"ಭದ್ರತೆ ಕೊಡ್ತೀವಿ, ಊರು ಬಿಡಬೇಡಿ": ಬೆದರಿದ ನೌಕರರಿಗೆ ಕಾಶ್ಮೀರ ಸರ್ಕಾರದ ಭರವಸೆ
ಶ್ರೀನಗರ್, ಅಕ್ಟೋಬರ್ 13: ಜಮ್ಮು ಕಾಶ್ಮೀರದಲ್ಲಿ ಸೇವಾ ನಿಯಮಗಳ ಪ್ರಕಾರ ಕರ್ತವ್ಯಕ್ಕೆ ಗೈರು ಹಾಜರಾಗುತ್ತಿರುವ ವಲಸೆ ನೌಕರರಿಗೆ ಸರ್ಕಾರ ಎಚ್ಚರಿಕೆ ನೀಡಿದೆ. ಕಣಿವೆ ರಾಜ್ಯವನ್ನು ಬಿಟ್ಟು ಹೋಗದಂತೆ ರಾಜ್ಯ ಸರ್ಕಾರವು ಅವರಿಗೆ ಸೂಚನೆ ನೀಡಿದೆ.
"ಎಲ್ಲಾ ಉಪ ಆಯುಕ್ತರು ಮತ್ತು ಎಸ್ಎಸ್ಪಿಗಳು ತಮ್ಮ ಆತಂಕ ನಿವಾರಣೆಗೆ ಮುಂದಿನ ಎರಡು ಮೂರು ದಿನಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ನಾಯಕರೊಂದಿಗೆ ವೈಯಕ್ತಿಕ ಸಭೆ ನಡೆಸುವಂತೆ ಅಧ್ಯಕ್ಷರು ನಿರ್ದೇಶಿಸಿದ್ದಾರೆ. ಭದ್ರತೆ ಮತ್ತು ವಸತಿಗೆ ಸಂಬಂಧಿಸಿದಂತೆ ಅವರ ಬೇಡಿಕೆಗಳನ್ನು ಪರಿಗಣಿಸಿ," ಎಂದು ವಿಭಾಗೀಯ ಆಯುಕ್ತರು ನೀಡಿದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಶೋಪಿಯಾನ್ನಲ್ಲಿ ಎರಡು ಎನ್ಕೌಂಟರ್: 5 ಭಯೋತ್ಪಾದಕರನ್ನು ಸದೆಬಡಿದ ಭದ್ರತಾ ಪಡೆ
ಕಳೆದ ಅಕ್ಟೋಬರ್ 9ರಂದು ಕಾಶ್ಮೀರ ವಿಭಾಗೀಯ ಆಯುಕ್ತ ಪಾಂಡುರಂಗ ಕೆ ಪೋಲ್ ಅಧ್ಯಕ್ಷತೆಯಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. "ಯಾವುದೇ ವಲಸೆ ಉದ್ಯೋಗಿಯು ಜಿಲ್ಲೆ ಅಥವಾ ಕಣಿವೆಯನ್ನು ತೊರೆಯುವ ಅಗತ್ಯವಿಲ್ಲ. ಯಾರು ಗೈರು ಹಾಜರಾಗುತ್ತಾರೋ ಅವರ ವಿರುದ್ಧ ಸೇವಾ ನಿಯಮಗಳ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು," ಎಂದು ಅಧ್ಯಕ್ಷರು ನಿರ್ದೇಶಿಸಿದ್ದಾರೆ.
