RCB: 2022ರ ಐಪಿಎಲ್ ಹರಾಜಿನಲ್ಲಿ ಮಾಡಿದ ಎಡವಟ್ಟಿಗೆ ಇಂದಿಗೂ ಬೆಲೆ ತೆರುತ್ತಿದೆ ಆರ್ಸಿಬಿ!
ಐಪಿಎಲ್ 2024ರ ಪಂದ್ಯಾವಳಿಯಲ್ಲಿ ಆರ್ಸಿಬಿ ಹೀನಾಯ ಪ್ರದರ್ಶನ ನೀಡಿದೆ. ಆಡಿರುವ ಆರು ಪಂದ್ಯಗಳಲ್ಲಿ ಒಂದು ಪಂದ್ಯದಲ್ಲಿ ಮಾತ್ರ ಗೆಲುವು ಸಾಧಿಸಿರುವ ಆರ್ಸಿಬಿ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.
ಆರ್ ಸಿಬಿ ತಂಡದ ಕೆಟ್ಟ ಪ್ರದರ್ಶನ ಇದೇ ವರ್ಷದಲ್ಲ ಕಳೆದ ವರ್ಷ ಕೂಡ ಪ್ಲೇ ಆಫ್ ತಲುಪುವಲ್ಲಿ ವಿಫಲವಾಗಿತ್ತು. ಬೌಲಿಂಗ್ ವಿಭಾಗವೇ ತಂಡದ ದೊಡ್ಡ ಸಮಸ್ಯೆಯಾಗಿದೆ. ಹರಾಜಿನಲ್ಲಿ ಉತ್ತಮ ಆಟಗಾರರನ್ನು ಆಯ್ಕೆ ಮಾಡದೇ ಇರುವುದು ಒಂದು ಸಮಸ್ಯೆಯಾದರೆ, ಉತ್ತಮ ಆಟಗಾರರನ್ನೇ ತಂಡದಿಂದ ಕಯಬಿಡುವುದು ತಂಡದ ಮತ್ತೊಂದು ದೊಡ್ಡ ಸಮಸ್ಯೆಯಾಗಿದೆ.

2022 ರ ಐಪಿಎಲ್ ಹರಾಜಿಗೆ ಮುನ್ನ ಆರ್ಸಿಬಿ ಮಾಡಿದ ಆ ಒಂದು ಎಡವಟ್ಟು ಇಂದಿಗೂ ತಂಡಕ್ಕೆ ದೊಡ್ಡ ಹೊಡೆತ ಕೊಟ್ಟಿದೆ, ಆ ವಿಚಾರದಲ್ಲಿ ಅಭಿಮಾನಿಗಳಿಗೂ ಇನ್ನೂ ಕೋಪ ಇದೆ. ಹೌದು, ಯುಜ್ವೇಂದ್ರ ಚಹಾಲ್ರನ್ನು ತಂಡದಿಂದ ಕೈಬಿಟ್ಟದ್ದು ಆರ್ಸಿಬಿ ಮಾಡಿದ ಮಹಾ ಎಡವಟ್ಟುಗಳಲ್ಲಿ ಒಂದಾಗಿದೆ.
ತಂಡದ ಪ್ರಮುಖ ಬೌಲರ್
ಚಿನ್ನಸ್ವಾಮಿ ಕ್ರೀಡಾಂಗಣದಂತಹ ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ ಕೂಡ ಆರ್ಸಿಬಿ ತಂಡಕ್ಕೆ ವಿಕೆಟ್ ತಂದುಕೊಡಬಲ್ಲ ಬೌಲರ್ ಯಾರಾದರೂ ಇದ್ದರೆ ಅದು ಚಹಾಲ್ ಆಗಿದ್ದರು. 2014ರಲ್ಲಿ ಆರ್ಸಿಬಿ ತಂಡವನ್ನು ಸೇರಿಕೊಂಡ ಅವರು, ಬರೋಬ್ಬರಿ ಎಂಟು ವರ್ಷಗಳ ಕಾಲ ತಂಡಕ್ಕಾಗಿ ಆಡಿದರು.
ಆರ್ಸಿಬಿಗೆ ವಿರಾಟ್ ಕೊಹ್ಲಿ ಮನೆ ಮಗನಾದರೆ, ಚಹಾಲ್ ದತ್ತು ಪುತ್ರ ಎಂದೇ ಕರೆಯಲಾಗುತ್ತಿತ್ತು. ಚಹಾಲ್ಗು ಕೂಡ ಆರ್ಸಿಬಿ ತಂಡ ಎಂದರೆ ಇಂದಿಗೂ ವಿಶೇಷ ಅಭಿಮಾನ ಇದೆ, ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ಕಪ್ ಗೆದ್ದಾಗ ಕನ್ನಡದಲ್ಲೇ ಟ್ವೀಟ್ ಮಾಡಿದ್ದು, ಅವರ ಅಭಿಮಾನಕ್ಕೆ ಸಾಕ್ಷಿಯಾಗಿದೆ.
