Ranji Trophy: ಕ್ವಾರ್ಟರ್ ಫೈನಲ್ನಲ್ಲಿ ಕರ್ನಾಟಕ ತಂಡಕ್ಕೆ ವಿದರ್ಭ ಸವಾಲು
ಣಜಿ ಟ್ರೋಫಿ ಪಂದ್ಯಾವಳಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗಿದ್ದು, ಕರ್ನಾಟಕ ತಂಡ ಸಿ ಗುಂಪಿನ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಎಂಟರ ಘಟ್ಟಕ್ಕೆ ಪ್ರವೇಶ ಪಡೆದುಕೊಂಡಿದೆ.
ಕರ್ನಾಟಕ, ವಿದರ್ಭ, ತಮಿಳುನಾಡು, ಸೌರಾಷ್ಟ್ರ, ಮುಂಬೈ, ಬರೋಡಾ, ಮಧ್ಯ ಪ್ರದೇಶ ಮತ್ತು ಆಂಧ್ರ ತಂಡಗಳು ಕ್ವಾರ್ಟರ್ ಫೈನಲ್ಗೆ ಅರ್ಹತೆ ಪಡೆದುಕೊಂಡಿವೆ. ನಾಲ್ಕು ಪಂದ್ಯಗಳು ಫೆಬ್ರವರಿ 23ರಿಂದ ಆರಂಭವಾಗಲಿವೆ.
ಕರ್ನಾಟಕ ತಂಡ ಎಂಟರ ಘಟ್ಟದಲ್ಲಿ ವಿದರ್ಭ ತಂಡವನ್ನು ಎದುರಿಸಲಿದೆ. ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಫೆಬ್ರವರಿ 23ರಿಂದ ಈ ಪಂದ್ಯ ಆರಂಭವಾಗಲಿದೆ.

ವಿದರ್ಭ ತಂಡ ಆಡಿರುವ 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ಒಂದು ಪಂದ್ಯ ಸೋತು, ಒಂದು ಪಂದ್ಯ ಡ್ರಾ ಮಾಡಿಕೊಂಡು 33 ಅಂಕಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಕ್ವಾರ್ಟರ್ ಫೈನಲ್ಗೆ ಪ್ರವೇಶ ಪಡೆದುಕೊಂಡಿದೆ.
ಸಿ ಗುಂಪಿನಲ್ಲಿದ್ದ ಕರ್ನಾಟಕ ತಂಡ 7 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಗೆದ್ದು, 1 ಪಂದ್ಯದಲ್ಲಿ ಸೋತು, 2 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. 27 ಅಂಕಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನದೊಂದಿಗೆ ಕ್ವಾರ್ಟರ್ ಫೈನಲ್ಗೆ ಅರ್ಹತೆ ಪಡೆದುಕೊಂಡಿತು.
ಬಲಿಷ್ಠ ಎದುರಾಳಿ
ಅತ್ಯುತ್ತಮ ಪ್ರದರ್ಶನ ನೀಡಿರುವ ವಿದರ್ಭ ತಂಡವನ್ನು ಅವರದ್ದೇ ತವರಿನ ಅಂಗಳದಲ್ಲಿ ಕರ್ನಾಟಕ ತಂಡ ಎದುರಿಸುತ್ತಿದ್ದು ದೊಡ್ಡ ಸವಾಲು ಮುಂದಿದೆ. ಆದರೆ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಕರ್ನಾಟಕ ವಿದರ್ಭ ವಿರುದ್ಧ ಗೆದ್ದು ಸೆಮಿಫೈನಲ್ ತಲುಪುವ ವಿಶ್ವಾಸದಲ್ಲಿದೆ.
ದೇವದತ್ ಪಡಿಕ್ಕಲ್ ಸದ್ಯ ಭಾರತ ತಂಡಕ್ಕೆ ಆಯ್ಕೆಯಾಗಿದ್ದು, ಅವರು ಕರ್ನಾಟಕ ತಂಡಕ್ಕೆ ಮರಳುವ ಸಾಧ್ಯತೆ ಕಡಿಮೆ ಇರುವುದರಿಂದ ಬ್ಯಾಟಿಂಗ್ ವಿಭಾಗದಲ್ಲಿ ರಾಜ್ಯಕ್ಕೆ ಅಲ್ಪ ಹಿನ್ನಡೆಯಾಗಿದೆ.
ಆದರೆ, ಚಂಡೀಗಢ ವಿರುದ್ಧದ ಪಂದ್ಯದಲ್ಲಿ ನಾಯಕ ಮಯಾಂಕ್ ಅಗರ್ವಾಲ್ ಮತ್ತು ಹಾರ್ದಿಕ್ ರಾಜ್ ಅರ್ಧಶತಕ ಗಳಿಸಿದ್ದು, ಮನೀಶ್ ಪಾಂಡೆ, ಎಸ್ ಶರತ್ ಮತ್ತು ವಿಜಯ್ ಕುಮಾರ್ ವೈಶಾಖ್ ಶತಕ ಗಳಿಸಿರುವುದು ಬ್ಯಾಟಿಂಗ್ ವಿಭಾಗದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ವಿದರ್ಭ ವಿರುದ್ಧ ಕೂಡ ಈ ಬ್ಯಾಟಿಂಗ್ ಪಡೆ ಮಿಂಚಿದರೆ ಕರ್ನಾಟಕ ಮೇಲುಗೈ ಸಾಧಿಸಲು ಸಹಾಯವಾಗಲಿದೆ.
ಫೆಬ್ರವರಿ 23ರಂದು ಬೆಳಗ್ಗೆ 9.30ಕ್ಕೆ ಪಂದ್ಯ ಆರಂಭವಾಗಲಿದೆ. ಜಿಯೋ ಸಿನಿಮಾದಲ್ಲಿ ಕ್ವಾರ್ಟರ್ ಫೈನಲ್ ಪಂದ್ಯಗಳ ನೇರಪ್ರಸಾರವನ್ನು ವೀಕ್ಷಿಸಬಹುದು.












Click it and Unblock the Notifications