ಕಾಶ್ಮೀರ ಕಗ್ಗಂಟು: ಮಾಜಿ ಸಿಎಂ ಮೆಹಬೂಬಾ ಮುಫ್ತಿ ಪುತ್ರಿ ಬಂಧನ
ಶ್ರೀನಗರ, ಜನವರಿ 02: ಆರ್ಟಿಕಲ್ 370 ರದ್ದು ಮಾಡಿ ತಿಂಗಳುಗಳು ಕಳೆದರೂ ಕಾಶ್ಮೀರದ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ. ರಾಜಕೀಯ ನಾಯಕರ ಬಂಧನಗಳಿಗೆ ತೆರೆ ಬೀಳುತ್ತಿಲ್ಲ.
ರಾಜಕೀಯ ನಾಯಕರ ಗೃಹ ಬಂಧನ, ಬಂಧನಗಳಿಗೆ ಮತ್ತೊಂದು ಸೇರ್ಪಡೆ ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮಫ್ತಿ ಅವರ ಮಗಳು ಇಲ್ತಿಜಾ ಮುಫ್ತಿ ಅವರಿಗೆ ಇಂದು ಗೃಹ ಬಂಧನ ವಿಧಿಸಲಾಗಿದೆ.
ಇಲ್ತಿಜಾ ಮುಫ್ತಿ ಅವರು ಪಿಡಿಪಿ ನಾಯಕಿ, ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಮಗಳಾಗಿದ್ದು, ಅವರು ಇಂದು ತಮ್ಮ ತಾತನ ಸಮಾಧಿ ಸ್ಥಳಕ್ಕೆ ಭೇಟಿ ನೀಡಲು ತೆರಳುವಾಗ ಅವರನ್ನು ತಡೆದು ಗೃಹ ಬಂಧನದಲ್ಲಿ ಇರಿಸಲಾಗಿದೆ.

'ನಾನು ಅನಂತನಾಗ್ ಜಿಲ್ಲೆಯ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದುಕೊಂಡೆ ನಮ್ಮ ತಾತನ ಸಮಾಧಿ ಸ್ಥಳಕ್ಕೆ ಭೇಟಿ ನೀಡುತ್ತಿದ್ದೇನೆ, ಆದರೆ ನನ್ನನ್ನು ಬಲವಂತದಿಂದ ಗೃಹ ಬಂಧನದಲ್ಲಿ ಇರಿಸಲಾಗಿದೆ' ಎಂದು ಆರೋಪಿಸಿದ್ದಾರೆ.
ಆದರೆ ಇದನ್ನು ನಿರಾಕರಿಸಿರುವ ಎಡಿಜಿಪಿ ಮುನಿರ್ ಖಾನ್, 'ಇಲ್ತಿಜಾ ಮುಫ್ತಿ ಅವರಿಗೆ ಅನಂತ್ನಾಗ್ ಜಿಲ್ಲೆ ಆಡಳಿತ ಅನುಮತಿ ನಿರಾಕರಿಸಿದೆ, ಅಷ್ಟೆ ಅಲ್ಲದೆ ಆಕೆ ಎಸ್ಎಸ್ಜಿಪಿ ಭದ್ರತೆ ಇರುವ ವ್ಯಕ್ತಿ ಆಗಿರುವುದರಿಂದ ಅವರು ಸ್ಥಳೀಯ ಪೊಲೀಸ್ ಠಾಣೆಯ ಅನುಮತಿಯನ್ನೂ ಪಡೆದುಕೊಳ್ಳುವುದು ಅವಶ್ಯಕ' ಎಂದಿದ್ದಾರೆ.
ಇಲ್ತಿಜಾ ನಿವಾಸವಿರುವ ಗುಪ್ತಕರ್ ರಸ್ತೆಯಲ್ಲಿ ಬ್ಯಾರಿಕೆಡ್ಗಳನ್ನು ಹಾಕಿ ರಸ್ತೆ ಬಂದ್ ಮಾಡಲಾಗಿದ್ದು, ಮಾಧ್ಯಮದವರ ಪ್ರವೇಶವನ್ನೂ ನಿರ್ಭಂಧಿಸಲಾಗಿದೆ. ಕೇವಲ ಭದ್ರತಾ ಸಿಬ್ಬಂದಿಗೆ ಮಾತ್ರವೇ ರಸ್ತೆಯಲ್ಲಿ ಪ್ರವೇಶ ಕಲ್ಪಿಸಲಾಗಿದೆ.
ಇಲ್ತಿಜಾ ಅವರ ತಾಯಿ ಮೆಹಬೂಬಾ ಮುಫ್ತಿ ಅವರು ಕಳೆದ ವರ್ಷದ ಆಗಸ್ಟ್ 5 ರಿಂದಲೂ ಗೃಹ ಬಂಧನದಲ್ಲಿಯೇ ಇದ್ದಾರೆ. ಜಮ್ಮು ಕಾಶ್ಮೀರದ ಹಲವು ನಾಯಕರು ತಿಂಗಳುಗಳಿಂದ ಗೃಹ ಬಂಧನದಲ್ಲಿದ್ದಾರೆ. ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನ-ಮಾನ ವನ್ನು ರದ್ದು ಗೊಳಿಸುವ ನಿರ್ಣಯ ತೆಗೆದುಕೊಂಡಾಗಿನಿಂದಲೂ ರಾಜ್ಯದ ಹಲವು ನಾಯಕರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ.
ಇಲ್ತಿಜಾ ಅವರ ತಾತ ಮುಫ್ತಿ ಮೊಹಮ್ಮದ್ ಸಯಿದ್ ಸಹ ಜಮ್ಮು ಕಾಶ್ಮೀರದ ಸಿಎಂ ಆಗಿದ್ದರು, ಅವರು 2016 ರಲ್ಲಿ ಅನಾರೋಗ್ಯದಿಂದ ನಿಧನ ಹೊಂದಿದರು.
'ನಮ್ಮ ತಾತನ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದು ಅಪರಾಧವೇ? ಎಂದು ಪ್ರಶ್ನಿಸಿರುವ ಇಲ್ತಿಜಾ, 'ಕಾಶ್ಮೀರ ಪೊಲೀಸರಿಗೆ ಕಣಿವೆ ರಾಜ್ಯದಲ್ಲಿ ಶಾಂತಿ ಬೇಕಾಗಿಲ್ಲ ಎನಿಸುತ್ತದೆ' ಎಂದಿದ್ದಾರೆ.












Click it and Unblock the Notifications