2021 ರ ಐಪಿಎಲ್ನಲ್ಲಿ ಕೊನೆಯದಾಗಿ ಅವರು ಆರ್ಸಿಬಿ ಪರವಾಗಿ ಆಡಿದರು. 2022ರ ಐಪಿಎಲ್ ಹರಾಜಿಗೆ ಮುನ್ನ ಅವರನ್ನು ತಂಡದಿಂದ ಕೈಬಿಡಲಾಯಿತು. ಹರಾಜಿನಲ್ಲಿ ಮತ್ತೆ ತಂಡಕ್ಕೆ ಸೇರಿಸಿಕೊಳ್ಳುತ್ತಾರೆ ಎಂದೇ ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು, ಆದರೆ ಆರ್ಸಿಬಿ ಹರಾಜಿನಲ್ಲಿ ಚಹಾಲ್ಗಾಗಿ ಬಿಡ್ ಮಾಡಲೇ ಇಲ್ಲ, ರಾಜಸ್ಥಾನ ರಾಯಲ್ಸ್ ಅವರಿಗೆ ₹6.5 ಕೋಟಿ ನೀಡಿ ಖರೀದಿ ಮಾಡಿತು.
ಚಹಾಲ್ರನ್ನು ಬಿಟ್ಟ ಆರ್ಸಿಬಿ ಶ್ರೀಲಂಕಾದ ವನಿಂದು ಹಸರಂಗ ಅವರಿಗೆ ಬರೋಬ್ಬರಿ ₹10.75 ನೀಡಿ ಖರೀದಿ ಮಾಡಿತು. ಎರಡು ವರ್ಷ ಆರ್ ಸಿಬಿ ಪರವಾಗಿ ಆಡಿದರು ಅಂದುಕೊಳ್ಳುವ ಪ್ರದರ್ಶನ ಬರಲಿಲ್ಲ, ಈ ವರ್ಷದ ಹರಾಜಿನಲ್ಲಿ ಅವರನ್ನೂ ತಂಡದಿಂದ ಬಿಡುಗಡೆ ಮಾಡಿತು.
ಹರಾಜಿನ ಸಂದರ್ಭದಲ್ಲೇ ತಂಡದಲ್ಲಿ ಉತ್ತಮ ಸ್ಪಿನ್ ಬೌಲರ್ ಕೊರತೆ ಇದೆ ಎಂದು ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಹೇಳಿದ್ದರು. ಸದ್ಯ ನಡೆಯುತ್ತಿರುವ ಐಪಿಎಲ್ನಲ್ಲಿ ಆ ಕೊರತೆ ಎದ್ದು ಕಾಣುತ್ತಿದೆ. ಎಲ್ಲಾ ತಂಡಗಳಲ್ಲಿ ಅತ್ಯುತ್ತಮ ಸ್ಪಿನ್ನರ್ ಗಳು ಇದ್ದರೆ, ಆರ್ ಸಿಬಿಗೆ ಅಂತವ ಬೌಲರ್ ಇಲ್ಲ.
ಮುಖ್ಯವಾಗಿ ರಾಜಸ್ಥಾನ ರಾಯಲ್ಸ್ ಸೇರಿದ ಚಹಾಲ್ ಅದ್ಭುತ ಪ್ರದರ್ಶನ ಮುಂದುವರೆಸಿದ್ದಾರೆ. 2022ರ ಐಪಿಎಲ್ನಲ್ಲಿ ಅವರು 27 ವಿಕೆಟ್ ಪಡೆದೆರೆ, 2023 ರ ಐಪಿಎಲ್ನಲ್ಲಿ 21 ವಿಕೆಟ್ ಪಡೆದಿದ್ದರು. ಐಪಿಎಲ್ 2024ರಲ್ಲಿ ಈಗಾಗಲೇ 11 ವಿಕೆಟ್ ಪಡೆದಿದ್ದು ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದಾರೆ.
ರಾಜಸ್ಥಾನ ರಾಯಲ್ಸ್ನ ಫಿನಿಷರ್ ಆಗಿರುವ ಶಿಮ್ರಾನ್ ಹೆಟ್ಮೆಯರ್ ಕೂಡ ಆರ್ಸಿಬಿ ಮಾಜಿ ಆಟಗಾರ. 2019ರಲ್ಲಿ ಅವರು ಆರ್ ಸಿಬಿ ಪರವಾಗಿ ಆಡಿದ್ದರು ಬಳಿಕ ಆರ್ಸಿಬಿ ಅವರನ್ನು ಬಿಡುಗಡೆ ಮಾಡಿತ್ತು.












Click it and Unblock the Notifications