ರಾಷ್ಟ್ರಧ್ವಜದ ಬಗ್ಗೆ ಹೇಳಿಕೆ: ಮೆಹಬೂಬ ಮುಫ್ತಿಯನ್ನು ಬಂಧಿಸಲು ಬಿಜೆಪಿ ಆಗ್ರಹ
ಶ್ರೀನಗರ, ಅಕ್ಟೋಬರ್ 24: ತ್ರಿವರ್ಣ ಧ್ವಜದ ಬಗ್ಗೆ 'ದೇಶದ್ರೋಹದ' ಹೇಳಿಕೆ ನೀಡಿದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ನಾಯಕಿ ಮೆಹಬೂಬ ಮುಫ್ತಿ ಅವರನ್ನು ಬಂಧಿಸುವಂತೆ ಅಲ್ಲಿನ ಬಿಜೆಪಿ ಘಟಕ ಒತ್ತಾಯಿಸಿದೆ.
370ನೇ ವಿಧಿ ರದ್ಧತಿಗೂ ಮುನ್ನ ಬಂಧನಕ್ಕೆ ಒಳಗಾಗಿ 14 ತಿಂಗಳ ಬಳಿಕ ಬಿಡುಗಡೆಯಾದ ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮೆಹಬೂಬ ಮುಪ್ತಿ, ಜಮ್ಮು ಮತ್ತು ಕಾಶ್ಮೀರದ ಬಾವುಟವನ್ನು ಮತ್ತೆ ಹಾರಿಸಲು ಅವಕಾಶ ಸಿಕ್ಕಬಳಿಕವಷ್ಟೇ ರಾಷ್ಟ್ರೀಯ ಧ್ವಜವನ್ನು ಹಾರಿಸುವುದಾಗಿ ಹೇಳಿದ್ದರು.
'ಅವರು ನಮ್ಮ ಧ್ವಜವನ್ನು ಮರಳಿಸುವವರೆಗೂ ನಾವು ಅವರ ಧ್ವಜವನ್ನು ಕೊಂಡೊಯ್ಯುವುದಿಲ್ಲ' ಎಂದು ಮೆಹಬೂಬ ಮುಫ್ತಿ ಹೇಳಿಕೆ ನೀಡಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಘಟಕ, ಮೆಹಬೂಬ ಮುಫ್ತಿ ಅವರ ದೇಶದ್ರೋಹದ ಹೇಳಿಕೆಯನ್ನು ಪರಿಗಣಿಸಿ ಅವರ ವಿರುದ್ಧ ದೇಶದ್ರೋಹ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರಿಗೆ ಮನವಿ ಮಾಡಿದೆ.
'ನಾವು ನಮ್ಮ ಧ್ವಜ, ದೇಶ ಮತ್ತು ತಾಯ್ನಾಡಿಗಾಗಿ ನಮ್ಮ ಪ್ರತಿ ಹನಿ ರಕ್ತವನ್ನೂ ತ್ಯಾಗ ಮಾಡುತ್ತೇವೆ. ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ. ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದೇ ಒಂದು ಬಾವುಟವನ್ನು ಹಾರಿಸಬಹುದು, ಅದು ಭಾರತದ ಧ್ವಜ' ಎಂದು ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಧ್ವಜವನ್ನು ಮತ್ತೆ ಹಾರಿಸುವ ಅಥವಾ ಸಂವಿಧಾನದ 370ನೇ ವಿಧಿಯನ್ನು ಮರಳಿ ಸ್ಥಾಪಿಸುವ ಶಕ್ತಿ ಭೂಮಿಯ ಮೇಲೆಯೇ ಇಲ್ಲ ಎಂದಿರುವ ಅವರು, ಜಮ್ಮು ಮತ್ತು ಕಾಶ್ಮೀರದ ಜನತೆಯನ್ನು ಕೆಣಕಬೇಡಿ. ಒಂದು ವೇಳೆ ಯಾವುದೇ ತಪ್ಪು ನಡೆದರೂ ಅದರ ಪರಿಣಾಮವನ್ನು ನೀವೇ ಎದುರಿಸಬೇಕಾಗುತ್ತದೆ ಎಂದು ಮೆಹಬೂಬಮುಫ್ತಿಗೆ ಅವರು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications