ಶ್ರೀಲಂಕಾದಲ್ಲಿ ನಡೆದ ಈ ಘಟನೆ ಬಳಿಕ ವೈಭವ್ ಸೂರ್ಯವಂಶಿಗೆ ಜೂನಿಯರ್ ಕೊಹ್ಲಿ ಎಂದು ಕರೆದ ನೆಟ್ಟಿಗರು
Vaibhav Sooryavanshi: ದಾಂಬುಲಾದಲ್ಲಿ ಸೋಮವಾರ (ಜೂನ್ 15) ನಡೆದ ತ್ರಿಕೋನ ಸರಣಿಯ ರೋಮಾಂಚನಕಾರಿ ಪಂದ್ಯದ ಸೂಪರ್ ಓವರ್ನಲ್ಲಿ ಶ್ರೀಲಂಕಾ 'ಎ' ತಂಡವು ಭಾರತ 'ಎ' ತಂಡವನ್ನು ಸೋಲಿಸಿತು. ಪಂದ್ಯದ ಮುಕ್ತಾಯದ ನಂತರ 15 ವರ್ಷದ ಯುವ ಸ್ಟಾರ್ ಬ್ಯಾಟರ್ ವೈಭವ್ ಸೂರ್ಯವಂಶಿ ಮತ್ತು ಶ್ರೀಲಂಕಾದ ವಿಷೇನ್ ಹಲಂಬಾಗೆ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಈ ವೇಳೆ ಆಕ್ರೋಶಗೊಂಡ ವೈಭವ್ ಹಲಂಬಾಗೆ ಅವರನ್ನು ಜೋರಾಗಿ ತಳ್ಳಿದರು. ತಕ್ಷಣವೇ ಮಧ್ಯಪ್ರವೇಶಿಸಿದ ಶ್ರೀಲಂಕಾದ ವಿಕೆಟ್ ಕೀಪರ್ ನಿರೋಷನ್ ಡಿಕ್ವೆಲ್ಲಾ ಪರಿಸ್ಥಿತಿಯನ್ನು ತಿಳಿಗೊಳಿಸಿ ಜಗಳವನ್ನು ಶಾಂತಗೊಳಿಸಿದರು. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ದಂಬುಲ್ಲಾದಲ್ಲಿ ಸೋಮವಾರ ನಡೆದ ತ್ರಿಕೋನ ಸರಣಿಯ ಪಂದ್ಯದಲ್ಲಿ ಭಾರತ 'ಎ' ಮತ್ತು ಶ್ರೀಲಂಕಾ 'ಎ' ತಂಡಗಳು ಮುಖಾಮುಖಿಯಾಗಿದ್ದವು. ಪಂದ್ಯವು ಅತ್ಯಂತ ರೋಚಕ ಹಂತ ತಲುಪಿ ಟೈ ಆಯಿತು. ಆರಂಭದಲ್ಲಿ ಪಂದ್ಯ ಮುಕ್ತಾಯಗೊಂಡಿದೆ ಎಂದೇ ಭಾವಿಸಲಾಗಿತ್ತು. ಹೀಗಾಗಿ ಭಾರತ 'ಎ' ತಂಡದ ನಾಯಕ ತಿಲಕ್ ವರ್ಮಾ ಅಂಪೈರ್ಗಳೊಂದಿಗೆ ಸುಮಾರು 10 ನಿಮಿಷಗಳ ಕಾಲ ಸುದೀರ್ಘ ಚರ್ಚೆ ನಡೆಸಿದರು. ಅಂತಿಮವಾಗಿ ಅಂಪೈರ್ಗಳು ಸೂಪರ್ ಓವರ್ಗೆ ಅನುಮತಿ ನೀಡಿದರು.

