ಮೂವರು 'ಉಗ್ರರ' ಹತ್ಯೆ: ನಕಲಿ ಎನ್ಕೌಂಟರ್ ಆರೋಪ, ತನಿಖೆಗೆ ಮುಫ್ತಿ ಆಗ್ರಹ
ಶ್ರೀನಗರ, ಜನವರಿ 1: ಜಮ್ಮು ಮತ್ತು ಕಾಶ್ಮೀರದ ಲಾವಾಯ್ಪೊರಾದಲ್ಲಿ ನಡೆದ ಎನ್ಕೌಂಟರ್ನಲ್ಲಿ ಬಲಿಯಾದ ಮೂವರು ಯುವಕರ ಮೃತದೇಹಗಳನ್ನು ಅವರ ಕುಟುಂಬದವರಿಗೆ ಹಸ್ತಾಂತರಿಸಬೇಕು ಮತ್ತು ಈ ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಆಗ್ರಹಿಸಿದ್ದಾರೆ.
ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ಹತ್ಯೆಯಾದ ಯುವಕರಿಗೂ ಉಗ್ರರಿಗೂ ಯಾವುದೇ ಸಂಬಂಧವಿಲ್ಲ. ಇದು ನಕಲಿ ಎನ್ಕೌಂಟರ್. ಮೂವರೂ ವಿಶ್ವವಿದ್ಯಾಲಯದಲ್ಲಿ ಅರ್ಜಿ ಸಲ್ಲಿಸುವ ಸಲುವಾಗಿ ತೆರಳಿದ್ದರು. ಅವರು ಅಮಾಯಕರು ಎಂದು ಕುಟುಂಬದವರು ಆರೋಪಿಸಿದ್ದಾರೆ. ಈ ಪ್ರಕರಣದ ಬಗ್ಗೆ ಮುಕ್ತ ತನಿಖೆ ನಡೆಸಬೇಕು ಎಂದು ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ ಮನೋಜ್ ಸಿನ್ಹಾ ಅವರಿಗೆ ಬರೆದಿರುವ ಪತ್ರದಲ್ಲಿ ಮೆಹಬೂಬಾ ಮುಫ್ತಿ ಒತ್ತಾಯಿಸಿದ್ದಾರೆ.
ಬುಧವಾರ ಹೇಳಿಕೆ ನೀಡಿದ್ದ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಸೇನಾ ಪಡೆ, ಎನ್ಕೌಂಟರ್ನಲ್ಲಿ ಮೂವರನ್ನು ಹತ್ಯೆ ಮಾಡಲಾಗಿದ್ದು, ಅವರು ಭಯೋತ್ಪಾದಕರ ಕಟ್ಟರ್ ಸಹವರ್ತಿಗಳಾಗಿದ್ದಾರೆ ಎಂದು ತಿಳಿಸಿದ್ದರು. ಈ ಕುಟುಂಬದ ಇಬ್ಬರು ಪೊಲೀಸ್ ಇಲಾಖೆಯಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಅವರನ್ನು ಉಗ್ರರು ಎಂದು ಹಣೆಪಟ್ಟಿ ಕಟ್ಟಲಾಗಿದೆ. ಅವರಿಗೆ ಉಗ್ರರೊಂದಿಗೆ ಯಾವ ಸಂಬಂಧವೂ ಇರಲಿಲ್ಲ ಎಂದು ಮನೆಯವರು ಹೇಳಿದ್ದಾರೆ. 22 ಮತ್ತು 17 ವರ್ಷದ ಇಬ್ಬರು ವಿದ್ಯಾರ್ಥಿಗಳಾಗಿದ್ದರೆ, 24 ವರ್ಷದ ಮತ್ತೊಬ್ಬ ನಿರ್ಮಾಣ ಕೆಲಸಗಾರನಾಗಿದ್ದ ಎಂದು ಹೇಳಲಾಗಿದೆ.

ದಕ್ಷಿಣ ಕಾಶ್ಮೀರದಲ್ಲಿ ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಿಗ್ಗೆವರೆಗೂ ನಡೆದ ಎನ್ಕೌಂಟರ್ನಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಅವರಿಂದ ಎಕೆ ರೈಫಲ್, ಎರಡು ಪಿಸ್ತೂಲು ಮತ್ತು ಇತರೆ ಅಪಾಯಕಾರಿ ವಸ್ತುಗಳನ್ನು ಸಂಗ್ರಹಿಸಲಾಗಿದೆ. ಶ್ರೀನಗರ ಹೊರವಲಯದಲ್ಲಿನ ಶ್ರೀನಗರ-ಬಾರಾಮುಲ್ಲಾ ಹೆದ್ದಾರಿಯ ಲವಾಯ್ಪೊರಾ ಎಂಬಲ್ಲಿ ಈ ಎನ್ಕೌಂಟರ್ ನಡೆದಿತ್ತು ಎಂದು ಸೇನೆ ತಿಳಿಸಿತ್ತು.
ಮೃತರಲ್ಲಿ ಒಬ್ಬನಾದ ಐಜಾಜ್ ಗನಿ ಎಂಬಾತನ ತಂದೆ ಮೊಹಮ್ಮದ್ ಮಕ್ಬೂಲ್ ಗನಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ತನ್ನ ಮಗ ಯಾವುದೇ ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾಗಿರುವುದಕ್ಕೆ ಪುರಾವೆಗಳಿಲ್ಲ ಎಂದಿದ್ದಾರೆ.
ಜುಲೈ 18ರಂದು ಶೋಪಿಯಾನ್ನಲ್ಲಿ ನಡೆದ ಎನ್ಕೌಂಟರ್ನಲ್ಲಿ ರಾಜೌರಿ ಪಟ್ಟಣದ ಮೂವರು ಕಾರ್ಮಿಕರನ್ನು ಹತ್ಯೆ ಮಾಡಲಾಗಿತ್ತು. ಬಳಿಕ ಅವರನ್ನು ಉಗ್ರರು ಎಂದು ಬಿಂಬಿಸಲಾಗಿತ್ತು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.












Click it and Unblock the Notifications