ಕಾಶ್ಮೀರದಲ್ಲಿ ಗಾಬರಿಪಡುವ ಅಗತ್ಯವಿಲ್ಲ: ಸರ್ಕಾರದ ಭರವಸೆ

ಶ್ರೀನಗರ, ಆಗಸ್ಟ್ 3: ಕಣಿವೆ ರಾಜ್ಯದಲ್ಲಿ ಹೆಚ್ಚಿನ ಸೇನೆ ಜಮಾವಣೆ ಮಾಡುತ್ತಿರುವುದಕ್ಕೆ ಗಾಬರಿ ಪಡುವ ಅಗತ್ಯವಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಗವರ್ನರ್ ಸತ್ಯಪಾಲ್ ಮಲಿಕ್ ಹೇಳಿದ್ದಾರೆ.

ತಮ್ಮನ್ನು ಶುಕ್ರವಾರ ಸಂಜೆ ಭೇಟಿ ಮಾಡಿದ ಜಮ್ಮು ಮತ್ತು ಕಾಶ್ಮೀರದ ರಾಜಕಾರಣಿಗಳ ನಿಯೋಗದೊಂದಿಗೆ ಮಾತನಾಡಿದ ಅವರು, 'ದಯವಿಟ್ಟು ಸಹನೆ ಕಾಪಾಡಿಕೊಳ್ಳಿ ಮತ್ತು ಗಾಳಿಸುದ್ದಿಗಳಿಗೆ ಕಿವಿಗೊಡಬೇಡಿ' ಎಂದು ಮನವಿ ಮಾಡಿದರು.

ಭಯೋತ್ಪಾದನಾ ದಾಳಿಯ ಬೆದರಿಕೆಯ ಹಿನ್ನೆಲೆಯಲ್ಲಿ ಅಮರನಾಥ ಯಾತ್ರಾರ್ಥಿಗಳು ಮತ್ತು ಇತರೆ ಪ್ರವಾಸಿಗರು ತಮ್ಮ ಕಾಶ್ಮೀರ ಪ್ರವಾಸವನ್ನು ಕೂಡಲೇ ಮೊಟಕುಗೊಳಿಸಿ ರಾಜ್ಯದಿಂದ ಹೊರಹೋಗುವಂತೆ ಸೂಚನೆ ನೀಡಿದ ಬಳಿಕ ರಾಜ್ಯದಲ್ಲಿ ಯಾವುದೋ ಮಹತ್ವದ ರಾಜಕೀಯ ಬದಲಾವಣೆಯಾಗಲಿದೆ ಎಂಬ ಬಗ್ಗೆ ವದಂತಿಗಳು ಹರಿದಾಡುತ್ತಿವೆ. ಕಣಿವೆ ರಾಜ್ಯಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನದ 35ಎ ಹಾಗೂ 370 ಪರಿಚ್ಛೇದಗಳ ರದ್ದತಿ ಮತ್ತು ಜಮ್ಮುವನ್ನು ಪ್ರತ್ಯೇಕ ರಾಜ್ಯವನ್ನಾಗಿ ವಿಭಜಿಸಿ ಲಡಾಕ್ ಹಾಗೂ ಶ್ರೀನಗರವನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಲು ನಿರ್ಧರಿಸಲಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಹೀಗಾಗಿ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಶಾ ಫೈಸಲ್, ಸಜ್ಜದ್ ಲೋನೆ ಮತ್ತು ಇಮ್ರಾನ್ ಅನ್ಸಾರಿ ಅವರ ನಿಯೋಗವು ರಾಜ್ಯಪಾಲರನ್ನು ಭೇಟಿ ಮಾಡಿ ಈ ಬೆಳವಣಿಗೆಗಳ ಕುರಿತು ಕಳವಳ ವ್ಯಕ್ತಪಡಿಸಿತು.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿರುವ ಸಾಂವಿಧಾನಿಕ ಖಚಿತತೆಗಳನ್ನು ಕೊನೆಗಾಣಿಸುವ ಪ್ರಯತ್ನ ನಡೆದಿದೆ. ರಾಜ್ಯದ ಜನರು ತಮ್ಮ ವಿಶಿಷ್ಟ ಗುರುತನ್ನು ರಕ್ಷಿಸಿಕೊಳ್ಳಲು ಇದ್ದ ಅಲ್ಪಸ್ವಲ್ಪ ಅವಕಾಶವನ್ನೂ ದೋಚಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿರುವಂತೆ ಕಾಣಿಸುತ್ತಿದೆ ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ.