ಶ್ರೀಲಂಕಾ ವಿರುದ್ಧ ಭಾರತ ಸೋಲು
ಸೂಪರ್ ಓವರ್ನಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 'ಎ' ತಂಡ ಭಾರತಕ್ಕೆ ಗೆಲ್ಲಲು 17 ರನ್ಗಳ ಗುರಿ ನೀಡಿತು. ಈ ಕಠಿಣ ಗುರಿಯನ್ನು ಬೆನ್ನಟ್ಟಿದ ಭಾರತದ ಪರ ವೈಭವ್ ಸೂರ್ಯವಂಶಿ ಮತ್ತು ಸೂರ್ಯಂಶ್ ಶೆಡ್ಗೆ ಕಣಕ್ಕಿಳಿದರು. ಶ್ರೀಲಂಕಾದ ವೇಗಿ ಕಗುತಾಸ್ ಮಥುಲನ್ ಎಸೆದ ಕೊನೆಯ ಮೂರು ಎಸೆತಗಳನ್ನು ವೈಭವ್ ಎದುರಿಸಿದರು. ಆದರೆ ಅವರಿಂದ ಒಂದು ಬೌಂಡರಿ ಸೇರಿದಂತೆ ಕೇವಲ 6 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಅಂತಿಮವಾಗಿ ಭಾರತ 'ಎ' ತಂಡ ಸೂಪರ್ ಓವರ್ನಲ್ಲಿ ಕೇವಲ 9 ರನ್ ಗಳಿಸಿ ಪಂದ್ಯದಲ್ಲಿ ಸೋಲೊಪ್ಪಿಕೊಂಡಿತು. ಇದು ಭಾರತಕ್ಕೆ ಸರಣಿಯಲ್ಲಿ ಎದುರಾದ ಸತತ ಎರಡನೇ ಸೋಲಾಗಿದೆ.
ಗಲಾಟೆಗೆ ಕಾರಣ ಏನು?
ಭಾರತ ಸೋತ ತಕ್ಷಣ ಶ್ರೀಲಂಕಾ 'ಎ' ತಂಡದ ಆಟಗಾರರು ಮಿತಿ ಮೀರಿದ ಸಂಭ್ರಮಾಚರಣೆಯಲ್ಲಿ ತೊಡಗಿದರು. ಈ ವೇಳೆ ಭಾರತದ ಬ್ಯಾಟರ್ಗಳಾದ ವೈಭವ್ ಸೂರ್ಯವಂಶಿ ಮತ್ತು ಸೂರ್ಯಂಶ್ ಶೆಡ್ಗೆ ನಿರಾಶೆಯಿಂದ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕುತ್ತಿದ್ದರು. ಆದರೆ ವೈರಲ್ ಆಗಿರುವ ವಿಡಿಯೋ ಪುರಾವೆಗಳ ಪ್ರಕಾರ, ಶ್ರೀಲಂಕಾದ ಜೆರ್ಸಿ ನಂಬರ್ 76 ಮತ್ತು ಜೆರ್ಸಿ ನಂಬರ್ 5 ಧರಿಸಿದ್ದ ಇಬ್ಬರು ಆಟಗಾರರು ಪೆವಿಲಿಯನ್ ಕಡೆಗೆ ಹೋಗುತ್ತಿದ್ದ ವೈಭವ್ ಮತ್ತು ಸೂರ್ಯಂಶ್ ಅವರನ್ನು ಗುರಿಯಾಗಿಸಿಕೊಂಡು ಏನೋ ಪ್ರಚೋದನಾಕಾರಿ ಮಾತುಗಳನ್ನು ಆಡಿದರು.
ಬೌಲರ್ ಮಥುಲನ್ ಕೊನೆಯ ಮೂರು ಎಸೆತಗಳಲ್ಲಿ ವೈಭವ್ ಅವರನ್ನು ಯಶಸ್ವಿಯಾಗಿ ನಿಯಂತ್ರಿಸಿದ್ದರಿಂದ, ಅವರ ಕಡೆಯಿಂದಲೇ ಈ ಪ್ರಚೋದನೆ ಆರಂಭವಾಗಿರಬಹುದು ಎಂದು ಹೇಳಲಾಗಿದೆ. ಶ್ರೀಲಂಕಾ ಆಟಗಾರನ ಮಾತು ಕೇಳಿ ಸೂರ್ಯಂಶ್ ಶೆಡ್ಗೆ ತಕ್ಷಣ ಹಿಂದೆ ತಿರುಗಿ ನೋಡಿದರು.
