RCB: ಪ್ಲೇಆಫ್ ಸನಿಹದಲ್ಲಿ ಆರ್ಸಿಬಿ; ಮುಂದಿನ ಎದುರಾಳಿ ಯಾರು?
ಭಾರತ ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಒಂದು ವಾರ ಸ್ಥಗಿತಗೊಂಡಿದ್ದ ಐಪಿಎಲ್ ಪಂದ್ಯಾವಳಿ ಮತ್ತೆ ಆರಂಭವಾಗಿದೆ. ಆದರೆ ಮರು ಆರಂಭದ ಮೊದಲ ಪಂದ್ಯವೇ ಮಳೆಯಿಂದ ರದ್ದಾಗಿರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಪ್ಲೇಆಫ್ ಸನಿಹದಲ್ಲಿದ್ದ ಆರ್ ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯ ಮಳೆಯಿಂದ ರದ್ದಾಗಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯ ಭಾರಿ ಮಳೆಯಿಂದಾಗಿ ರದ್ದುಗೊಂಡಿದ್ದು ಎರಡೂ ತಂಡಗಳಿಗೆ ತಲಾ ಒಂದು ಪಾಯಿಂಟ್ ಹಂಚಿಕೆ ಮಾಡಲಾಗಿದೆ. ಈ ಮೂಲಕ 17 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದು ಪ್ಲೇಆಫ್ ಅವಕಾಶ ಮತ್ತಷ್ಟು ಹೆಚ್ಚಾಗಿದೆ.

ಕೆಕೆಆರ್ ವಿರುದ್ಧ ಗೆದ್ದಿದ್ದರೆ ಭಾರತದ ಪ್ಲೇಆಫ್ ಸ್ಥಾನ ಬಹುತೇಕ ಖಚಿತವಾಗಿರುತ್ತಿತ್ತು, ಆದರೆ ಮಳೆಯಿಂದ ಪಂದ್ಯ ರದ್ದಾಗಿದ್ದು ಆರ್ ಸಿಬಿಗೆ ಖುಷಿಯಾಗಿಲ್ಲವಾದರೂ ಬೇಸರವೇನೂ ಆಗಿಲ್ಲ. ಇನ್ನೂ ಆಗ್ರ ಎರಡು ಸ್ಥಾನದಲ್ಲಿ ಪ್ಲೇಆಫ್ ತಲುಪಲು ಆರ್ ಸಿಬಿಗೆ ಅವಕಾಶ ಇರುವುದು ಮುಂದಿನ ಎರಡು ಪಂದ್ಯಗಳನ್ನು ಗೆಲ್ಲುವುದರ ಮೇಲೆ ಗಮನ ಹರಿಸಬೇಕಿದೆ.
ಮುಂದಿನ ಎದುರಾಳಿ ಯಾರು?
ಕೆಕೆಆರ್ ವಿರುದ್ಧದ ಪಂದ್ಯ ರದ್ದಾದ ಬಳಿಕ ಆರ್ ಸಿಬಿ ಮುಂದಿನ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಮೇ 23ರಂದು ಶುಕ್ರವಾರ ಈ ಪಂದ್ಯ ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಈ ಪಂದ್ಯ ನಡೆಯಲಿದ್ದು ಅಂದು ಕೂಡ ಮಳೆ ಅಡ್ಡಿಯಾಗುತ್ತದಾ ಎನ್ನುವ ಆತಂಕ ಅಭಿಮಾನಿಗಳಿಗೆ ಶುರುವಾಗಿದೆ.
ಸನ್ರೈಸರ್ಸ್ ಹೈದರಾಬಾದ್ ಈಗಾಗಲೇ ಪ್ಲೇಆಫ್ ರೇಸ್ನಿಂದ ಹೊರಬಿದ್ದಿದೆ. ನಾಯಕ ಪ್ಯಾಟ್ ಕಮ್ಮಿನ್ಸ್, ಟ್ರಾವಿಸ್ ಹೆಡ್ ಮತ್ತೆ ಮರಳುವ ಬಗ್ಗೆ ಅನುಮಾನವಿದ್ದು ತಂಡಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಮುಂದಿನ ಪಂದ್ಯದ ವೇಳೆಗೆ ಜೋಶ್ ಹೇಜಲ್ವುಡ್ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದ್ದು ತಂಡದ ಬೌಲಿಂಗ್ಗೆ ಮತ್ತಷ್ಟು ಬಲ ಬರಲಿದೆ.
ಸನ್ರೈಸರ್ಸ್ ಹೈದರಾಬಾದ್ ಬಳಿಕ ಮೇ 27 ರಂದು ಮಂಗಳವಾರ ಆರ್ ಸಿಬಿ ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಈಗಾಗಲೇ ತವರಿನ ಹೊರಗೆ ಆಡಿರುವ 6 ಪಂದ್ಯಗಳನ್ನೂ ಗೆದ್ದಿರುವ ಆರ್ ಸಿಬಿ ಲಕ್ನೋ ವಿರುದ್ಧ ಗೆದ್ದರೆ ಒಂದು ಆವೃತ್ತಿಯಲ್ಲಿ ತವರಿನ ಹೊರಗಿನ ಎಲ್ಲಾ ಪಂದ್ಯಗಳನ್ನೂ ಗೆದ್ದ ಮೊದಲ ತಂಡ ಎನ್ನುವ ಸಾಧನೆ ಮಾಡಲಿದೆ.












Click it and Unblock the Notifications