ಕಷ್ಟದ ಸಮಯದಲ್ಲಿ ನನ್ನ ಜೊತೆ ನಿಂತಿದ್ದು ಕರ್ನಾಟಕದ ಆ ಸ್ಟಾರ್ ಆಟಗಾರ: ವಿರಾಟ್ ಕೊಹ್ಲಿ
Virat Kohli: ವಿರಾಟ್ ಕೊಹ್ಲಿ ಅವರು ಸದ್ಯ ನಡೆಯುತ್ತಿರುವ 2026ನೇ ಸೀಸನ್ನ ಐಪಿಎಲ್ನಲ್ಲಿ ಆರ್ಸಿಬಿ ಪರ ರನ್ಗಳ ಹೊಳೆಯನ್ನೇ ಹರಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಈ ನಡುವೆಯೇ ಇದೀಗ ಅವರು ಹಿಂದೆ ತಮ್ಮ ವೃತ್ತಿಜೀವನದಲ್ಲಿ ಅನುಭವಿಸಿದ್ದ ಮಾನಸಿಕ ಸವಾಲುಗಳ ಬಗ್ಗೆ ಮಾತನಾಡಿದ್ದು, ಆ ವೇಳೆ ತಮಗೆ ಸಲಹೆ ನೀಡಿದ ಕನ್ನಡಿಗ ರಾಹುಲ್ ದ್ರಾವಿಡ್ ಅವರ ಬಗ್ಗೆ ಮಹತ್ವದ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.
37 ವರ್ಷದ ವಿರಾಟ್ ಕೊಹ್ಲಿ ಅವರು ತಮ್ಮ ವೃತ್ತಿಜೀವನದ ಕೆಲವು ಹಂತಗಳಲ್ಲಿ ಅನುಭವಿಸಿದ ತಮ್ಮ ಸಾಮರ್ಥ್ಯದ ಬಗ್ಗೆ ತಾವೇ ಅನುಮಾನ ಪಡುವುದರ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಇಂತಹ ಮಾನಸಿಕ ಸವಾಲುಗಳನ್ನು ಎದುರಿಸಲು ಮತ್ತು ಅವುಗಳಿಂದ ಹೊರಬರುವಲ್ಲಿ ಕಾರಣರಾದ ಭಾರತ ತಂಡದ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ದ್ರಾವಿಡ್, ರಾಥೋಡ್ಗೆ ಕೊಹ್ಲಿ ಕೃತಜ್ಞತೆ
ಮಾಜಿ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಹಾಗೂ ರಾಹುಲ್ ದ್ರಾವಿಡ್ ತಮ್ಮನ್ನು ನಿಜವಾಗಿಯೂ ತುಂಬಾ ಕಾಳಜಿಯಿಂದ ನಡೆಸಿಕೊಂಡರು ಎಂದು ವಿರಾಟ್ ಕೊಹ್ಲಿ ಅವರು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಪ್ರತಿ ಬಾರಿ ಅವರನ್ನು ಭೇಟಿಯಾದಾಗಲೂ ಕೃತಜ್ಞತೆ ಸಲ್ಲಿಸುತ್ತೇನೆ ಅಂಯತಲೂ ತಿಳಿಸಿದ್ದಾರೆ
ಆರ್ಸಿಬಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ ಅವರು ಮೈದಾನಕ್ಕೆ ಇಳಿಯುವಾಗ ತಾವು ಅನುಭವಿಸುತ್ತಿದ್ದ ಎಚ್ಚರಿಕೆ ಮತ್ತು ಅಭದ್ರತೆಯ ಭಾವನೆಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. "ಆಟಗಾರರಾಗಿ ನಾವು ಯಾವಾಗಲೂ ಜಾಗರೂಕತೆಯಿಂದ ಇರುವುದು ಮತ್ತು ಅಭದ್ರತೆಯ ಭಾವನೆಗೆ ಒಳಗಾಗುವುದರ ನಡುವಿನ ಒಂದು ಅತಿ ಸೂಕ್ಷ್ಮ ಗೆರೆಯ ಮೇಲೆ ನಡೆಯುತ್ತಿರುತ್ತೇವೆ," ಎಂದು ಹೇಳಿಕೊಂಡಿದ್ದಾರೆ.
