ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಮುಖ್ಯಸ್ಥ ಸೈಫುಲ್ಲಾ ಎನ್ ಕೌಂಟರ್
ಶ್ರೀನಗರ್, ನವೆಂಬರ್.01: ಜಮ್ಮು-ಕಾಶ್ಮೀರ ರಾಜಧಾನಿ ಶ್ರೀನಗರ್ ನಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರವಾದಿ ಸಂಘಟನೆ ಮುಖ್ಯಸ್ಥ ಸೈಫುಲ್ಲಾನನ್ನು ಭಾರತೀಯ ಭದ್ರತಾ ಸಿಬ್ಬಂದಿ ಹೊಡೆದುರುಳಿಸಿದ್ದಾರೆ.
"ಶ್ರೀನಗರ್ ನ ರಾಂಗ್ರೆಥ್ ಪ್ರದೇಶದಲ್ಲಿ ಭಾರತೀಯ ಸೇನೆಯು ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿತು. ಈ ವೇಳೆ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಮುಖ್ಯಸ್ಥ ಸೈಫುಲ್ಲಾನನ್ನು ಹತ್ಯೆಗಯ್ಯಲಾಗಿದೆ ಎಂದು ಕಾಶ್ಮೀರದ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ವಿಜಯ್ ಕುಮಾರ್ ತಿಳಿಸಿದ್ದಾರೆ.
ಇದಕ್ಕೂ ಮೊದಲು ಶ್ರೀನಗರ್ ರಾಂಗ್ರೆಥ್ ಪ್ರದೇಶದಲ್ಲಿ ಮೂವರು ಉಗ್ರರು ಅಡಗಿ ಕುಳಿತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನಲೆ ಜಮ್ಮು ಕಾಶ್ಮೀರ ಪೊಲೀಸ್ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಯು ಜಂಟಿ ಕಾರ್ಯಾಚರಣೆ ನಡೆಸಿತು.

ಸೇನೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ:
ಜಮ್ಮು ಕಾಶ್ಮೀರ ಪೊಲೀಸ್ ಮತ್ತು ಸಿಆರ್ ಪಿಎಫ್ ಪಡೆಯು ಕಾರ್ಯಾಚರಣೆಗೆ ಇಳಿಯುತ್ತಿದ್ದಂತೆ ಅವಿತು ಕುಳಿತ ಉಗ್ರರು ಗುಂಡಿನ ದಾಳಿ ಆರಂಭಿಸಿದರು. ಭದ್ರತಾ ಸಿಬ್ಬಂದಿ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯಿತು. ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಫುಲ್ಲಾನನ್ನು ಜೀವಂತವಾಗಿ ಬಂಧಿಸುವುದಕ್ಕೆ ಪ್ರಯತ್ನಿಸಲಾಯಿತಾದರೂ ಸಾಧ್ಯವಾಗಲಿಲ್ಲ. ಭದ್ರತಾ ಪಡೆಯ ಗುಂಡಿನ ದಾಳಿಗೆ ಸೈಫುಲ್ಲಾ ಮೃತಪಟ್ಟಿದ್ದು, ಸ್ಥಳದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
2014ರಲ್ಲಿ ಉಗ್ರ ಸಂಘಟನೆ ಸೇರ್ಪಡೆ:
ಸೈಫುಲ್ಲಾ ಮಿರ್ ಅಲಿಯಾಸ್ ಘಜಿ ಹೈದರ್ ಅಲಿಯಾಸ್ ಡಾಕ್ಟರ್ ಸಾಹಬ್ 2014ರ ಅಕ್ಟೋಬರ್ ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದನು. ಪುಲ್ವಾಮಾದ ಮಲಾಂಗ್ ಪುರ್ ನಲ್ಲಿ ಈತನನ್ನು ರಿಯಾಜ್ ನೈಕೂ ಸಂಘಟನೆಗೆ ಸೇರಿಸಿಕೊಂಡಿದ್ದು, ಘಜಿ ಹೈದರ್ ಎಂದು ಹೆಸರು ಕೊಟ್ಟಿದ್ದನು. 2020ರ ಮೇ ತಿಂಗಳಿನಲ್ಲಿ ರಿಯಾಜ್ ನೈಕೂ ಎನ್ ಕೌಂಟರ್ ನಲ್ಲಿ ಹತನಾದ ಬಳಿಕ ಸೈಫುಲ್ಲಾ ಸಂಘಟನೆಯ ನೇತೃತ್ವವನ್ನು ವಹಿಸಿಕೊಂಡಿದ್ದನು. ಭಾರತೀಯ ಸೇನೆ ಮೇಲೆ ನಡೆದ ಹಲವು ಉಗ್ರ ದಾಳಿಗಳಲ್ಲಿ ಪ್ರಮುಖ ಪಾತ್ರ ವಹಿಸಿದ ಸೈಫುಲ್ಲಾ ಕೂಡಾ ಟಾಪ್-10 ಉಗ್ರರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದನು.












Click it and Unblock the Notifications