RCB Vs KKR: ಆರ್ಸಿಬಿ ಅದೃಷ್ಟ ಬದಲಾಯಿಸುತ್ತಾ ಹಸಿರು ಜೆರ್ಸಿ?
ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆವೃತ್ತಿಯಲ್ಲಿ ಆಡಿರುವ 7 ಪಂದ್ಯಗಳಲ್ಲಿ ಆರು ಪಂದ್ಯಗಳನ್ನು ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂದಿನ ಪಂದ್ಯದಲ್ಲಿ ಕೆಕೆಆರ್ ತಂಡವನ್ನು ಎದುರಿಸಲು ಸಜ್ಜಾಗುತ್ತಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಭಾನುವಾರ, ಏಪ್ರಿಲ್ 21 ರಂದು ಮಧ್ಯಾಹ್ನ 3.30ಕ್ಕೆ ಪಂದ್ಯ ಆರಂಭವಾಗಲಿದೆ. ಆರ್ಸಿಬಿ ಈ ಪಂದ್ಯದಲ್ಲಿ ಹಸಿರು ಬಣ್ಣದ ಜೆರ್ಸಿಯಲ್ಲಿ ಆಡಲು ಸಜ್ಜಾಗಿದ್ದು, ಜೆರ್ಸಿ ಬದಲಾದ ಮೇಲಾದಾರೂ ಆರ್ಸಿಬಿ ಹಣೆಬರಹ ಬದಲಾಗುತ್ತಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಆರ್ಸಿಬಿ ಪ್ಲೇ ಆಫ್ಗೆ ಅರ್ಹತೆ ಪಡೆಯುವ ಅವಕಾಶ ಇರಬೇಕೆಂದರೆ ಇನ್ನುಳಿದ ಏಳೂ ಪಂದ್ಯಗಳಲ್ಲಿ ಕೂಡ ಗೆಲ್ಲಬೇಕಿದೆ. ಆದರೂ ಪ್ಲೇ ಆಫ್ ತಲುಪುವ ಬಗ್ಗೆ ಗ್ಯಾರಂಟಿ ಇಲ್ಲವಾದರೂ, ಒಂದು ಅವಕಾಶವನ್ನು ನೋಡಬಹುದು.
ತಂಡದಲ್ಲಿ ಬದಲಾವಣೆ?
ಕೋಲ್ಕತ್ತಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರ್ ಸಿಬಿ ತಂಡದಲ್ಲಿ ಒಂದೆರಡು ಬದಲಾವಣೆಗಳನ್ನು ನಿರೀಕ್ಷೆ ಮಾಡಬಹುದು. ಮ್ಯಾಕ್ಸ್ವೆಲ್ ಕೆಕೆಆರ್ ವಿರುದ್ಧ ಕೂಡ ಆಡಲ್ಲ ಎನ್ನಲಾಗಿದ್ದು, ವಿಲ್ ಜ್ಯಾಕ್ಸ್ ಮತ್ತು ಲಾಕಿ ಫರ್ಗ್ಯುಸನ್ ತಂಡದಲ್ಲಿ ಮುಂದುವರೆಯಬಹುದು.
ವೈಶಾಖ್ ಅಥವಾ ಯಶ್ ದಯಾಳ್ ಬದಲಾಗಿ ಮೊಹಮ್ಮದ್ ಸಿರಾಜ್ ಅವರು ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆಯುವ ಅವಕಾಶ ಇದೆ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಬ್ಯಾಟಿಂಗ್ನಲ್ಲಿ ಮಿಂಚಿದ ಆರ್ ಸಿಬಿ, ಬೌಲಿಂಗ್ನಲ್ಲಿ ಸಂಪೂರ್ಣವಾಗಿ ಲಯ ಕಳೆದುಕೊಂಡಿತ್ತು.
ಕೆಕೆಆರ್ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದ್ದು, ಆರ್ ಸಿಬಿ ಬೌಲಿಂಗ್ ಸುಧಾರಣೆ ಕಾಣದಿದ್ದರೆ ಗೆಲುವು ಸಾಧಿಸುವುದು ಕನಸಾಗಲಿದೆ. ಸನ್ರೈಸರ್ಸ್ ಹೈದರಾಬಾದ್ ಪಂದ್ಯದ ಬಳಿಕ ಸುದೀರ್ಘ ವಿರಾಮ ಸಿಕ್ಕಿರುವ ಕಾರಣ, ಆರ್ ಸಿಬಿ ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಉತ್ತಮ ತಯಾರಿ ಮಾಡಿಕೊಳ್ಳಬಹುದು.
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಅಂಗಳದಲ್ಲಿ ಕೆಕೆಆರ್ ಮತ್ತು ಆರ್ಸಿಬಿ 11 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಇದರಲ್ಲಿ 7 ಬಾರಿ ಕೆಕೆಆರ್ ಗೆದ್ದಿದ್ದರೆ, ಆರ್ ಸಿಬಿ 4 ಬಾರಿ ಮಾತ್ರ ಗೆಲುವು ಸಾಧಿಸಿದೆ. 2019ರ ಬಳಿಕ ಆರ್ಸಿಬಿ ಇಲ್ಲಿ ಪಂದ್ಯವನ್ನು ಗೆದ್ದಿಲ್ಲ, ಈ ಬಾರಿಯಾದರೂ ಗೆಲ್ಲುತ್ತಾ ಎಂದು ನೋಡಬೇಕಿದೆ.
ಆರ್ ಸಿಬಿ ಸಂಭಾವ್ಯ ಆಡುವ ಬಳಗ
ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ವಿಲ್ ಜ್ಯಾಕ್ಸ್, ರಜತ್ ಪಾಟಿದಾರ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್, ಕ್ಯಾಮೆರಾನ್ ಗ್ರೀನ್/ ರೀಸ್ ಟೊಪ್ಲಿ, ಯಶ್ ದಯಾಳ್, ವಿಜಯ್ಕುಮಾರ್ ವೈಶಾಖ್, ಮೊಹಮ್ಮದ್ ಸಿರಾಜ್, ಲಾಕಿ ಫರ್ಗ್ಯುಸನ್.












Click it and Unblock the Notifications