ಸುರಕ್ಷಿತ ಮತ್ತು ಭದ್ರತಾ ಸ್ಥಳಗಳಲ್ಲಿ ನಿಯೋಜನೆ
ಜಮ್ಮು ಕಾಶ್ಮೀರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಲಸೆ ನೌಕರರನ್ನು ದೂರದ ಮತ್ತು ದುರ್ಬಲ ಪ್ರದೇಶಗಳ ಬದಲಿಗೆ ಸುರಕ್ಷಿತ ಮತ್ತು ಭದ್ರತೆಯನ್ನು ಹೊಂದಿರುವ ವಲಯಗಳಲ್ಲಿ ನಿಯೋಜಿಸಲು ವಿಭಾಗೀಯ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ. ಆದೇಶದ ಪ್ರಕಾರ ಎಲ್ಲಾ ಉಪ ಆಯುಕ್ತರು, ಎಸ್ಎಸ್ಪಿಗಳು ಅಥವಾ ಅವರ ಪ್ರತಿನಿಧಿಗಳು ಸಭೆಯಲ್ಲಿ ಜಾಗರೂಕತೆ ವಹಿಸಲಾಗಿದ್ದು, ವಲಸೆ ನೌಕರರು, ಸಿಖ್ಖರು, ಕಾಶ್ಮೀರಿ ಪಂಡಿತರು ಮತ್ತು ಕಾರ್ಮಿಕರ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ವಲಸೆ ನೌಕರರ ಕಾಲೋನಿಗೆ ಅಧಿಕಾರಿಗಳ ಭೇಟಿ, ಪರಿಶೀಲನೆ
ಉಪ ಆಯುಕ್ತರು ಮತ್ತು ಎಸ್ಎಸ್ಪಿಗಳು ಕಾಶ್ಮೀರ ಕಣಿವೆಯ ವಲಸೆ ನೌಕರರು ವಾಸಿಸುವ ಕಾಲೋನಿಗಳಿಗೆ ಭೇಟಿ ನಿರಂತರವಾಗಿ ಭೇಟಿ ನೀಡುತ್ತಿದ್ದಾರೆ. ಸರ್ಕಾರದಿಂದ ಅವರ ಸುರಕ್ಷತೆ ಮತ್ತು ಭದ್ರತೆಗಾಗಿ ಕೈಗೊಳ್ಳಲಾಗಿರುವ ಕ್ರಮಗಳು, ಸೌಲಭ್ಯಗಳು ಮತ್ತು ಇತರ ವ್ಯವಸ್ಥೆಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲಾಗುತ್ತದೆ. ಅಲ್ಲದೇ ಸಂಬಂಧಪಟ್ಟ ತಹಸೀಲ್ದಾರ್ಗಳು, ಎಸ್ಎಚ್ಒಗಳು ಮತ್ತು ಭದ್ರತಾ ಪಡೆಗಳು ವಲಸಿಗರಲ್ಲದ ಪಂಡಿತರು ಮತ್ತು ಸಿಖ್ಖರು ವಾಸಿಸುವ ಪ್ರದೇಶಗಳಿಗೂ ಭೇಟಿ ನೀಡುತ್ತಿದ್ದಾರೆ ಎಂದು ಸರ್ಕಾರ ಹೇಳಿದೆ.
ಕಾಶ್ಮೀರದಲ್ಲಿ ಅಲ್ಪಸಂಖ್ಯಾತ, ನುರಿತ ಕಾರ್ಮಿಕರಿಗೆ ಭದ್ರತೆ
ಜಮ್ಮು ಕಾಶ್ಮೀರದ ಬಹುಪಾಲು ಜಿಲ್ಲೆಗಳಲ್ಲಿ ವಲಸಿಗರಲ್ಲದ ಅಲ್ಪಸಂಖ್ಯಾತ ಕಾರ್ಮಿಕರು ಮತ್ತು ನುರಿತ ಕಾರ್ಮಿಕರನ್ನು ಗುರುತಿಸಬೇಕು. ಅವರಿಗೆ ಭದ್ರತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅದಲ್ಲದೆ, ಅವರ ಜೊತೆ ನಿಯಮಿತವಾದ ಸಂವಾದಗಳನ್ನು ನಡೆಸಲಾಗುವುದು, ಇದರಿಂದ ಅವರ ಭದ್ರತೆಗೆ ಸಂಬಂಧಿಸಿದಂತೆ ಯಾವುದೇ ಆತಂಕ ಉಂಟಾಗದಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ. ಈ ವಲಸೆ ಉದ್ಯೋಗಿಗಳನ್ನು ಸದ್ಯಕ್ಕೆ ದೂರದ ಮತ್ತು ದುರ್ಬಲ ಪ್ರದೇಶಗಳ ಬದಲಿಗೆ ಸುರಕ್ಷಿತ ಮತ್ತು ಸುಭದ್ರವಾಗಿರುವ ವಲಯಗಳಲ್ಲಿ ನಿಯೋಜಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವ ಬಗ್ಗೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಕಣಿವೆ ರಾಜ್ಯದಲ್ಲಿ ಭಯ ಹೆಚ್ಚಿಸಿದ ನಾಗರಿಕರ ಹತ್ಯೆ
ಶ್ರೀನಗರದಲ್ಲಿ ಇತ್ತೀಚೆಗೆ ನಡೆದ ನಾಗರಿಕ ಹತ್ಯೆಗಳ ಹಿನ್ನೆಲೆಯಲ್ಲಿ ಅನೇಕ ವಲಸೆ ಉದ್ಯೋಗಿಗಳು ಕಣಿವೆಯನ್ನು ತೊರೆದರು. ಈ ಹಿನ್ನೆಲೆ ನೌಕರರು, ಪಿಆರ್ಐಗಳು, ರಾಜಕೀಯ ಪಕ್ಷದ ನಾಯಕರು, ಅಲ್ಪಸಂಖ್ಯಾತ ಜನರಿಗೆ ಸಂಪೂರ್ಣ ಸಹಕಾರ, ಬೆಂಬಲ ಮತ್ತು ಭದ್ರತೆಗೆ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಪುನರುಚ್ಚರಿಸಲಾಗಿದೆ. ವಲಸೆ ನೌಕರರು ಮತ್ತು ವಲಸೆ ನೌಕರರ ಒಕ್ಕೂಟ ಹಾಗೂ ಅಲ್ಪಸಂಖ್ಯಾತರೊಂದಿಗೆ ವಿಶೇಷ ಸಭೆಗಳನ್ನು ನಡೆಸಬೇಕು, ಇದರಿಂದ ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು ಮತ್ತು ಭದ್ರತೆಗೆ ಸಂಬಂಧಿಸಿದಂತೆ ಆತಂಕ ನಿವಾರಿಸಲು ಸಾಧ್ಯವಾಗುತ್ತದೆ," ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಉಗ್ರರಿಂದ ಕಣಿವೆ ರಾಜ್ಯದಲ್ಲಿ ನಾಗರಿಕರ ಹತ್ಯೆ
ಕಳೆದ ಅಕ್ಟೋಬರ್ 5ರಂದು ಪ್ರಮುಖ ಕಾಶ್ಮೀರಿ ಪಂಡಿತ ಮಕಾನ್ ಲಾಲ್ ಬಿಂದ್ರೂ ಅವರನ್ನು ಉಗ್ರರು ಅಂಗಡಿಯಲ್ಲಿ ಗುಂಡಿಕ್ಕಿ ಕೊಂದರು. ಬಿಂದ್ರೂ ಹತ್ಯೆಯಾದ ಒಂದು ಗಂಟೆಯೊಳಗೆ ಬಿಹಾರದ ಇನ್ನೊಬ್ಬ ಹಿಂದೂ ಪುಚ್ಕಾ ಮಾರಾಟಗಾರನನ್ನು ನಗರದ ಲಾಲ್ ಬಜಾರ್ ಪ್ರದೇಶದಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಮುಸ್ಲಿಂ ಟ್ಯಾಕ್ಸಿ ಚಾಲಕ ಮೊಹಮ್ಮದ್ ಶಾಫಿ ಲೋನ್ ಎಂಬಾತನನ್ನು ಹತ್ಯೆ ಮಾಡಲಾಗಿತ್ತು.
ಅಕ್ಟೋಬರ್ 6ರಂದು ಉಗ್ರರು 50 ವರ್ಷದ ಸಿಖ್ ಮಹಿಳಾ ಪ್ರಿನ್ಸಿಪಾಲ್ ಸತೀಂದರ್ ಕೌರ್, ಸ್ಥಳೀಯ ಕಾಶ್ಮೀರಿ ಪಂಡಿತ್ ದೀಪಕ್ ಚಂದ್ ಅವರನ್ನು ಕೊಂದರು. ಬಹುಸಂಖ್ಯಾತ ಸಮುದಾಯವೇ ಬೆಚ್ಚಿ ಬೀಳುವಂತಾ ಘಟನೆ ಇದಾಯಿತು. ಇದರಿಂದ ಅಲ್ಪಸಂಖ್ಯಾತ ಸಮುದಾಯದಲ್ಲೂ ಆತಂಕ ಸೃಷ್ಟಿ ಆಯಿತು. ಈ ವರ್ಷ 28 ನಾಗರಿಕರನ್ನು ಕೊಲ್ಲಲಾಗಿದ್ದು, ಅವರಲ್ಲಿ ಏಳು ಮಂದಿ ಅಲ್ಪಸಂಖ್ಯಾತರಾಗಿದ್ದಾರೆ. ಉಳಿದವರು ಬಹುಸಂಖ್ಯಾತರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.