ಕಷ್ಟದ ಸಮಯದಲ್ಲಿ ಕೊಹ್ಲಿ ಬೆನ್ನಿಗೆ ನಿಂತ ದ್ರಾವಿಡ್
ನಾಯಕತ್ವದ ನಂತರದ ಹಂತದಲ್ಲಿ ತಾವು ತಮ್ಮ ಸಾಮರ್ಥ್ಯದ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದಾಗಿ ಕೊಹ್ಲಿ ಹೇಳಿಕೊಂಡಿದ್ದಾರೆ. "ಸುಮಾರು ಎರಡು ದಶಕಗಳ ಕಾಲ ಉನ್ನತ ಮಟ್ಟದ ಕ್ರಿಕೆಟ್ ಆಡಿದ್ದರೂ ಸಹ ತಾವು ಅಂದುಕೊಂಡಷ್ಟು ಸಮರ್ಥರಲ್ಲ ಎಂಬುದು ಎಲ್ಲಿ ಜಗತ್ತಿಗೆ ತಿಳಿದುಹೋಗುತ್ತದೋ ಎಂಬ ಭಯ ಕಾಡುತ್ತಿತ್ತು. ಆ ಸಮಯದಲ್ಲಿ ರಾಹುಲ್ ದ್ರಾವಿಡ್ ಮತ್ತು ರಾಥೋರ್ ಇಬ್ಬರೂ ನನಗೆ ತುಂಬಾ ಧೈರ್ಯ ತುಂಬಿ ಬೆಂಬಲವಾಗಿ ನಿಂತರು," ಎಂದು ಹೇಳಿದ್ದಾರೆ.
"ರಾಹುಲ್ ಭಾಯ್ ಅವರು ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡರು. ಏಕೆಂದರೆ ಅವರು ಸ್ವತಃ ಉನ್ನತ ಮಟ್ಟದ ಕ್ರಿಕೆಟ್ನಲ್ಲಿ ಈ ಸಮಸ್ಯೆಯನ್ನ ಎದುರಿಸಿದ್ದರು. ವಿಕ್ರಮ್ ಕೂಡ ಹಲವು ವರ್ಷಗಳಿಂದ ಈ ಕ್ಷೇತ್ರದಲ್ಲಿ ಇದ್ದರು. ನಾನು ಏನು ಅನುಭವಿಸುತ್ತಿದ್ದೆ ಎಂಬುದನ್ನು ಅವರು ಅರ್ಥಮಾಡಿಕೊಂಡು ಬೆಂಬಲಕ್ಕೆ ನಿಂತರು. ಇದು ನಾನು ಮತ್ತೆ ಕ್ರಿಕೆಟ್ ಅನ್ನು ಆನಂದಿಸಲು ಸಾಧ್ಯವಾಗುವಂತಹ ಮಾನಸಿಕ ಸ್ಥಿತಿಗೆ ಬರಲು ಸಹಾಯ ಮಾಡಿತು," ಎಂದು ವಿರಾಟ್ ಕೊಹ್ಲಿ ಅವರು ಹೇಳಿದರು.
ರಾಹುಲ್ ದ್ರಾವಿಡ್, ರಾಥೋಡ್ ಅವರು ತೋರಿದ ಕಾಳಜಿ ಮತ್ತು ಪ್ರೋತ್ಸಾಹದಿಂದ ತಮಗೆ ಕಠಿಣ ಪರಿಶ್ರಮ, ಕ್ರಿಕೆಟ್ ಮೇಲಿದ್ದ ಹಸಿವು ಮತ್ತೆ ಚಿಗುರೊಡೆಯಿತು. ತಮ್ಮ ಟೆಸ್ಟ್ ವೃತ್ತಿಜೀವನದ ಆ ಹಂತವು ಸ್ಮರಣೀಯವಾಗಲು ಸಹಾಯ ಮಾಡಿದ ಇಬ್ಬರಿಗೂ ಕೃತಜ್ಞರಾಗಿದ್ದೇನೆ. ನಾನು ಅವರನ್ನು ಭೇಟಿಯಾದಾಗಲೆಲ್ಲಾ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು. ಒಟ್ಟಿನಲ್ಲಿ ವಿರಾಟ್ ಕೊಹ್ಲಿ ಅವರು ತಮ್ಮ ನೋವಿನ ಸಮಯದಲ್ಲಿ ಜೊತೆಗೆ ನಿಂತು ಧೈರ್ಯ ತುಂಬಿದ ರಾಹುಲ್ ದ್ರಾವಿಡ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಹತ್ತಿ ಏಣಿಯನ್ನ ಒದೆಯುವುದಿಲ್ಲ ಎನ್ನುವುದಕ್ಕೆ ವಿರಾಟ್ ಕೊಹ್ಲಿ ಅವರ ಈ ನಡೆಯೇ ಪ್ರಮುಖ ಸಾಕ್ಷಿಯಾಗಿದೆ ಅಂದ್ರೆ ತಪ್ಪಾಗಲಾರದು. ಇನ್ನೂ ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ನೆಟ್ಟಿಗರು ಸಹ "ವಿರಾಟ್ ಕೊಹ್ಲಿ ಅವರು ಹತ್ತಿದ ಏಣಿಯನ್ನು ಒದೆಯುವ ವ್ಯಕ್ತಿಯಲ್ಲ," ಎಂದು ಹೇಳಿದ್ದಾರೆ.












Click it and Unblock the Notifications