ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಮಾನ್ಯತೆ ರದ್ದು ಪಡಿಸುವ ಕ್ರಮಕ್ಕೆ ಹೈಕೋರ್ಟ್ ಮಧ್ಯಂತರ ಆದೇಶ
ಬೆಂಗಳೂರು, ಜುಲೈ 22: ನಿಯಮಗಳ ತಿದ್ದುಪಡಿಗೆ ನೀಡಿದ್ದ ಅವಧಿ ಮೀರಿದ ಕಾರಣ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ(ಕೆಬಿಎ)ಯ ಮಾನ್ಯತೆಯನ್ನು ರದ್ದುಗೊಳಿಸುವ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ(ಬಿಎಐ)ಯ ಪ್ರಕ್ರಿಯೆಗೆ ಕರ್ನಾಟಕ ಹೈಕೋರ್ಟ್ ತಡೆ ನೀಡುವಂತೆ ಮಧ್ಯಂತರ ಆದೇಶ ನೀಡಿದೆ.
ಕೆಬಿಎ ನಿಯಮಗಳಲ್ಲಿ ಕೆಲ ತಿದ್ದುಪಡಿ ಮಾಡಲು ಮಾರ್ಚ್ ತಿಂಗಳಲ್ಲಿ ಸೂಚಿಸಿ 4 ತಿಂಗಳ ಅವಧಿ ನೀಡಲಾಗಿತ್ತು. ಆದರೆ ಇದರ ಬದಲಾಗಿ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಹೆಸರಲ್ಲೇ ಮತ್ತೊಂದು ಸಂಸ್ಥೆ ರಚಿಸುವುದಾಗಿ ಕೆಬಿಎ ತಿಳಿಸಿದೆ. ಇದು ಬಿಎಐ ನಿಯಮಗಳಿಗೆ ವಿರುದ್ಧವಾಗಿದ್ದರಿಂದ ಕೆಬಿಎ ಮಾನ್ಯತೆಯನ್ನು ರದ್ದುಗೊಳಿಸಲಾಗಿದೆ. ಮತ್ತೊಮ್ಮೆ ಅರ್ಜಿ ಸಲ್ಲಿಸಿ ಮಾನ್ಯತೆ ನವೀಕರಿಸಬಹುದು ಎಂದು ಬಿಎಐ ಸೂಚನೆ ನೀಡಿತ್ತು. ಇದನ್ನು ಪ್ರಶ್ನಿಸಿ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು.
ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆಯ ನಿರ್ಧಾರವನ್ನು ಪ್ರಶ್ನಿಸಿ ಕೆಬಿಎ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ವಿಚಾರಣೆ ನಡೆಸಿದರು. ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಪರ ವಕೀಲರು, "ಅರ್ಜಿದಾರರನ್ನು ಸಂಬಂಧವಿಲ್ಲದಂತೆ ಹೊರಡಿಸಿದ ಪತ್ರವು ನೈಸರ್ಗಿಕ ನ್ಯಾಯದ ತತ್ವಗಳನ್ನು ಉಲ್ಲಂಘಿಸುತ್ತದೆ ಮತ್ತು ಮಾನ್ಯತೆ ರದ್ದುಗೊಳಿಸಲು ಯಾವುದೇ ನೋಟಿಸ್ ನೀಡಿಲ್ಲ" ಎಂದು ತಿಳಿಸಿದರು.

ಇದಕ್ಕೆ ಪ್ರತಿವಾದ ಮಂಡಿಸಿದ ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರತಿವಾದಿಗಳ ಪರ ವಕೀಲರು, "ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಭಾರತದ ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ, 2011 ರ ಪ್ರಕಾರ ಬೈಲಾಗಳನ್ನು ತಿದ್ದುಪಡಿ ಮಾಡಿಲ್ಲ" ಎಂದು ವಾದಿಸಿದರು.
"ಆಕ್ಷೇಪಾರ್ಹ ಪತ್ರವನ್ನು ಪರಿಶೀಲಿಸಿದಾಗ ಅದು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅನ್ನು ಮಾನ್ಯತೆ ರದ್ದುಗೊಳಿಸುವ ಮೊದಲು ಯಾವುದೇ ಸೂಚನೆ ನೀಡಿರುವುದು ಕಂಡುಬಂದಿಲ್ಲ, ಅಥವಾ ಬಹಿರಂಗಪಡಿಸುವುದಿಲ್ಲ" ಎಂದು ಹೈಕೋರ್ಟ್ ಹೇಳಿದೆ.

ವಿಷಯವು ಪರಿಗಣನೆಗೆ ಅಗತ್ಯವಾಗಿದೆ. ಆದ್ದರಿಂದ ಅದು ಸದರಿ ರದ್ದುಗೊಳಿಸುವ ನಿರ್ಧಾರಕ್ಕೆ ತಡೆ ನೀಡಿತು. ಪ್ರತಿವಾದಿಗಳಿಗೆ ಆಕ್ಷೇಪಣೆಗಳ ಹೇಳಿಕೆಯನ್ನು ಸಲ್ಲಿಸಲು ಎರಡು ವಾರಗಳ ಕಾಲಾವಕಾಶವನ್ನು ನೀಡಿದೆ. ಭಾರತ ಸರ್ಕಾರ, ಕರ್ನಾಟಕ ಸರ್ಕಾರ, ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ ಮತ್ತು ಕರ್ನಾಟಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ತುರ್ತು ನೋಟಿಸ್ ನೀಡಲಾಯಿತು. ಮುಂದಿನ ವಿಚಾರಣೆಯನ್ನು ಸೆಪ್ಟಂಬರ್ 22ಕ್ಕೆ ಮುಂದೂಡಲಾಗಿದೆ.












Click it and Unblock the Notifications