ಕೈಕೈ ಮಿಲಾಯಿಸುವ ಹಂತ ತಲುಪಿದ ಜಗಳ
ಶ್ರೀಲಂಕಾ ಆಟಗಾರರ ಈ ವರ್ತನೆಯಿಂದ ತೀವ್ರ ಆಕ್ರೋಶಗೊಂಡ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರು ನೇರವಾಗಿ ಬೌಲರ್ ಮಥುಲನ್ ಕಡೆಗೆ ನಡೆದರು. ಈ ವೇಳೆ ಶ್ರೀಲಂಕಾದ ಮತ್ತೊಬ್ಬ ಆಟಗಾರ ವಿಷೇನ್ ಹಲಂಬಾಗೆ ಮಧ್ಯಪ್ರವೇಶಿಸಲು ಯತ್ನಿಸಿದರು. ಆದರೆ ಕೋಪ ನಿಯಂತ್ರಿಸಲಾಗದ ವೈಭವ್ ತಮಗೆ ಪ್ರಚೋದನೆ ನೀಡಿದ ಶ್ರೀಲಂಕಾ ಫೀಲ್ಡರ್ (ಜರ್ಸಿ ನಂಬರ್ 76) ಅನ್ನು ಜೋರಾಗಿ ತಳ್ಳಿದರು. ಇದಕ್ಕೆ ಪ್ರತಿಯಾಗಿ ಆ ಫೀಲ್ಡರ್ ಕೂಡ ವೈಭವ್ ಅವರತ್ತ ನುಗ್ಗಿ ಜಗಳಕ್ಕೆ ನಿಂತರು. ಪರಿಸ್ಥಿತಿ ಕೈಮೀರಿ ದೈಹಿಕ ಸಂಘರ್ಷಕ್ಕೆ ತಿರುಗುವ ಎಲ್ಲಾ ಲಕ್ಷಣಗಳಿದ್ದವು.
ಹಿರಿಯ ಆಟಗಾರರ ಮಧ್ಯಪ್ರವೇಶ
ಈ ಪರಿಸ್ಥಿತಿ ತೀರಾ ಗಂಭೀರವಾಗುತ್ತಿದ್ದಂತೆ ಶ್ರೀಲಂಕಾದ ಹಿರಿಯ ಅಂತಾರಾಷ್ಟ್ರೀಯ ಆಟಗಾರ ನಿರೋಷನ್ ಡಿಕ್ವೆಲ್ಲಾ ತಕ್ಷಣ ಓಡಿ ಬಂದು ಇಬ್ಬರ ಮಧ್ಯೆ ಪ್ರೇವಶ ಮಾಡಿದರು. ವೈಭವ್ ಸೂರ್ಯವಂಶಿ ಅವರನ್ನು ಸಮಾಧಾನಪಡಿಸಿ ಜಗಳ ಮುಂದೆವರಿಯದಂತೆ ತಡೆದರು. ಇದಕ್ಕೂ ಮುನ್ನ ಪಂದ್ಯದ ವೇಳೆ ಅಂಪೈರ್ ಹಾಗೂ ತಿಲಕ್ ವರ್ಮಾ ನಡುವೆ ಚರ್ಚೆ ನಡೆಯುತ್ತಿದ್ದಾಗಲೂ ವೈಭವ್ ಸಿಟ್ಟಿನಿಂದ ಅಲ್ಲಿಗೆ ಧಾವಿಸಿದ್ದರು. ಆಗ ಭಾರತ ತಂಡದ ಮುಖ್ಯ ಕೋಚ್ ಹೃಷಿಕೇಶ್ ಕಾನಿಟ್ಕರ್ ಅವರು ವೈಭವ್ ಅವರನ್ನು ಹಿಂದಕ್ಕೆ ಎಳೆದು ಸಮಾಧಾನಪಡಿಸಿದ್ದರು.
ವೈಭವ್ ಸೂರ್ಯವಂಶಿ ಇತ್ತೀಚೆಗಷ್ಟೇ ಭಾರತದ ಸೀನಿಯರ್ ಟಿ20 ತಂಡಕ್ಕೆ (ಐರ್ಲೆಂಡ್ ಪ್ರವಾಸಕ್ಕೆ) ಆಯ್ಕೆಯಾದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದರೆ ಈ ಪಂದ್ಯದ ಸೋಲು ಮತ್ತು ಮೈದಾನದ ಘಟನೆಗಳು ಅವರಿಗೆ ಕಹಿ ನೆನಪನ್ನು ನೀಡಿವೆ. ಮೈದಾನದಲ್ಲಿ ಶಿಸ್ತು ಉಲ್ಲಂಘಿಸಿದ ಈ ಆಟಗಾರರ ವಿರುದ್ಧ ಮ್ಯಾಚ್ ರೆಫ್ರಿ ಪ್ರದೀಪ್ ಜಯಪ್ರಕಾಶ್ ಅವರು ಅಧಿಕೃತ ಶಿಸ್ತು ಕ್ರಮ ಅಥವಾ ದಂಡ ವಿಧಿಸಿದ್ದಾರಾ ಅಥವಾ ಕೇವಲ ಎಚ್ಚರಿಕೆ ನೀಡಿ ಬಿಟ್ಟಿದ್ದಾರಾ ಎನ್ನುವ ಮಾಹಿತಿ ತಿಳಿದುಬರಬೇಕಿದೆ.












Click it and Unblock the Notifications