Breaking; ಕಾಶ್ಮೀರದ ಅನಂತ್ನಾಗ್ನಲ್ಲಿ ಎನ್ಕೌಂಟರ್
ಶ್ರೀನಗರ, ಜೂನ್ 03; ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಭಾರತೀಯ ಸೇನಾಪಡೆ ಮತ್ತು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಉಗ್ರ ಜೊತೆ ಗುಂಡಿನ ಚಕಮಕಿ ಆರಂಭಿಸಿದ್ದಾರೆ.
ಶುಕ್ರವಾರ ರಾತ್ರಿ ಅನಂತ್ ನಾಗ್ ಜಿಲ್ಲೆಯ ರಿಷಿಪೋರಾ ಪ್ರದೇಶದಲ್ಲಿ ಈ ಗುಂಡಿನ ಚಕಮಕಿ ಆರಂಭವಾಗಿದೆ. ಎಷ್ಟು ಮಂದಿ ಉಗ್ರರು ಅಡಗಿದ್ದಾರೆ? ಎಂಬ ಬಗ್ಗೆ ಖಚಿತವಾದ ಮಾಹಿತಿ ಸಿಕ್ಕಿಲ್ಲ.
ಗುಂಡಿನ ಚಕಮಕಿ ವೇಳೆ ಮೂವರು ಯೋಧರು, ಒಬ್ಬರು ನಾಗರಿಕರಿಗೆ ಗಾಯವಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಗಾಯಗೊಂಡವರನ್ನು 92 ಬೇಸ್ ಕ್ಯಾಂಪ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಯೋಧರು ಉಗ್ರರನ್ನು ಸುತ್ತುವರೆದಿದ್ದಾರೆ. ಕಾರ್ಯಾಚರಣೆ ಮುಂದುವರೆದಿದೆ. ಕಳೆದ ಒಂದು ವಾರದಿಂದ ಕಣಿವೆ ರಾಜ್ಯದಲ್ಲಿ ಉಗ್ರರ ದಾಳಿ ಪ್ರಕರಣಗಳು ಹೆಚ್ಚಾಗಿವೆ. ಗುರುವಾರ ಬ್ಯಾಂಕ್ ಮ್ಯಾನೇಜರ್, ಇಬ್ಬರು ವಲಸೆ ಕಾರ್ಮಿಕರನ್ನು ಉಗ್ರರು ಹತ್ಯೆ ಮಾಡಿದ್ದರು.
ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿಯಲ್ಲಿ ಕಾಶ್ಮೀರದಲ್ಲಿನ ಸರಣಿ ಹತ್ಯೆ ಬಗ್ಗೆ ಸಭೆ ನಡೆಸಿದ್ದರು. ಅಧಿಕಾರಿಗಳು ಸರಣಿ ಹತ್ಯೆಗಳ ಹಿಂದೆ ಪಾಕಿಸ್ತಾನದ ಕೈವಾಡವಿರುವ ಕುರಿತು ಸಚಿವರಿಗೆ ಮಾಹಿತಿ ನೀಡಿದ್ದರು.
ವಲಸೆ ಕಾರ್ಮಿಕರು, ಹಿಂದೂಗಳನ್ನು ಗುರಿಯಾಗಿಸಿಕೊಂಡು ಉಗ್ರರು ನಡೆಸುತ್ತಿರುವ ದಾಳಿ ಕಣಿವೆಯಲ್ಲಿ ಆತಂಕ ಮೂಡಿಸಿದೆ. ಕಾಶ್ಮೀರಿ ಪಂಡಿತರು ಕಾಶ್ಮೀರ ತೊರೆಯಲು ಪ್ರಯತ್ನ ನಡೆಸಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ಸರ್ಕಾರ ಧೈರ್ಯ ತುಂಬಿದೆ.
ಇಂತಹ ಸಮಯದಲ್ಲಿ ಶುಕ್ರವಾರ ರಾತ್ರಿ ಮತ್ತೆ ಎನ್ಕೌಂಟರ್ ಆರಂಭವಾಗಿದೆ. ಭದ್ರತಾ ಪಡೆಗಳು ಉಗ್ರರ ಉಪಟಳಕ್ಕೆ ತಡೆ ಹಾಕಲು ಯೋಜನೆ ರೂಪಿಸಿದ್ದು,ಕಾರ್ಯಾಚರಣೆ ತೀವ್ರಗೊಳ್ಳುವ ಸಾಧ್ಯತೆ ಇದೆ.












Click it and Unblock the Notifications