ಅನಗತ್ಯವಾಗಿ ಬೆಸೆಯಲಾಗುತ್ತಿದೆ

ಅನಗತ್ಯವಾಗಿ ಬೆಸೆಯಲಾಗುತ್ತಿದೆ

ಅಮರನಾಥ ಯಾತ್ರೆ ಮೇಲೆ ಭಯೋತ್ಪಾದನಾ ದಾಳಿಗಳು ನಡೆಯುವುದರ ಕುರಿತು ಗಂಭೀರ ಮತ್ತು ವಿಶ್ವಾಸಾರ್ಹ ಮಾಹಿತಿಗಳು ದೊರಕಿರುವುದಾಗಿ ರಾಜ್ಯಪಾಲರು ನಿಯೋಗಕ್ಕೆ ವಿವರಿಸಿದರು. ಈ ವಿಚಾರಗಳನ್ನು ಅನಗತ್ಯವಾಗಿ ಇತರೆ ಸಂಗತಿಗಳೊಂದಿಗೆ ತಳುಕು ಹಾಕಲಾಗುತ್ತಿದೆ. ಇಲ್ಲಿ ತೆಗೆದುಕೊಂಡಿರುವುದು ಭದ್ರತಾ ಮುಂಜಾಗ್ರತಾ ಕ್ರಮಗಳನ್ನು. ಅದನ್ನು ಸಂಬಂಧವಿಲ್ಲದ ವಿಚಾರಗಳಿಗೆ ಬೆಸೆಯಲಾಗುತ್ತಿದೆ. ಇದರಿಂದ ಈ ರೀತಿಯ ಆತಂಕ ಉಂಟಾಗಿದೆ ಎಂದು ರಾಜ್ಯಪಾಲರ ಕಚೇರಿ ಹೇಳಿಕೆ ತಿಳಿಸಿದೆ.

ಅಗತ್ಯ ವಸ್ತುಗಳ ಖರೀದಿಗೆ ಸರದಿ ಸಾಲು

ಅಗತ್ಯ ವಸ್ತುಗಳ ಖರೀದಿಗೆ ಸರದಿ ಸಾಲು

ಭದ್ರತಾ ಕಾರಣದಿಂದ ಸೈನಿಕರ ನಿಯೋಜನೆ ಮಾಡಲಾಗುತ್ತಿದೆ ಸರ್ಕಾರ ಸ್ಪಷ್ಟಪಡಿಸಿದ್ದರೂ, ಜನರಲ್ಲಿನ ಆತಂಕ ಕಡಿಮೆಯಾಗಿಲ್ಲ. ಪೆಟ್ರೋಲ್ ಬಂಕ್, ದಿನಸಿ ಅಂಗಡಿಗಳು, ಎಟಿಎಂ ಮುಂದೆ ದೊಡ್ಡ ಪ್ರಮಾಣದ ಸರದಿ ಸಾಲುಗಳಲ್ಲಿ ನಿಲ್ಲುತ್ತಿದ್ದಾರೆ. ಅಗತ್ಯ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಮುಗಿಬೀಳುತ್ತಿದ್ದಾರೆ. ರಾಜ್ಯದಲ್ಲಿ ಏನೋ ದುರ್ಘಟನೆ ನಡೆಯಲಿದೆ ಎಂಬ ಭಯ ಅವರಲ್ಲಿ ಉಂಟಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಿವೆ.

ವಿಮಾನ ಶುಲ್ಕ ವಿನಾಯಿತಿ

ವಿಮಾನ ಶುಲ್ಕ ವಿನಾಯಿತಿ

ಪ್ರವಾಸಿಗರು ಮರಳಿ ತಮ್ಮ ರಾಜ್ಯಗಳಿಗೆ ಹೋಗುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿರುವುದರಿಂದ ಪ್ರವಾಸಿಗರು ತಮ್ಮ ಲಗೇಜುಗಳನ್ನು ಸಿದ್ಧಪಡಿಸಿಕೊಂಡು ವಾಪಸ್ ಹೊರಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಪ್ರವಾಸಿಗರು ಮುಂಗಡ ಕಾಯ್ದಿರಿಸಿದ್ದ ಟಿಕೆಟ್ ರದ್ದುಗೊಳಿಸಲು ವಿಧಿಸುವ ಶುಲ್ಕವರನ್ನು ವಿಮಾನಯಾನ ಸಂಸ್ಥೆಗಳು ತೆಗೆದುಹಾಕಿವೆ. ಶ್ರೀನಗರದಲ್ಲಿರುವ ಎನ್‌ಐಟಿಯು ಜಿಲ್ಲಾಡಳಿತದ ಆದೇಶದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ತರಗತಿಗಳನ್ನು ಸ್ಥಗಿತಗೊಳಿಸಿದೆ.

ಸೈನಿಕರಿಗೆ ಹೊಸ ರಜೆ ಇಲ್ಲ

ಸೈನಿಕರಿಗೆ ಹೊಸ ರಜೆ ಇಲ್ಲ

ಕಾಶ್ಮೀರ ಕಣಿವೆಯಲ್ಲಿ ನಿಯೋಜನೆಗೊಂಡಿರುವ ಸಿಆರ್‌ಪಿಎಫ್ ಸಿಬ್ಬಂದಿಗೆ ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ರಜೆ ಮಂಜೂರಾಗುತ್ತಿಲ್ಲ. ಭಯೋತ್ಪಾದನಾ ದಾಳಿಯ ಸಾಧ್ಯತೆ ಕುರಿತು ಗಂಭೀರ ಗುಪ್ತಚರ ವರಿಗಳು ಬಂದಿರುವುದರಿಂದ ಇಡೀ ರಾಜ್ಯದಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ. ಹೀಗಾಗಿ ಸೈನಿಕರ ರಜೆ ಮೇಲೆ ನಿರ್ಬಂಧ ವಿಧಿಸಲಾಗಿದೆ ಎಂದು ಸಿಆರ್‌ಪಿಎಫ್ ತಿಳಿಸಿದೆ.

ಸೈನಿಕರಿಗೆ ಹೊಸದಾಗಿ ರಜೆ ನೀಡುತ್ತಿಲ್ಲ. ಅಲ್ಲದೆ, ರಜೆಯ ಮೇಲೆ ತೆರಳಿರುವವರನ್ನು ವಾಪಸ್ ಕರೆಯಿಸಿಕೊಳ್ಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+