ಪುಲ್ವಾಮಾದಲ್ಲಿ ಮತ್ತೊಂದು ದಾಳಿ: 9 ಯೋಧರಿಗೆ ಗಾಯ
ಪುಲ್ವಾಮಾ, ಜೂನ್ 17: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸೋಮವಾರ ಸೇನಾ ವಾಹನವೊಂದನ್ನು ಗುರಿಯನ್ನಾಗಿರಿಸಿ ನಡೆದ ದಾಳಿಯಲ್ಲಿ 9 ಮಂದಿ ಸೈನಿಕರು ಗಾಯಗೊಂಡಿದ್ದಾರೆ. ಇವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಎಲ್ಲ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅರಿಹಾಲ್ ಗ್ರಾಮದಲ್ಲಿ ಸೇನೆಯ ವಿಶೇಷ ಪಡೆಗಳ ಬೆಂಗಾವಲು ವಾಹನದ ಮೇಲೆ ಈ ಸುಧಾರಿತ ಸ್ಫೋಟಕ ಸಾಧನದ ದಾಳಿ ನಡೆದಿದೆ.
44ನೇ ರಾಷ್ಟ್ರೀಯ ರೈಫಲ್ಸ್ನ ಬುಲೆಟ್ ಮತ್ತು ಮೈನ್ ಪ್ರೂಫ್ ವಾಹನದ ಮೇಲೆ ಈದ್ಗಾ ಅರಿಹಾಲ್ ಸಮೀಪದ ಅರಿಹಾಲ್-ಲಸ್ಸಿಪೊರಾ ರಸ್ತೆಯಲ್ಲಿ ಐಇಡಿ ದಾಳಿ ನಡೆಸಲಾಗಿದೆ.
ಪಾಕಿಸ್ತಾನವನ್ನು ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡ ಅಮೆರಿಕ
ಪುಲ್ವಾಮಾದಲ್ಲಿ ಉಗ್ರರ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಇಸ್ಲಾಮಾಬಾದ್ನಲ್ಲಿರುವ ಭಾರತದ ಹೈ ಕಮಿಷನ್ಗೆ ಪಾಕಿಸ್ತಾನ ಮಾಹಿತಿ ನೀಡಿದ ಕೆಲವು ದಿನಗಳಲ್ಲಿಯೇ ಈ ಘಟನೆ ನಡೆದಿದೆ. ಈ ದಾಳಿ ಸಾಧ್ಯತೆಯ ಮಾಹಿತಿಯನ್ನು ಅಮೆರಿಕದೊಂದಿಗೂ ಪಾಕಿಸ್ತಾನ ಹಂಚಿಕೊಂಡಿತ್ತು.
ಭಾರತೀಯ ಸೇನೆ ಸ್ಪಷ್ಟನೆ
ಸೋಮವಾರ ಸಂಜೆ ಸೇನಾ ಗಸ್ತು ಪಡೆಯು ಅರಿಹಾಲ್ನ ಪ್ರದೇಶದಲ್ಲಿ ಸಾಗುತ್ತಿದ್ದಾಗ 44ನೇ ರಾಷ್ಟ್ರೀಯ ರೈಫಲ್ಸ್ ಪಡೆಯ ಮೊಬೈಲ್ ವೆಹಿಕಲ್ ಪ್ಯಾಟ್ರೋಲ್ ಮೇಲೆ ವಾಹನದ ಆಧಾರಿತ ಐಇಡಿ ದಾಳಿಗೆ ಉಗ್ರರಿಂದ ಪ್ರಯತ್ನ ನಡೆದಿದೆ. ಸೇನಾ ಪಡೆ ಸುರಕ್ಷಿತವಾಗಿದ್ದು ಸಣ್ಣಪುಟ್ಟ ಗಾಯಗಳಿಗೆ ಒಳಗಾಗಿದ್ದಾರೆ. ಸೇನಾ ಬೆಂಗಾವಲು ಮೇಲೆ ದಾಳಿ ನಡೆದಿದೆ ಎನ್ನುವುದು ಆಧಾರ ರಹಿತ ಎಂದು ಭಾರತೀಯ ಸೇನೆ ತಿಳಿಸಿದೆ.
ಉಗ್ರನ ಜೇಬಿನಲ್ಲಿ ವಾಯುನೆಲೆಯ ಮ್ಯಾಪ್: ಮೇ 23ರಂದು ತಪ್ಪಿದ ಭಾರೀ ದುರಂತ
ದಾಳಿಯ ವಿಫಲ ಪ್ರಯತ್ನ
ಸಶಸ್ತ್ರಭರಿತ ವಾಹನಕ್ಕೆ ದಾಳಿಯಿಂದ ಹಾನಿಯಾಗಿದೆ. ಅದರ ಬೆನ್ನಲ್ಲೇ ಭಾರಿ ಗುಂಡಿನ ದಾಳಿ ಹಾಗೂ ಕಲ್ಲು ತೂರಾಟ ನಡೆಯಿತು. ಆದರೆ, ಇದು ಉಗ್ರರು ನಡೆಸಿದ ದಾಳಿಯ ವಿಫಲ ಪ್ರಯತ್ನ ಎಂದು ಸೇನೆ ಹೇಳಿದೆ. ಸೇನಾಪಡೆ ಸುತ್ತಮುತ್ತಲ ಸ್ಥಳಗಳಲ್ಲಿ ಪತ್ತೆ ಕಾರ್ಯಾಚರಣೆ ನಡೆಸಿದೆ ಎಂದು ತಿಳಿಸಿದೆ.
27 ಕಿ.ಮೀ. ದೂರದಲ್ಲಿ ದಾಳಿ
ಪುಲ್ವಾಮಾದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಫೆಬ್ರವರಿ 14ರಂದು ಭದ್ರತಾ ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ವಾಹನಗಳನ್ನು ಗುರಿಯಾಗಿಸಿ ಆತ್ಮಾಹುತಿ ಬಾಂಬರ್ ಒಬ್ಬ ನಡೆಸಿದ್ದ ದಾಳಿಯಲ್ಲಿ 40 ಸಿಆರ್ಪಿಎಫ್ ಯೋಧರು ಹುತಾತ್ಮರಾದ ಸ್ಥಳದಿಂದ ಈ ಸ್ಫೋಟ ನಡೆದ ಸ್ಥಳ 27 ಕಿ.ಮೀ. ದೂರದಲ್ಲಿದೆ.
ಕಾಶ್ಮೀರ ಪುಲ್ವಾಮಾ ಮಾದರಿ ದಾಳಿ ಹಿಂದೆ ಪಿಎಚ್ ಡಿ ಪದವೀಧರನ ಪಿತೂರಿ!
ಎನ್ಕೌಂಟರ್ನಲ್ಲಿ ಮೇಜರ್ ಸಾವು
ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಎನ್ಕೌಂಟರ್ ಮುಂದುವರಿದಿದೆ. ಇದರಲ್ಲಿ ಸೇನೆಯ ಒಬ್ಬ ಮೇಜರ್ ಹಾಗೂ ಒಬ್ಬ ಉಗ್ರ ಮೃತಪಟ್ಟಿದ್ದಾರೆ. ಮತ್ತೊಬ್ಬ ಅಧಿಕಾರಿ ಹಾಗೂ ಯೋಧರು ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಾಳುಗಳನ್ನು ಶ್ರೀನಗರದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ.