ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆಯ ಭರ್ಜರಿ ದಾಳಿ
ಶ್ರೀನಗರ, ಆಗಸ್ಟ್ 3: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಪ್ರಮಾಣದ ಸೇನೆ ಜಮಾವಣೆ ಮಾಡುತ್ತಿದ್ದ ಭಾರತೀಯ ಸೇನೆಯ ನಡೆಗೆ ಉತ್ತರ ಈಗ ದೊರಕಿದೆ. ಪಾಕ್ ಆಕ್ರಮಿತ ಕಾಶ್ಮೀರದ ಒಳಗೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಮಾದರಿಯ ದಾಳಿ ನಡೆಸುವ ಮೂಲಕ ಉಗ್ರರ ದಮನಕ್ಕೆ ಭಾರಿ ಕಾರ್ಯಾಚರಣೆ ನಡೆಸಿದೆ ಎಂದು ವರದಿಯಾಗಿದೆ.
ಪಾಕ್ ಆಕ್ರಮಿತ ಕಾಶ್ಮೀರದ 30 ಕಿ.ಮೀ. ಒಳಭಾಗದಲ್ಲಿ ಉಗ್ರರ ಅಡಗುದಾಣಗಳು ಇರುವ ಬಗ್ಗೆ ಭಾರತದ ಗುಪ್ತಚರ ಸಂಸ್ಥೆ ಖಚಿತ ಮಾಹಿತಿಗಳನ್ನು ನೀಡಿತ್ತು. ಉಗ್ರರು ಭಾರತದೊಳಗೆ ಪ್ರವೇಶಿಸಿ ಭೀಕರ ದಾಳಿಗಳನ್ನು ನಡೆಸುವ ಸಾಧ್ಯತೆ ಇದೆ ಎಂಬ ಎಚ್ಚರಿಕೆ ನೀಡಲಾಗಿತ್ತು. ಹೀಗಾಗಿ ಉಗ್ರರ ದಾಳಿಗೆ ಅವಕಾಶ ನೀಡುವ ಮೊದಲೇ ಭಾರತೀಯ ಸೇನೆ ದಾಳಿ ನಡೆಸಿದೆ.
ಪಿಒಕೆ ಒಳಗೆ ಪ್ರವೇಶಿಸಿದೆಯೇ ಆರ್ಟಿಲರಿ ಗನ್ಗಳನ್ನು ಬಳಸಿ ಉಗ್ರರ ಅಡಗುದಾಣಗಳ ಮೇಲೆ ಬಾಂಬ್ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ಜಲವಿದ್ಯುತ್ ಸ್ಥಾವರ ನೀಲಂ-ಜೇಲಂಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿಯ ಸಂಭವವಿದೆ. ಗುಪ್ತಚರ ಇಲಾಖೆಯ ವಿಶ್ವಾಸಾರ್ಹ ಮಾಹಿತಿಗಳ ಅಡಿಯಲ್ಲಿ ಭದ್ರತೆಯ ದೃಷ್ಟಿಯಿಂದ ಸೇನೆ ನಿಯೋಜನೆ ಮಾಡಲಾಗುತ್ತಿದೆ ಎಂದು ಸರ್ಕಾರ ತಿಳಿಸಿತ್ತು. ಅದಕ್ಕಾಗಿ ಅಮರನಾಥ ಯಾತ್ರಾರ್ಥಿಗಳು ತಮ್ಮ ಪ್ರವಾಸವನ್ನು ಕೈಬಿಟ್ಟು ವಾಪಸ್ ಹೋಗುವಂತೆ ಸೂಚನೆ ನೀಡಲಾಗಿತ್ತು.
ಈ ದಾಳಿಯಲ್ಲಿ ಎಷ್ಟು ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿದೆ ಮತ್ತು ಅವರ ಅಡಗುದಾಣಗಳನ್ನು ಧ್ವಂಸ ಮಾಡಲಾಗಿದೆ ಎನ್ನುವುದು ಇನ್ನೂ ತಿಳಿದುಬಂದಿಲ್ಲ.

15 ಉಗ್ರರ ತಂಡಗಳಿಂದ ದಾಳಿ ಎಚ್ಚರಿಕೆ
ಜೈಶ್ ಎ ಮೊಹಮ್ಮದ್ ಮಸೂದ್ ಅಜರ್ನ ಸಹೋದರ ಇಬ್ರಾಹಿಂ ಅಜರ್, ಸಂಘಟನೆಯ 15 ತರಬೇತಿ ಪಡೆದ ತಂಡಗಳೊಂದಿಗೆ ಪಾಕಿಸ್ತಾನ ಆಕ್ರಮಿತ ಪ್ರದೇಶದ ಮರ್ಕಾಜ್, ಸನಂ ಬಿನ್ ಸಲ್ಮಾ, ತರ್ನಾಬ್ ಫಾರ್ಮ್, ಪೆಶಾವರ, ಖೈಬರ್ ಪಖ್ತುಂಖ್ವಾಗಳಲ್ಲಿನ ನೆಲೆಗಳಿಗೆ ಕಾಲಿಟ್ಟಿದ್ದಾನೆ. ಪಾಕಿಸ್ತಾನದ ಜಾಮ್ರುದ್ ಪ್ರದೇಶದಲ್ಲಿ ಉಗ್ರರಿಗೆ ಅಸ್ಕಾರಿ ತರಬೇತಿ ಶಿಬಿರಗಳನ್ನು ನಡೆಸಲಾಗಿತ್ತು. ಈ ಎಲ್ಲ 15 ಉಗ್ರರ ಗುಂಪುಗಳು ಜಮ್ಮು ಮತ್ತು ಕಾಶ್ಮೀರದೊಳಗೆ ನುಸುಳಲು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಉಗ್ರರಿಗೆ ಬೆಂಬಲವಾಗಿ ಪಾಕ್ ಸೇನೆ
ಭಾರತದ ಪೂಂಚ್ ಜಿಲ್ಲೆಯ ಶಾಹ್ಪುರ ವಲಯಕ್ಕೆ ಅಭಿಮುಖವಾಗಿ ಇರುವ ಪಾಕ್ ಆಕ್ರಮಿತ ಕಾಶ್ಮೀರದ ನೇಜಿಪಿರ್ ವಲಯದಲ್ಲಿ ಉಗ್ರರು ನೆಲೆಗಳಲ್ಲಿ ಜೈಶ್ನ ಮೂವರು ಉಗ್ರರು ದಾಳಿಗೆ ಸಿದ್ಧರಾಗಿದ್ದಾರೆ. ಪಾಕಿಸ್ತಾನದ ವಿಶೇಷ ಸೇವಾ ಸಮೂಹ (ಎಸ್ಎಸ್ಜಿ) ಕಮಾಂಡೋಗಳು ಈ ಏರಿಯಾದಲ್ಲಿ ನಿಯೋಜಿತರಾಗಿದ್ದು ಉಗ್ರರಿಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ವರದಿಗಳು ತಿಳಿಸಿದ್ದವು.

ಮೂವರು ಉಗ್ರರ ಹತ್ಯೆ
ಕಳೆದ 24 ಗಂಟೆಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾಪಡೆಗಳು ಮೂವರು ಉಗ್ರರನ್ನು ಹತ್ಯೆ ಮಾಡಿವೆ ಎಂದು ವರದಿಯಾಗಿದೆ. ಉತ್ತರ ಕಾಶ್ಮೀರದ ಸಾಪೋರ್ನಲ್ಲಿ ಉಗ್ರರೊಂದಿಗೆ ಸೇನೆಯ ಜಂಟಿ ಪಡೆಗಳು ಗುಂಡಿನ ಚಕಮಕಿ ನಡೆಸಿದ್ದವು. ಸುದೀರ್ಘ ಕಾದಾಟದಲ್ಲಿ ಶುಕ್ರವಾರ ಒಬ್ಬನನ್ನು ಹತ್ಯೆ ಮಾಡಲಾಗಿತ್ತು. ಆತನ ಗುರುತು ಪತ್ತೆಯಾಗಿರಲಿಲ್ಲ. ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಶುಕ್ರವಾರ ಜೀನತುಲ್ ಇಸ್ಲಾಂ ಎಂಬಾತನ್ನು ಬಲಿತೆಗೆದುಕೊಳ್ಳಲಾಗಿತ್ತು. ಮತ್ತೊಬ್ಬ ಉಗ್ರ ಮನ್ಜೂರ್ ಭಟ್ ಎಂಬಾತನನ್ನು ಕೂಡ ಕೊಂದು ಹಾಕಲಾಗಿದೆ.

ಕಾಶ್ಮೀರಿಗಳ ಹೋರಾಟ ಯಶಸ್ವಿಯಾಗಲಿದೆ
'ಭಾರತದ ಸೇನಾಪಡೆಗಳು ಕ್ಲಸ್ಟರ್ ಬಾಂಬ್ಗಳನ್ನು ಬಳಸುವ ಮೂಲಕ ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಉಲ್ಲಂಘಿಸಿರುವುದು ಖಂಡನೀಯ. ಕಾಶ್ಮೀರಿಗಳು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸ್ವಯಂ ನಿರ್ಧಾರ ತೆಗೆದುಕೊಂಡಿರುವುದನ್ನು ಯಾವುದೇ ಶಸ್ತ್ರಾಸ್ತ್ರಗಳು ಕಸಿದುಕೊಳ್ಳಲಾರವು. ಪ್ರತಿಯೊಬ್ಬ ಪಾಕಿಸ್ತಾನಿಯ ರಕ್ತದಲ್ಲಿಯೂ ಕಾಶ್ಮೀರಿ ರಕ್ತ ಹರಿಯುತ್ತಿದೆ. ಕಾಶ್ಮೀರಿಗಳ ಸ್ವಾತಂತ್ರ್ಯದ ಹೋರಾಟ ಯಶಸ್ವಿಯಾಗಲಿದೆ' ಎಂದು ಪಾಕಿಸ್ತಾನದ ಪಡೆಗಳ ವಕ್ತಾರರ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.











Click it and Unblock the Notifications