Suryakumar yadav: ನಿಜವಾಯ್ತು ಕಾಪು ಮಾರಿಯಮ್ಮ ಅರ್ಚಕರ ಮಾತು! ನಾಯಕನಾದ ಸೂರ್ಯಕುಮಾರ್ ಯಾದವ್ ಹೇಳಿದ್ದೇನು?
ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅದ್ಭುತ ಕ್ಯಾಚ್ ಹಿಡಿದು ಭಾರತ ಕ್ರಿಕೆಟ್ ಅಭಿಮಾನಿಗಳ ಪಾಲಿನ ಹೀರೋ ಆಗಿರುವ ಸೂರ್ಯಕುಮಾರ್ ಯಾದವ್ಗೆ ಹೊಸ ಜವಾಬ್ದಾರಿ ಸಿಕ್ಕಿದೆ. ಅವರೀಗ ಭಾರತ ಟಿ20 ತಂಡದ ನಾಯಕರಾಗಿದ್ದು, ಶ್ರೀಲಂಕಾ ವಿರುದ್ಧ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.
ವಿಶೇಷ ಎಂದರೆ ಟಿ20 ವಿಶ್ವಕಪ್ ಗೆದ್ದ ಬಳಿಕ ಸೂರ್ಯಕುಮಾರ್ ಯಾದವ್ ಪತ್ನಿ ದೇವಿಶಾ ಶೆಟ್ಟಿ ಜೊತೆ ಉಡುಪಿ ಜಿಲ್ಲೆಯ ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮಾರಿಯಮ್ಮ ಅರ್ಚಕರು ಮುಂದಿನ ಬಾರಿ ಬರುವಾಗ ಭಾರತ ತಂಡದ ನಾಯಕರಾಗಿ ಬನ್ನಿ ಎಂದಿದ್ದರು, ಅಚ್ಚರಿ ಎನ್ನುವಂತೆ ಅರ್ಚಕರು ಹೀಗೆ ಹೇಳಿದ ಕೆಲವೇ ದಿನಗಳಲ್ಲಿ ಸೂರ್ಯಕುಮಾರ್ ಯಾದವ್ ಭಾರತ ಟಿ20 ತಂಡದ ನಾಯಕರಾಗಿದ್ದಾರೆ.

ಸಮಯ ಸಿಕ್ಕಾಗ ಮತ್ತೆ ಬರುವುದಾಗಿ ಸೂರ್ಯಕುಮಾರ್ ಯಾದವ್ ದಂಪತಿ ಹೇಳಿದ್ದರು. ಪತ್ನಿ ದೇವಿಶಾ ಶೆಟ್ಟಿ ಕುಟುಂಬಕ್ಕೆ ಕಾಪು ಮಾರಿಯಮ್ಮನ ಮೇಲೆ ಅಪಾರ ನಂಬಿಕೆ, ಅವರ ಪ್ರಾರ್ಥನೆ ಈಗ ಫಲ ನೀಡಿದ್ದು, ನಾಯಕನಾಗಿ ಮಿಂಚಲು ಸೂರ್ಯ ಸಜ್ಜಾಗಿದ್ದಾರೆ.
ಸೂರ್ಯಕುಮಾರ್ ಯಾದವ್ ಪ್ರತಿಕ್ರಿಯೆ
ನಾಯಕನಾದ ಬಳಿಕ ಸೂರ್ಯಕುಮಾರ್ ಯಾದವ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಖುಷಿ ಹಂಚಿಕೊಂಡಿರುವ ಅವರು, ಜವಾಬ್ದಾರಿಯನ್ನು ನಿಭಾಯಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ವಾರಗಳಿಂದ ಎಲ್ಲವೂ ಕನಸಿನಂತೆ ಭಾಸವಾಗುತ್ತಿದೆ ಎಂದ ಅವರು, ನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಮತ್ತು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬೆಂಬಲವನ್ನು ಪಡೆದಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.
"ನಿಮ್ಮ ಪ್ರೀತಿ, ಬೆಂಬಲ ಮತ್ತು ಶುಭ ಹಾರೈಕೆಗಳಿಗಾಗಿ ತುಂಬಾ ಧನ್ಯವಾದಗಳು. ಕಳೆದ ಕೆಲವು ವಾರಗಳು ಕನಸಿಗೆ ಕಡಿಮೆಯಿಲ್ಲ ಮತ್ತು ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ" ಎಂದು ಸೂರ್ಯಕುಮಾರ್ ಬರೆದುಕೊಂಡಿದ್ದಾರೆ.
ದೇಶಕ್ಕಾಗಿ ಆಡುವುದು ಅತ್ಯಂತ ವಿಶೇಷವಾದ ಭಾವನೆಯಾಗಿದ್ದು ಅದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ನಾಯಕತ್ವವು ಬಹಳಷ್ಟು ಜವಾಬ್ದಾರಿ, ಉತ್ಸಾಹ ಮತ್ತು ಉತ್ಸಾಹವನ್ನು ತರುತ್ತದೆ. ನಾನು ನಿಮ್ಮ ಬೆಂಬಲ ಮತ್ತು ಆಶೀರ್ವಾದವನ್ನು ಪಡೆಯುತ್ತಲೇ ಇರುತ್ತೇನೆ ಎಂದು ಭಾವಿಸುತ್ತೇನೆ. ದೇವರು ದೊಡ್ಡವನು ಎಂದು ಸೂರ್ಯಕುಮಾರ್ ಹೇಳಿದ್ದಾರೆ.
ಜುಲೈ 27ರಿಂದ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಶುರುವಾಗಲಿದ್ದ, ಗೌತಮ್ ಗಂಭಿರ್ ಮುಖ್ಯ ಕೋಚ್ ಆಗಿ ಇದು ಮೊದಲ ಸರಣಿಯಾಗಿದೆ.












Click it and Unblock the Notifications