RCB: ವಿರಾಟ್ ಕೊಹ್ಲಿ ಅಲ್ಲ ಈತ ಆರ್ಸಿಬಿ ನಾಯಕನಾಗಬೇಕು ಎಂದ ರಾಬಿನ್ ಉತ್ತಪ್ಪ
ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) 2025ರ ಆವೃತ್ತಿಗಾಗಿ ಮೆಗಾ ಹರಾಜು ಮುಕ್ತಾಯವಾಗಿದ್ದು ಎಲ್ಲಾ ಫ್ರಾಂಚೈಸಿಗಳು ಬಲಿಷ್ಠ ತಂಡವನ್ನು ಕಟ್ಟಿವೆ. ಹಲವು ಫ್ರಾಂಚೈಸಿಗಳು ತಮ್ಮ ತಂಡಕ್ಕೆ ಹೊಸ ನಾಯಕನ ಆಯ್ಕೆ ಮಾಡಲು ಸಜ್ಜಾಗಿವೆ. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕೆಎಲ್ ರಾಹುಲ್, ಪಂಜಾಬ್ ಕಿಂಗ್ಸ್ ತಂಡಕ್ಕೆ ಶ್ರೇಯಸ್ ಅಯ್ಯರ್ ಮತ್ತು ರಿಷಬ್ ಪಂತ್ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ನಾಯಕರಾಗುವುದು ಬಹುತೇಕ ಖಚಿತವಾಗಿದೆ.
ಕಳೆದ ವರ್ಷ ಚಾಂಪಿಯನ್ ಆಗಿದ್ದ ಕೆಕೆಆರ್ ತಂಡಕ್ಕೆ ಶ್ರೇಯಸ್ ಅಯ್ಯರ್ ನಾಯಕರಾಗಿದ್ದರು, ಆದರೆ ನಾಯಕನನ್ನೇ ತಂಡವು ಕೈಬಿಟ್ಟಿದ್ದು ಹೊಸ ನಾಯಕ ಯಾರು ಎನ್ನುವ ಕುತೂಹಲ ಇದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಕೂಡ ನಾಯಕ ಫಾಫ್ ಡುಪ್ಲೆಸಿಸ್ರನ್ನು ಕೈಬಿಟ್ಟಿದ್ದು, ಈ ಬಾರಿ ಬೇರೆ ನಾಯಕನ ಆಯ್ಕೆ ಮಾಡಲಿದೆ.

ನಾಯಕತ್ವ ಸ್ಥಾನಕ್ಕಾಗಿ ಕೆಎಲ್ ರಾಹುಲ್ರನ್ನು ಖರೀದಿ ಮಾಡುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು ಆದರೆ ಆರ್ ಸಿಬಿ ನಿರೀಕ್ಷೆಗಳನ್ನು ಸುಳ್ಳಾಗಿಸಿದೆ. ಈ ಬಾರಿ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಮತ್ತೆ ಆರ್ ಸಿಬಿ ನಾಯಕರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ರವಿಚಂದ್ರನ್ ಅಶ್ವಿನ್ ಕೂಡ 2025ರ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಮತ್ತೆ ಆರ್ ಸಿಬಿ ನಾಯಕನಾಗಬಹುದು ಎಂದು ಅಂದಾಜಿಸಿದ್ದಾರೆ. ಆದರೆ ಕರ್ನಾಟಕದವರೇ ಆದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಮಾತ್ರ ಬೇರೆ ಸಲಹೆ ನೀಡಿದ್ದಾರೆ.
ರಜತ್ ಪಟಿದಾರ್ ನಾಯಕನಾಗಲಿ
ತಮ್ಮ ಯೂಟ್ಯೂಬ್ ಚಾನಲ್ನಲ್ಲಿ ಮಾತನಾಡಿರುವ ರಾಬಿನ್ ಉತ್ತಪ್ಪ, ಈ ಬಾರಿ ಆರ್ ಸಿಬಿ ತಂಡ ಉತ್ತಮವಾಗಿದೆ, ಕಳೆದ ಕೆಲವು ವರ್ಷಗಳಿಂದ ಮಾಡುತ್ತಿದ್ದ ತಪ್ಪನ್ನು ಸರಿಮಾಡಿಕೊಳ್ಳಲು ಪ್ರಯತ್ನಿಸಲಾಗಿದೆ ಎಂದು ಹೇಳಿದರು. ಬೌಲಿಂಗ್ ವಿಭಾಗದಲ್ಲಿ ಸಮಸ್ಯೆಯನ್ನು ಸರಿಪಡಿಸಲು ಫ್ರಾಂಚೈಸಿ ಪ್ರಯತ್ನಿಸಿದ್ದು ಭುವನೇಶ್ವರ್ ಕುಮಾರ್ ಅತ್ಯುತ್ತಮ ಆಯ್ಕೆ ಎಂದಿದ್ದಾರೆ.
ತಂಡದಲ್ಲಿ ಈ ಬಾರಿ ಹೆಚ್ಚಿನ ಬೌಲಿಂಗ್ ಆಯ್ಕೆಗಳಿದ್ದು ಚಿನ್ನಸ್ವಾಮಿಯಲ್ಲಿ ಹೆಚ್ಚಿನ ಪಂದ್ಯಗಳಲ್ಲಿ ಗೆಲ್ಲುವ ಅವಕಾಶವಿದೆ ಎಂದು ಹೇಳಿದ್ದಾರೆ. ಲಿವಿಂಗಸ್ಟೋನ್, ಕೃನಾಲ್ ಪಾಂಡ್ಯ ಕೂಡ ಬೌಲಿಂಗ್ ಮಾಡಲಿದ್ದು, ಮಧ್ಯಮ ಓವರ್ ಗಳಲ್ಲಿ ಬೌಲಿಂಗ್ ಮಾಡಬಹುದು. ಜೋಶ್ ಹೇಜಲ್ವುಡ್ ಮತ್ತು ನುವಾನ್ ತುಷಾರ ಇಬ್ಬರೂ ಆಡಬೇಕು ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ನಾಯಕರಾಗುತ್ತಾರೆ ಎಂದು ಹೇಳಲಾಗುತ್ತಿದೆ, ಆದರೆ ಭವಿಷ್ಯದ ದೃಷ್ಟಿಯಿಂದ ರಜತ್ ಪಟಿದಾರ್ ನಾಯಕನಾಗಬೇಕು ಎಂದು ಹೇಳಿದ್ದಾರೆ. ವಿರಾಟ್ ಕೊಹ್ಲಿ ಮಾರ್ಗದರ್ಶನದಲ್ಲಿ ರಜತ್ ಪಟಿದಾರ್ ನಾಯಕನಾದರೆ ಕೊಹ್ಲಿ ಮೇಲೂ ನಾಯಕತ್ವದ ಒತ್ತಡ ಇರುವುದಿಲ್ಲ, ಮುಂದಿನ 4-5 ವರ್ಷಗಳಿಗೆ ಪಟಿದಾರ್ ನಾಯಕರಾಗಿ ಮುಂದುವರೆಯಬಹುದು ಎಂದು ಹೇಳಿದ್ದಾರೆ.












Click it and Unblock the Notifications