ಜಮ್ಮು ಮತ್ತು ಕಾಶ್ಮೀರದಲ್ಲಿ ಗ್ರೆನೇಡ್ ದಾಳಿ; 9 ಮಂದಿಗೆ ಗಾಯ
ಶ್ರೀನಗರ, ಅಕ್ಟೋಬರ್ 28 : ಜಮ್ಮು ಮತ್ತು ಕಾಶ್ಮೀರದ ಸಪೋರ್ ಬಸ್ ನಿಲ್ದಾಣದ ಮೇಲೆ ಗ್ರೆನೇಡ್ ದಾಳಿ ನಡೆದಿದೆ. 9 ಜನರು ಈ ಘಟನೆಯಲ್ಲಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.
ಸೋಮವಾರ ಸಂಜೆ ಉಗ್ರರು ಸಪೋರ್ ಬಸ್ ನಿಲ್ದಾಣದ ಮೇಲೆ ಗ್ರೆನೇಡ್ ಎಸೆದರು. ನಿಲ್ದಾಣದಲ್ಲಿದ್ದ 9 ಜನರು ಗಾಯಗೊಂಡರು. ಎಲ್ಲರನ್ನು ಶ್ರೀನಗರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಭದ್ರತಾ ಪಡೆಗಳು ತಕ್ಷಣ ಸ್ಥಳಕ್ಕೆ ಆಗಮಿಸಿದ್ದು, ಉಗ್ರರಿಗಾಗಿ ಶೋಧ ಕಾರ್ಯ ಆರಂಭಿಸಿವೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸಹ ಸ್ಥಳಕ್ಕೆ ತೆರಳಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಅಕ್ಟೋಬರ್ 12ರಂದು ಶ್ರೀನಗರದಲ್ಲಿ ನಡೆದ ಗ್ರೆನೇಡ್ ದಾಳಿಯಲ್ಲಿ 5 ಜನರು ಗಾಯಗೊಂಡಿದ್ದರು. ಈ ಘಟನೆ ಬಳಿಕ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಉಗ್ರರನ್ನು ಸೆದೆ ಬಡಿಯುವ ಕಾರ್ಯಾಚರಣೆಯನ್ನು ಸೇನೆ ಕೈಗೊಂಡಿದೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಾಕಿಸ್ತಾನ ಗಡಿಯಲ್ಲಿ ತಂಟೆ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದ ರಜೌರಿ ಜಿಲ್ಲೆಯಲ್ಲಿಲೇ ಕನದ ವಿರಾಮವನ್ನು ಉಲ್ಲಂಘಿಸಿತ್ತು. ಜನವಸತಿ ಪ್ರದೇಶಗಳನ್ನು ಟಾರ್ಗೆಟ್ ಮಾಡಿ ಶೆಲ್ ದಾಳಿ ನಡೆಸಿತ್ತು.
2019ರಲ್ಲಿ 2,100ಕ್ಕೂ ಅಧಿಕ ಬಾರಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದೆ. ಅಕ್ಟೋಬರ್ ತಿಂಗಳಿನಲ್ಲಿ ನಡೆದ ಅಪ್ರಚೋದಿತ ದಾಳಿಯಲ್ಲಿ ಭಾರತದ 5 ಸೈನಿಕರು ಹುತಾತ್ಮರಾಗಿದ್ದಾರೆ.












Click it and Unblock the Notifications