವಾರ ಯೋಧರ ಪತ್ತೆಗೆ ಮೆಂಧರ್ ಉಪ ವಿಭಾಗದ ನರಖಾಸ್ ದಟ್ಟ ಅರಣ್ಯದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಎರಡು ದಿನಗಳ ಬಳಿಕ ನಾಪತ್ತೆಯಾದ ಜೆಸಿಓ ಮತ್ತು ಒಬ್ಬ ಯೋಧರ ಮೃತದೇಹ ಪತ್ತೆಯಾಗಿದ್ದವು.
ಉಗ್ರರಿಗೆ ಪಾಕಿಸ್ತಾನ ಕಮಾಂಡೋಗಳಿಂದ ತರಬೇತಿ
ಕಳೆದ ಎಂಟು ದಿನಗಳಲ್ಲಿ ಗಡಿಯಲ್ಲಿ ಕಾವಲು ಕಾಯುತ್ತಿರುವ ಸಾವಿರಾರು ಭಾರತೀಯ ಭದ್ರತಾ ಪಡೆಯ ಕಣ್ಣು ತಪ್ಪಿಸಿ ಒಳನುಸುಳುವಲ್ಲಿ ಉಗ್ರರು ಯಶಸ್ವಿಯಾಗಿದ್ದಾರೆ. ಈ ಹಂತದಲ್ಲಿ ಪಾಕಿಸ್ತಾನ ಸೇನೆಯ ಹಿರಿಯ ಕಮಾಂಡೋಗಳಿಂದ ನುಸುಳುಕೋರರಿಗೆ ತರಬೇತಿ ನೀಡಲಾಗಿದೆ ಎಂದು ಪೊಲೀಸರು ಹಾಗೂ ಸೇನಾ ಮೂಲಗಳಿಂದ ತಿಳಿದು ಬಂದಿದೆ. "ಒಳನುಸುಳುಕೋರರು ಮತ್ತು ಆ ಉಗ್ರರ ಗುಂಪಿನಲ್ಲಿ ಪಾಕಿಸ್ತಾನ ಕಮಾಂಡೋಗಳೂ ಸಹ ಇರಬಹುದು. ಆದರೆ ಅವರನ್ನು ಹೊಡೆದುರುಳಿಸಿದ ನಂತರವಷ್ಟೇ ಈ ಬಗ್ಗೆ ಮಾಹಿತಿ ಖಚಿತವಾಗಲಿದೆ," ಎಂದು ಭಾರತೀಯ ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೂಲೆಗುಂಪಾಗಿ ಅಡಗಿಕೊಂಡಿರುವ ಉಗ್ರರು
ಜಮ್ಮು ಕಾಶ್ಮೀರದಲ್ಲಿ ಎಚ್ಚರಿಕೆಯಿಂದ ಕಾರ್ಯಾಚರಣೆಯನ್ನು ಮುಂದುವರಿಸುವುದರ ಜೊತೆಗೆ ಯಾವುದೇ ರೀತಿ ಹೆಚ್ಚಿನ ಸಾವುನೋವುಗಳು ಸಂಭವಿಸಿಲ್ಲ ಎಂಬ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಸದ್ಯಕ್ಕೆ ಉಗ್ರರ ತಂಡವು ಒಂದು ಪ್ರದೇಶದಲ್ಲಿ ಮೂಲೆಗುಂಪಾಗಿ ಕುಳಿತಿರುವ ಬಗ್ಗೆ ಶಂಕಿಸಲಾಗಿದೆ. ಭಾರತೀಯ ಸೇನೆಯ ಪ್ಯಾರಾಕಮಾಂಡೋ ಹಾಗೂ ಹೆಲಿಕಾಪ್ಟರ್ ಸಹಾಯದಿಂದ ಚುರುಕಿನ ಕಾರ್ಯಾಚರಣೆ ನಡೆಸುವುದರ ಮೂಲಕ ಭದ್ರತಾ ಪಡೆಗಳು ಕ್ಷಿಪ್ರಗತಿಯಲ್ಲಿ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸುವ ಆಶಾವಾದವನ್ನು ವ್ಯಕ್ತಪಡಿಸಿವೆ.